ನಟ ಶಿವರಾಜ್ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಬಿಡುಗಡೆಗೆ ಸಿದ್ಧವಾಗುತ್ತಿದ್ದರೆ, ಅವರ ನಟನೆಯ 124ನೇ ಚಿತ್ರ ‘ನೀ ಸಿಗೋವರೆಗೂ’ ಚಿತ್ರದ ಒಂದು ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಶಿವರಾಜ್ಕುಮಾರ್ ಅವರ 125ನೇ ಚಿತ್ರ ‘ವೇದ’ದ ಚಿತ್ರೀಕರಣವೂ ಭರದಿಂದ ಸಾಗಿದೆ. ಈ ನಡುವೆ ಮತ್ತೆರಡು ಚಿತ್ರಗಳನ್ನು ಶಿವರಾಜ್ಕುಮಾರ್ ಒಪ್ಪಿದ್ದಾರೆ.
ಇತ್ತೀಚೆಗಷ್ಟೇ ಬಿಂದ್ಯಾ ಮೂವೀಸ್ನ ನೂತನ ಪ್ರೊಜೆಕ್ಟ್, ಆರ್. ಜಯರಾಂ(ಆರ್. ಜೈ) ನಿರ್ದೇಶನದ ಸಿನಿಮಾಗೆಶಿವರಾಜ್ಕುಮಾರ್ ಹಸಿರು ನಿಶಾನೆ ನೀಡಿದ್ದರು. ‘ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, 1970ರ ಕಾಲಘಟ್ಟದಲ್ಲಿ ನಡೆಯುವ ರೆಟ್ರೊ ಶೈಲಿಯ ಕಥೆಯನ್ನು ಹೊಂದಿದೆ. ಶೀಘ್ರದಲ್ಲೇ ಮೋಷನ್ ಪೋಸ್ಟರ್ ಬಿಡುಗಡೆ ಹಾಗೂ ಅದ್ಧೂರಿ ಮುಹೂರ್ತ ಸಮಾರಂಭ ನಡೆಯಲಿದೆ’ ಎಂದು ನಿರ್ದೇಶಕ ಆರ್.ಜೈ ಇತ್ತೀಚೆಗೆ ತಿಳಿಸಿದ್ದರು.
ಇದರ ಬೆನ್ನಲ್ಲೇ ಸಂದೇಶ್ ಪ್ರೊಡಕ್ಷನ್ಸ್ನ ನೂತನ ಚಿತ್ರಕ್ಕೂ ಶಿವರಾಜಕುಮಾರ್ ಕಾಲ್ಶೀಟ್ ನೀಡಿದ್ದಾರೆ. ಸಂದೇಶ್ ನಾಗರಾಜ್ ಅರ್ಪಿಸುವ ಈ ಚಿತ್ರವನ್ನು ಸಂದೇಶ್ ಎನ್. ನಿರ್ಮಿಸುತ್ತಿದ್ದಾರೆ. ಶಿವರಾಜ್ಕುಮಾರ್ ನಟಿಸಿದ್ದ ‘ಸಮರ’ ಚಿತ್ರದ ಮುಖಾಂತರ ನಿರ್ದೇಶಕರಾಗಿದ್ದ ಚಿ. ಗುರುದತ್ ಅವರೇ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ‘ಚಿತ್ರದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಲಾಗುವುದು’ ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.