
ನವದೆಹಲಿ: ‘ನೀರಜ್ ಪಾಂಡೆ ಅವರ ನಿರ್ದೇಶನದ, ನಟ ಮನೋಜ್ ಬಾಜಪೇಯ್ ನಟನೆಯ ‘ಘೂಸಖೋರ್ ಪಂಡಿತ್’ ಸಿನಿಮಾದ ಹೆಸರನ್ನು ಬದಲಾಯಿಸಬೇಕು. ಸಿನಿಮಾಗೆ ಇಂಥ ಹೆಸರಿಟ್ಟು ಸಮಾಜದ ಒಂದು ವರ್ಗದ ಜನರನ್ನು ಅವಹೇಳನ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಆಕ್ರೋಶ ವ್ಯಕ್ತಪಡಿಸಿದೆ.
ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ಬಿಡುಗಡೆಯನ್ನು ತಡೆಹಿಡಿಯುವಂತೆ ಭಾರತೀಯ ಬ್ರಾಹ್ಮಣ ಸಮಾಜದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅತುಲ್ ಮಿಶ್ರಾ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ನಡೆಸಿತು. ಅರ್ಜಿ ಕುರಿತು ಪ್ರತಿಕ್ರಿಯಿಸುವಂತೆ ನಿರ್ದೇಶಕ ನೀರಜ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಸಿಬಿಎಫ್ಸಿಗೆ ಪೀಠವು ನೋಟಿಸ್ ನೀಡಿತು.
‘ಸಿನಿಮಾಗೆ ಬೇರೆ ಹೆಸರು ಇಡಬೇಕು’ ಎಂದು ಪೀಠ ಸೂಚಿಸಿತು ಮತ್ತು ಯಾವ ಹೆಸರು ಇಡಲಿದ್ದೀರಿ ಎನ್ನುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಿ. ಶೀರ್ಷಿಕೆ ಬದಲಾವಣೆ ಬಗ್ಗೆ ನಮಗೆ ಮಾಹಿತಿ ನೀಡುವವರೆಗೂ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಪೀಠ ಹೇಳಿದೆ.
‘ಬೇರೆ ಯಾವ ಹೆಸರು ಇಡಬೇಕು ಎನ್ನುವ ಬಗ್ಗೆ ಇನ್ನುವರೆಗೂ ತೀರ್ಮಾನ ಮಾಡಿಲ್ಲ. ಯಾವುದೇ ಸಂಘರ್ಷ ಉದ್ಭವಿಸದಂತೆ ಹೆಸರು ಇಡಲಾಗುವುದು’ ಎಂದು ಸಿನಿಮಾ ನಿರ್ದೇಶಕರ ಪರ ವಕೀಲರು ಪೀಠಕ್ಕೆ ತಿಳಿಸಿದರು.
ಪೀಠವು ಫೆ.19ಕ್ಕೆ ವಿಚಾರಣೆಯನ್ನು ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.