ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ‘ರಾಧೇ– ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಗೆ ಸೇರಿದೆ. ಈದ್ ಸಮಯದಲ್ಲಿಯೇ ಇದು ಬಿಡುಗಡೆಯಾಗಬೇಕಿತ್ತು.ಲಾಕ್ಡೌನ್ನಿಂದಾಗಿ ತೆರೆ ಕಾಣಲಿಲ್ಲ. ‘ರಾಧೇ’ ಸಿನಿಮಾ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹೊರಬಿದ್ದಿದೆ.
ಇದರಲ್ಲಿ ದಿಶಾ ಪಟಾನಿ ಜೊತೆಗೆ ಸಲ್ಮಾನ್ ಖಾನ್ ಹಾಡಿನ ಚಿತ್ರೀಕರಣವಷ್ಟೇ ಬಾಕಿಯಿದೆ. ಪಶ್ಚಿಮ ಏಷ್ಯಾದ ದೇಶ ಅಜರ್ ಬೈಜಾನ್ನಲ್ಲಿ ಈ ಹಾಡಿನ ಚಿತ್ರೀಕರಣಕ್ಕೆ ನಿರ್ಧರಿಸಲಾಗಿತ್ತು. ಈಗ ವಿದೇಶಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಸ್ಟುಡಿಯೊದಲ್ಲಿಯೇ ಸೆಟ್ ಹಾಕಿ ಚಿತ್ರೀಕರಿಸಲು ತೀರ್ಮಾನಿಸಲಾಗಿದೆ. ಇದರ ಹೊರತಾಗಿ ಕೆಲವು ಸಣ್ಣಪುಟ್ಟ ದೃಶ್ಯಗಳ ಚಿತ್ರೀಕರಣವಷ್ಟೇ ಬಾಕಿಯಿದೆಯಂತೆ. ಹಾಗಾಗಿ, ಪೋಸ್ಟ್ ಪ್ರೊಡಕ್ಷನ್ ಕೆಲಸ ಪೂರೈಸಿಕೊಂಡು ದೀಪಾವಳಿಗೆ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ. ಈ ಚಿತ್ರ ನಿರ್ದೇಶಿಸಿರುವುದು ಪ್ರಭುದೇವ. ಜಾಕಿ ಶ್ರಾಫ್ ಹಾಗೂ ರಣದೀಪ್ ಹೂಡ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.
ದೀಪಾವಳಿಗೆ ನಟ ಅಕ್ಷಯ್ ಕುಮಾರ್ ನಟನೆಯ ‘ಪೃಥ್ವಿರಾಜ್’ ಸಿನಿಮಾದ ಬಿಡುಗಡೆಗೆ ಚಿತ್ರಕ್ಕೆ ಬಂಡವಾಳ ಹೂಡಿರುವ ಯಶ್ರಾಜ್ ಫಿಲ್ಮ್ಸ್ ನಿರ್ಧರಿಸಿದೆ. ಈ ಚಿತ್ರದ ಹೊರಾಂಗಣ ಚಿತ್ರೀಕರಣವನ್ನು ಸ್ಥಗಿತಗೊಳಿಸಿ, ಸ್ಟುಡಿಯೊದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಮಲ್ಪಿಫ್ಲೆಕ್ಸ್, ಥಿಯೇಟರ್ಗಳು ಆರಂಭವಾದರೆ ದೀಪಾವಳಿಗೆ ಚಿತ್ರ ಬಿಡುಗಡೆ ಮಾಡುವುದು ನಿರ್ಮಾಪಕರ ಯೋಜನೆ.
‘ರಾಧೇ’ ಚಿತ್ರವೂ ದೀಪಾವಳಿಗೆ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಹಾಗಾಗಿ, ಬಾಲಿವುಡ್ನ ಸ್ಟಾರ್ ನಟರ ಸಿನಿಮಾಗಳ ನಡುವೆ ಬಾಕ್ಸ್ಆಫೀಸ್ನಲ್ಲಿ ಪೈಪೋಟಿಏರ್ಪಡುವ ಸಾಧ್ಯತೆಯಿದೆ.
ಮತ್ತೊಂದೆಡೆ ಅಕ್ಷಯ್ ಕುಮಾರ್ ನಟನೆಯ ‘ಲಕ್ಷ್ಮಿ ಬಾಂಬ್’ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಬಗ್ಗೆಯೂ ಸುದ್ದಿ ಹರಿದಾಡುತ್ತಿದೆ.
‘ರಾಧೇ’ ಚಿತ್ರದ ಬಳಿಕ ಸಲ್ಮಾನ್ ‘ಕಭೀ ಈದ್ ಕಭೀ ದೀವಾಳಿ’ ಚಿತ್ರದಲ್ಲಿ ನಟಿಸಲಿದ್ದಾರೆ. ಇದರಲ್ಲಿ ಸಲ್ಮಾನ್ಗೆ ಪೂಜಾ ಹೆಗ್ಡೆ ನಾಯಕಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.