ಹಿಂದೆ ‘ಇಂಜಿನಿಯರ್ಸ್’ ಎನ್ನುವ ಸಿನಿಮಾ ನಿರ್ದೇಶಿಸಿದ್ದ ವಿನಯ್ ರತ್ನಸಿದ್ಧಿ ಅವರ ಹೊಸ ಸಿನಿಮಾ ‘ಗಂಡುಲಿ’. ಇದು ಸಂಪೂರ್ಣವಾಗಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕಥೆ ಹೊಂದಿದೆ. ವಿನಯ್ ಅವರು ಈ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.
‘ಚಿತ್ರದ ನಾಯಕ ದಿವಾನರ ಕುಟುಂಬದ ಹುಡುಗ. ಈತನ ಪೂರ್ವಜರು ಬಡವರಿಗೆ ಹೇರಳವಾಗಿ ದಾನ ಮಾಡಿ, ತಮ್ಮ ಆಸ್ತಿಯನ್ನೆಲ್ಲ ಕಳೆದುಕೊಂಡಿರುತ್ತಾರೆ. ನಾಯಕ ಹಾಗೂ ಆತನ ತಾಯಿ ಹಳ್ಳಿಯಲ್ಲಿ ಸಾಮಾನ್ಯರಂತೆ ಬದುಕುತ್ತಿರುತ್ತಾರೆ. ಸುಧಾ ನರಸಿಂಹರಾಜು ಅವರು ನಾಯಕನ ತಾಯಿಯ ಪಾತ್ರ ನಿಭಾಯಿಸಿದ್ದಾರೆ. ಚಿತ್ರದಲ್ಲಿ ಒಂದು ಮಾಸ್ ಸಸ್ಪೆನ್ಸ್, ಥ್ರಿಲ್ಲರ್ ಕಥೆ ಇದೆ’ ಎಂದು ಸಿನಿತಂಡ ಹೇಳಿದೆ.
ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ‘ಬಹಳ ದಿನಗಳ ನಂತರ ಒಂದು ಒಳ್ಳೆಯ ಪಾತ್ರ ನಿಭಾಯಿಸಿದ್ದೇನೆ’ ಎಂದರು ಸುಧಾ. ‘ಹಳ್ಳಿಯ ಪರಿಸರವನ್ನು ಆಧಾರವಾಗಿ ಇರಿಸಿಕೊಂಡು ನಿರ್ಮಿಸಿರುವ ಚಿತ್ರ ಇದು. ಇದರಲ್ಲಿ ಮಾಸ್, ಕ್ಲಾಸ್, ಸೆಂಟಿಮೆಂಟ್, ಆ್ಯಕ್ಷನ್ ಜೊತೆಗೆ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥೆಯೂ ಇದೆ’ ಎಂದರು ವಿನಯ್.
ಊರಿನ ಜನರು ಹೆದರಿಕೊಳ್ಳುವ ಘಟನೆಗಳು ನಡೆದಾಗ, ಆ ಘಟನೆಗಳ ಹಿಂದೆ ಇರುವವರು ಯಾರು, ಅದಕ್ಕೆ ಕಾರಣಗಳು ಏನು ಎಂಬುದನ್ನು ನಾಯಕ ಪತ್ತೆ ಮಾಡುವ ಕಥೆ ಚಿತ್ರದಲ್ಲಿ ಇದೆ. ರವಿದೇವ್ ಸಂಗೀತ, ರಾಜು ಶಿವಶಂಕರ್ ಮತ್ತು ಶ್ಯಾಮ್ ಛಾಯಾಗ್ರಹಣ ಚಿತ್ರಕ್ಕೆ ಇದೆ. ಧರ್ಮೇಂದ್ರ ಅರಸ್, ಸುಬ್ಬೇಗೌಡ್ರು, ರಾಮಣ್ಣ, ರಂಜಿತ್, ಪುನೀತ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.