ADVERTISEMENT

ತೆರೆಯಲ್ಲಿ ಹೊಸಬರ ಆಟ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 0:01 IST
Last Updated 19 ಏಪ್ರಿಲ್ 2024, 0:01 IST
ರಚನಾ, ಗೌತಮ್ 
ರಚನಾ, ಗೌತಮ್    

ಬೇಸಿಗೆ ರಜೆ, ಐಪಿಎಲ್‌, ಚುನಾವಣೆ ಹಿನ್ನೆಲೆಯಲ್ಲಿ ಚಂದನವನದ ತೆರೆಗಳಲ್ಲಿ ಸ್ಟಾರ್‌ ನಟರ ಸಿನಿಮಾಗಳ ಸಂಖ್ಯೆ ಇಳಿಕೆಯಾಗಿದೆ. ಈ ಅವಕಾಶ ಬಳಸಿಕೊಂಡಿರುವ ಹೊಸಬರು ತಮ್ಮ ಸಿನಿಮಾಗಳನ್ನು ತೆರೆಗೆ ತರುತ್ತಿದ್ದಾರೆ. ಇಂದು(ಏ.19) ಬಹುತೇಕ ಹೊಸಬರ ಸಿನಿಮಾಗಳೇ ತೆರೆಕಾಣುತ್ತಿದೆ.  

‘O2’: ಪಿಆರ್‌ಕೆ ಪ್ರೊಡಕ್ಷನ್ಸ್‌ ನಿರ್ಮಾಣದ, ಆಶಿಕಾ ರಂಗನಾಥ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಇದಾಗಿದೆ. ರಾಘವ್ ನಾಯಕ್ ಹಾಗೂ ಪ್ರಶಾಂತ್ ರಾಜ್ ರಚಿಸಿ, ನಿರ್ದೇಶಿಸಿರುವ ಈ ಸಿನಿಮಾ ಮೆಡಿಕಲ್ ಥ್ರಿಲ್ಲರ್‌ ಜಾನರ್‌ನಲ್ಲಿದೆ. ಪಿಆರ್‌ಕೆ ಬ್ಯಾನರ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ನಿರ್ಮಾಣದ ಹತ್ತನೇ ಚಿತ್ರ ಇದಾಗಿದ್ದು, ಪ್ರವೀಣ್ ತೇಜ್, ರಾಘವ್ ನಾಯಕ್, ಸಿರಿ ರವಿಕುಮಾರ್, ಪ್ರಕಾಶ್ ಬೆಳವಾಡಿ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಸಾಯುತ್ತಿರುವವರನ್ನು ಬದುಕಿಸುವುದೇ ವೈದ್ಯರ ಆದ್ಯ ಕರ್ತವ್ಯ ಎಂದು ನಂಬುವ ‘ಶ್ರದ್ಧಾ’ (ಆಶಿಕಾ ರಂಗನಾಥ್), ಸಂಶೋಧನೆ ನಡೆಸಿ ‘O2’ ಎಂಬ ಔಷಧದ ಮೂಲಕ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವವರನ್ನು ಬದುಕಿಸುವ ಪ್ರಯತ್ನಕ್ಕೆ ಮುಂದಾಗುತ್ತಾಳೆ. ಎಲ್ಲಾ ಅಡೆತಡೆಗಳನ್ನು ಮೀರಿ ಗುರಿ ತಲುಪಲು ಶ್ರದ್ಧಾಳಿಗೆ ಸಾಧ್ಯವೇ ಎನ್ನುವುದು ಚಿತ್ರದ ಕಥೆಯಾಗಿದೆ. 

ಚಿರತೆ ಬಂತು ಚಿರತೆ: ಜೆ.ಆರ್.ಕೆ. ವಿಷನ್ಸ್ ಸಂಸ್ಥೆಯ ಜಗದೀಶ್ ಮಲ್ನಾಡ್ ನಿರ್ಮಾಣದ ಮತ್ತು ಸಿ.ಆರ್.ಕೃಷ್ಣಮೂರ್ತಿ (ಬೆನಕ ಕಿಟ್ಟಿ) ನಿರ್ದೇಶನದ ಚಿತ್ರವಿದು. ಈಗಾಗಲೇ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನ ಕಂಡು ಪ್ರಶಸ್ತಿ ಪಡೆದಿದೆ. ಮಾನವ ಪ್ರಾಣಿ ಸಂಘರ್ಷ, ಸಹಬಾಳ್ವೆ, ವನ್ಯಜೀವಿ ಸಂರಕ್ಷಣೆ, ಪರಸ್ಪರಾವಲಂಬನೆ ಮುಂತಾದ ವಿಷಯಗಳು ಸಿನಿಮಾದಲ್ಲಿದೆ. 

ADVERTISEMENT

ನಾಲ್ಕನೇ ಆಯಾಮ: ‘ಪ್ರೇಮಗೀಮ ಜಾನೆದೋ’ ಚಿತ್ರದ ಮೂಲಕ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಗೌತಮ್ ನಿರ್ದೇಶನದ ಸಿನಿಮಾ ಇದಾಗಿದೆ. ಅವರೇ ನಾಯಕನಾಗಿ ನಟಿಸಿದ್ದಾರೆ. ‘ಲವ್‌ 360’ ಖ್ಯಾತಿಯ ರಚನಾ ಇಂದರ್ ಚಿತ್ರದ ನಾಯಕಿ. ನಟ ಮಾಸ್ಟರ್ ಆನಂದ್ ಮಗಳು ಅಂಜನಿ ವಂಶಿಕಾ ಕಶ್ಯಪ್, ಅಮಿತ್ ಗೌಡ, ಯಶಸ್ವಿನಿ ಎಂ., ವಿನ್ಸೆಂಟ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತವಿದೆ. ಅರುಣ್ ಛಾಯಾಚಿತ್ರಗ್ರಹಣ, ಉಗ್ರಂ ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ. 

ಸಾಮ್ರಾಟ್ ಮಾಂಧಾತ: ಹೇಮಂತ್ ಪ್ರೊಡಕ್ಷನ್ಸ್ ಮೂಲಕ ಹೇಮಂತ್ ಕುಮಾರ್ ನಿರ್ಮಾಣ‌ ಹಾಗೂ ನಿರ್ದೇಶನ ಮಾಡಿರುವ ಸಿನಿಮಾ ಇದು. ಯುವನಾಶ್ವ ಮಹಾರಾಜನ ಮಗನಾದ ಮಾಂಧಾತನ ಕಥೆಯನ್ನು ಚಿತ್ರದ ಮೂಲಕ ಹೇಮಂತ್ ಹೇಳಿದ್ದಾರೆ. 
ಈ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲರೂ ರಂಗಭೂಮಿ ಕಲಾವಿದರಾಗಿದ್ದು, ‘ಮಾಂಧಾತ’ನಾಗಿ ರಂಗಭೂಮಿ ಕಲಾವಿದ ಬಸವರಾಜು ನಟಿಸಿದ್ದಾರೆ. ಸುಂದರಬಾಬು, ಭಾರತಿ, ನಂಜುಂಡಪ್ಪ, ನರಸಿಂಹಮೂರ್ತಿ, ಮಂಜುನಾಥ ತಾರಾಬಳಗದಲ್ಲಿದ್ದಾರೆ. 

ಪುಕ್ಸಟ್ಟೆ ಪೈಸ: ‘ಇಂಚರ ಪಿಕ್ಚರ್ಸ್’ ಬ್ಯಾನರಿನಲ್ಲಿ ಮಧುಸೂಧನ ಎ. ಎಸ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಅವರೇ ಆ್ಯಕ್ಷನ್‌ ಕಟ್‌ ಹೇಳಿದ್ದು, ಭರತ್ ಶೆಟ್ಟಿ, ಅಕ್ಷತಾ ಕುಕಿ, ಮಹೇಶ್ ಬಾಬು, ಸಯ್ಯದ್, ರಕ್ಷಿತಾ ಮಲ್ಲಿಕಾರ್ಜುನ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಇದೊಂದು ಕಾಮಿಡಿ, ಥ್ರಿಲ್ಲರ್ ಶೈಲಿಯ ಸಿನಿಮಾವಾಗಿದ್ದು, ಪುಕ್ಸಟ್ಟೆ ಹಣದ ಮೇಲಿನ ಆಸೆಯಿಂದ ಅದರ ಹಿಂದೆ ಬಿದ್ದವರ ಒದ್ದಾಟ, ಪರದಾಟ ಚಿತ್ರದ ಕಥಾಹಂದರ ಎಂದಿದೆ ಚಿತ್ರತಂಡ. 

ಆಶಿಕಾ ರಂಗನಾಥ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.