ನಟ ಶಿವರಾಜ್ಕುಮಾರ್ ಅವರು ನಾಯಕನಾಗಿ ನಟಿಸಲಿರುವ ಸಂದೇಶ್ ಪ್ರೊಡಕ್ಷನ್ಸ್ನ ನೂತನ ಚಿತ್ರವನ್ನು ಚಿ.ಗುರುದತ್ ನಿರ್ದೇಶಿಸಲಿದ್ದಾರೆ ಎನ್ನುವ ಮಾಹಿತಿಯನ್ನು ಕೆಲ ತಿಂಗಳ ಹಿಂದಷ್ಟೇ ಚಿತ್ರತಂಡ ನೀಡಿತ್ತು. ಹೊಸ ಸುದ್ದಿ ಏನೆಂದರೆ ಇದೀಗ ಗುರುದತ್ ಅವರ ಬದಲಾಗಿ, ‘ಬೀರ್ ಬಲ್’, ‘ಓಲ್ಡ್ ಮಾಂಕ್’ ಸಿನಿಮಾ ಖ್ಯಾತಿಯ ನಟ ಶ್ರೀನಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರಕ್ಕೆ ‘ಗೋಸ್ಟ್’ ಎನ್ನುವ ಶೀರ್ಷಿಕೆಯನ್ನು ಇಡಲಾಗಿದೆ.
ಚಿತ್ರದ ಕಥೆಯನ್ನು ಶ್ರೀನಿ ಅವರೇ ಬರೆದಿದ್ದು, ಉಳಿದ ಕಲಾವಿದರ ಹಾಗೂ ತಂತ್ರಜ್ಞರ ಆಯ್ಕೆ ನಡೆಯುತ್ತಿದೆ ಎಂದು ಚಿತ್ರತಂಡವು ತಿಳಿಸಿದೆ. ಒಂದೆರಡು ತಿಂಗಳಲ್ಲಿ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ. ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ.
ಸದ್ಯಕ್ಕೆ ಶಿವರಾಜ್ಕುಮಾರ್ ಅವರು ತಮ್ಮ 125ನೇ ಚಿತ್ರ ‘ವೇದ’ದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಶಿವರಾಜ್ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಬಿಡುಗಡೆಗೆ ಸಜ್ಜಾಗಿದೆ. ಅವರ ನಟನೆಯ 124ನೇ ಚಿತ್ರ ‘ನೀ ಸಿಗೋವರೆಗೂ’ ಚಿತ್ರದ ಒಂದು ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಇದರ ಜೊತೆಗೆ ಬಿಂದ್ಯಾ ಮೂವೀಸ್ನ ನೂತನ ಪ್ರೊಜೆಕ್ಟ್, ಆರ್. ಜಯರಾಂ(ಆರ್. ಜೈ) ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾಗೂ ಶಿವರಾಜ್ಕುಮಾರ್ ಹಸಿರು ನಿಶಾನೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.