‘ಬೊಮ್ಮರಿಲ್ಲು’ ಖ್ಯಾತಿಯ ನಟ ಸಿದ್ಧಾರ್ಥ್ 8 ವರ್ಷಗಳ ಬಳಿಕ ತೆಲುಗು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಅಜಯ್ ಭೂಪತಿ ನಿರ್ದೇಶನದ, ಶರವಾನಂದ್ ನಟನೆಯ ‘ಮಹಾ ಸಮುದ್ರಂ’ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಸಿದ್ಧಾರ್ಥ್.
ಇಷ್ಟು ದಿನಗಳ ಕಾಲ ಹಿಂದಿ, ತಮಿಳು, ಮಲೆಯಾಳಂ ಚಿತ್ರಗಳಲ್ಲಿ ನಟಿಸುತ್ತಾ, ಸಿನಿಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದ ಸಿದ್ಧಾರ್ಥ್ ಮರಳಿ ತೆಲುಗಿನಲ್ಲಿ ನಟಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ತಿಂಗಳಲ್ಲಿ ಶೂಟಿಂಗ್ ಆರಂಭಿಸುವ ನಿರೀಕ್ಷೆಯಲ್ಲಿದ್ದಾರೆ ಈ ಚಾಕೊಲೇಟ್ ಬಾಯ್.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಿದ್ಧಾರ್ಥ್ ‘8 ವರ್ಷಗಳ ನಂತರ ‘ಮಹಾಸಮುದ್ರಂ’ ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಖುಷಿ ಇದೆ. ನಾನು ಮರಳಿ ಬರುತ್ತಿದ್ದೇನೆ. ಒಂದು ಒಳ್ಳೆಯ ತಂಡ ಹಾಗೂ ಸಹ ನಟರೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿ ಇದೆ. ಸಿನಿಮಾ ಕಥೆ ತುಂಬಾ ಚೆನ್ನಾಗಿದೆ. ನನಗೆ ನಿಮ್ಮ ಹಾರೈಕೆ ಬೇಕು’ ಎಂದಿದ್ದಾರೆ. ಅಲ್ಲದೇ ಶರವಾನಂದ್, ಆದಿತಿ ರಾವ್ ಹೈದರಿ, ಅಜಯ್ ಭೂಪತಿ ಮುಂತಾದವರನ್ನು ಪೋಸ್ಟ್ನೊಂದಿಗೆ ಟ್ಯಾಗ್ ಮಾಡಿದ್ದಾರೆ.
ಪ್ರೇಮಕಥೆ ಹಾಗೂ ಆ್ಯಕ್ಷನ್ ಹಿನ್ನೆಲೆಯುಳ್ಳ ಮಹಾ ಸಮುದ್ರಂ ಸಿನಿಮಾದಲ್ಲಿ ಅದಿತಿ ರಾವ್ ಹೈದರಿ ಹಾಗೂ ಅನು ಇಮ್ಯಾನುವಲ್ ನಾಯಕಿಯರಾಗಿ ನಟಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.