ಸುಂಟಿಕೊಪ್ಪ (ಕೊಡಗು): ಬೆಂಗಳೂರಿನ ದಕ್ಷಿಣ ತಾಲ್ಲೂಕಿನ ದೊಡ್ಡಬೆಲೆ ಗ್ರಾಮದ ಅಪಾರ್ಟ್ಮೆಂಟ್ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ, ಕಿರುತೆರೆ ನಟಿ ಸೌಜನ್ಯಾ (ಸವಿ ಮಾದಪ್ಪ) ಅವರ ಅಂತ್ಯಕ್ರಿಯೆ ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದಲ್ಲಿ ಅಭಿಮಾನಿಗಳು ಹಾಗೂ ಕುಟುಂಬಸ್ಥರ ಆಕ್ರಂದನದ ನಡುವೆ ಶುಕ್ರವಾರ ಸಂಜೆ ನೆರವೇರಿತು.
ಕುಶಾಲನಗರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಿದ ನಂತರ ಅಂದಗೋವೆಗೆ ಮೃತದೇಹ ತರಲಾಯಿತು.
ಆಂಬುಲೆನ್ಸ್ನಿಂದ ಮೃತದೇಹವನ್ನು ಕೆಳಗೆಇಳಿಸುತ್ತಿದ್ದಂತೆ ಅವರ ತಾಯಿ ರೇಣುಕಾ, ‘ನಮ್ಮನೆಲ್ಲ ಇಷ್ಟು ಬೇಗ ಬಿಟ್ಟು ಹೋದೆಯಲ್ಲ; ಯಾಕೆ ಈ ತಪ್ಪು ಮಾಡಿದೆ’ ಎಂದು ಕುಟುಂಬ ಸದಸ್ಯರು ಕಣ್ಣೀರು ಹಾಕಿದರು.
ಚಿಕ್ಕಂಡ ಕುಟುಂಬದ ಐನ್ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅವಿವಾಹಿತಳಾಗಿದ್ದ ಕಾರಣಕ್ಕೆ ಕೊಡವ ಸಂಪ್ರದಾಯದಂತೆ ಬಾಳೆ ದಿಂಡಿನೊಂದಿಗೆ ವಿವಾಹ ಮಾಡಿ ಅಂತ್ಯಕ್ರಿಯೆ ವಿಧಿ–ವಿಧಾನ ನೆರವೇರಿಸಲಾಯಿತು.
ನಂತರ, ಅಂದಗೋವೆ ಗ್ರಾಮದ ಚಿಕ್ಕಂಡ ಕುಟುಂಬಸ್ಥರ ಸ್ವಂತ ಜಾಗದಲ್ಲಿ ಕೊಡವ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಯಿತು.
‘ಸೌಜನ್ಯ ಊರಿಗೆ ಬಂದಾಗ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಮಾತನಾಡುತ್ತಿದ್ದರು’ ಎಂದು ಸ್ಥಳೀಯರಾದ ರಂಜಿನಿ ಕಂಬನಿ ಮಿಡಿದರು.
ಇದನ್ನೂ ಓದಿ.. ಡೆತ್ ನೋಟ್ ಬರೆದಿಟ್ಟು ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.