ಬೆಂಗಳೂರು: ನಟ, ನಿರ್ದೇಶಕ ದುನಿಯಾ ವಿಜಯ್ ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ಈ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಅಭಿಮಾನಿಗಳಿಗೆ ನಮಸ್ಕಾರ. ಕೋವಿಡ್ ಹಿನ್ನೆಲೆಯಲ್ಲಿ ಇಡೀ ಜಗತ್ತು ಸಂಕಷ್ಟದಲ್ಲಿರುವ ಸಮಯವಿದು. ಇಂತಹ ಸಮಯದಲ್ಲಿ ನನಗೊಂದು ಅಭೂತಪೂರ್ವ ಗೆಲುವನ್ನು ನೀವೆಲ್ಲರೂ ಕೊಟ್ಟಿದ್ದೀರಿ. ಇಂತಹ ಹೊತ್ತಿನಲ್ಲಿ ನನ್ನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂಬ ಆಸೆ ನಿಮಗೆ ಇದೆ ಎಂಬುದು ನನಗೆ ಗೊತ್ತು. ನಾನು ಸಹ ನಿಮ್ಮನ್ನೆಲ್ಲಾ ನನ್ನ ಹುಟ್ಟುಹಬ್ಬದ ದಿನ ಭೇಟಿಯಾಗಬೇಕು ಎಂದುಕೊಂಡಿದ್ದೆ.
ಕಳೆದ ನಾಲ್ಕು ದಶಕಗಳಿಂದ ನನ್ನನ್ನು ಸಾಕಿ ಸಲಹಿದ ನನ್ನಮ್ಮ, ಅಪ್ಪ ಈ ವರ್ಷ ವಿಧಿಯಾಟಕ್ಕೆ ಬಲಿಯಾದರು. ಹಾಗೂ ಆತ್ಮೀಯರಾದ ಪುನೀತ್ ರಾಜ್ ಕುಮಾರ್ ಸಹ ನಮ್ಮನ್ನೆಲ್ಲಾ ಬಿಟ್ಟು ಹೋದರು. ಈ ನೋವುಗಳನ್ನು ಇಟ್ಟುಕೊಂಡು ನಾನು ಹುಟ್ಟು ಹಬ್ಬವನ್ನು ಹೇಗೆ ಸಂಭ್ರಮಿಸಲಿ. ಜತೆಗೆ ಕೋವಿಡ್ ಪ್ರಕರಣಗಳು ಕೂಡ ದಿನೇ ದಿನೇ ಹೆಚ್ಚಾಗುತ್ತಿವೆ. ನಿಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಮತ್ತು ನನಗೆ ಅಪ್ಪ, ಅಮ್ಮ, ಅಪ್ಪು ಅವರನ್ನು ಕಳೆದುಕೊಂಡ ನೋವು ಕಾಡುತ್ತಿರುವುದರಿಂದ ಈ ವರ್ಷ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹುಟ್ಟುಹಬ್ಬದ ದಿನ ನಾನು ಮನೆಯಲ್ಲಿ ಇರುವುದಿಲ್ಲ. ಹಾಗಾಗಿ ಯಾರೂ ಮನೆಯ ಬಳಿ ಬರುವುದು ಬೇಡ. ನೀವು ಇರುವ ಕಡೆಯಿಂದಲೇ ನನಗೆ ಹಾರೈಸಿ. ಅಪ್ಪ ಅಮ್ಮನನ್ನು ಕಳೆದುಕೊಂಡ ನನಗೆ ನನ್ನ ಅಭಿಮಾನಿಗಳೆ ಅಪ್ಪ–ಅಮ್ಮ ಎಲ್ಲವೂ. ಹಾಗಾಗಿ ನಿಮ್ಮ ಹಾರೈಕೆ ಆಶೀರ್ವಾದ ಎರಡು ನನ್ನ ಮೇಲಿರಲಿ. ಧನ್ಯವಾದಗಳೊಂದಿಗೆ ನಿಮ್ಮವ ದುನಿಯಾ ವಿಜಯ್...’ ಎಂದು ಬರೆದುಕೊಂಡಿದ್ದಾರೆ.
ಕಳೆದ ವರ್ಷ ದುನಿಯ್ ವಿಜಯ್ ಅವರು ‘ಸಲಗ’ ಸಿನಿಮಾ ಮೂಲಕ ನಿರ್ದೇಶಕನಾಗಿಯೂ ಸೈ ಎನಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.