ಬಾಲಿವುಡ್ನ ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ ಕನ್ನಡದಲ್ಲಿ ಹಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ರವಿಚಂದ್ರನ್ ಪ್ರಮುಖ ಪಾತ್ರದಲ್ಲಿರುವ ಇನ್ನೂ ಹೆಸರಿಡದ ಚಿತ್ರದ ಹಾಡೊಂದಕ್ಕೆ ಶ್ರೇಯಾ ಧ್ವನಿಯಾಗಿದ್ದಾರೆ. ‘ಒಂದೇ ಮಾತಲ್ಲಿ ಹೇಳೋದಾದರೆ’ ಎಂಬ ಗೀತೆ ಇತ್ತೀಚೆಗಷ್ಟೇ ಧ್ವನಿಮುದ್ರಣಗೊಂಡಿದೆ.
ಈ ಗೀತೆಗೆ ಪಳನಿ ಡಿ.ಸೇನಾಪತಿ ಸಂಗೀತ ನಿರ್ದೇಶನವಿದ್ದು, ಕವಿರಾಜ್ ಸಾಹಿತ್ಯವಿದೆ. ಈ ಚಿತ್ರಕ್ಕೆ ಎಸ್.ಸುಪ್ರೀತ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಎಸ್.ಎಂ.ಪ್ರೊಡಕ್ಷನ್ಸ್ ಮೂಲಕ ಹೆಚ್.ಎಸ್.ನಾಗಶ್ರೀ ಬಂಡವಾಳ ಹೂಡಿದ್ದಾರೆ.
‘ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಪ್ರೀತಿ, ಪ್ರೇಮದ ಕಥೆಯ ಜೊತೆಗೆ ತಂದೆ ಮಗಳ ನಡುವಿನ ಭಾವನಾತ್ಮಕ ಸಂಬಂಧವನ್ನೂ ತೆರೆದಿಡುವಂಥ ಕಥೆಯಿದೆ. ಕಾಶ್ಮೀರ, ರಾಜಸ್ಥಾನ, ಅಂಡಮಾನ್ ದ್ವೀಪ, ಮಂಗಳೂರು, ಚಿಕ್ಕಮಗಳೂರು, ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತ ಈಗಾಗಲೇ 70 ದಿನಗಳು ಚಿತ್ರೀಕರಣ ನಡೆಸಲಾಗಿದೆ. 15 ದಿನಗಳು ವಿದೇಶದಲ್ಲಿ ಪ್ರಮುಖ ಭಾಗದ ಚಿತ್ರೀಕರಣ ನಡೆಸುವ ಯೋಜನೆಯಿದೆ’ ಎನ್ನುತ್ತಾರೆ ನಿರ್ದೇಶಕರು.
ಕೆ.ಎಸ್. ಚಂದ್ರಶೇಖರ್ ಛಾಯಾಚಿತ್ರಗ್ರಹಣವಿದೆ. ಸೋನು ನಿಗಮ್, ಕುನಾಲ್ ಗಾಂಜಾವಾಲ, ವಿಜಯಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಪಲಕ್ ಮಚ್ಚಲ್ ಕೂಡ ಈ ಚಿತ್ರದಲ್ಲಿ ಹಾಡಿದ್ದಾರೆ. ನಟ ಶ್ರೀನಿವಾಸಮೂರ್ತಿ, ವಿಜಯ ಸೂರ್ಯ, ಶಂಕರ್ ಅಶ್ವಥ್ ಉಳಿದ ಪಾತ್ರವರ್ಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.