ಮುಂಬೈ: ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದ ‘ಆರ್ಆರ್ಆರ್’ ಸಿನಿಮಾ ‘ನಾಟು ನಾಟು‘ ಹಾಡಿನ ಕುರಿತಂತೆ ತೆಲುಗು ಧ್ವಜ ಎತ್ತರಕ್ಕೆ ಹಾರುತ್ತಿದೆ ಎಂಬ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೇಳಿಕೆಗೆ ಗಾಯಕ ಅದ್ನಾನ್ ಸಾಮಿ ಆಕ್ಷೇಪ ವ್ಯಕ್ತಪಡಿಸಿದ್ದು, ಮೊದಲು ನಾವೆಲ್ಲ ಭಾರತೀಯರು, ಈ ಪ್ರತ್ಯೇಕತಾವಾದಿ ಮನಸ್ಥಿತಿಯನ್ನು ಬಿಡಿ ಎಂದು ಹೇಳಿದ್ಧಾರೆ.
ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದ ಆರ್ಆರ್ಆರ್ ಸಿನಿಮಾಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಅಭಿನಂದನೆ ಹೇಳಿದ್ದ, ಸಿಎಂ ಜಗನ್ ಮೋಹನ್ ರೆಡ್ಡಿ, ‘ತೆಲುಗು ಧ್ವಜ ಎತ್ತರಕ್ಕೆ ಹಾರುತ್ತಿದೆ. ಆಂಧ್ರಪ್ರದೇಶದ ಎಲ್ಲರ ಪರವಾಗಿ ನಾನು ಚಿತ್ರತಂಡಕ್ಕೆ ಅಭಿನಂದಿಸುತ್ತೇನೆ ಎಂದು ಚಿತ್ರದ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ, ನಿರ್ದೇಶಕ ರಾಜಮೌಳಿ, ನಟರಾದ ಜೂನಿಯರ್ ಎನ್ಟಿಆರ್, ರಾಮಚರಣ್ ಅವರಿಗೆ ಟ್ಯಾಗ್ ಮಾಡಿ ಜಗನ್ ಟ್ವೀಟ್ ಮಾಡಿದ್ದರು.
ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಅದ್ನಾನ್ ಸಾಮಿ, ಮೊದಲು ನಾವೆಲ್ಲರೂ ಭಾರತೀಯರು. ಪ್ರತ್ಯೇಕತಾವಾದಿ ನಡವಳಿಕೆ ಅನಾರೋಗ್ಯಕರ ಎಂದು ಬರೆದಿದ್ದಾರೆ.
‘ತೆಲುಗು ಧ್ವಜವೆಂದರೆ ಭಾರತದ ಧ್ವಜ ಅಲ್ಲವೇ? ಮೊದಲು ನಾವೆಲ್ಲರೂ ಭಾರತೀಯರು ಮತ್ತು ತಮ್ಮನ್ನು ತಾವೇ ದೇಶದಿಂದ ಪ್ರತ್ಯೇಕಿಸಿಕೊಳ್ಳುವ ಮನಸ್ಥಿತಿಯನ್ನು ನಿಲ್ಲಿಸಿ. ನಾವೆಲ್ಲರೂ ಒಂದೇ ದೇಶದವರು. ಪ್ರತ್ಯೇಕತಾವಾದಿ ಮನಸ್ಥಿತಿ ಅತ್ಯಂತ ಅನಾರೋಗ್ಯಕರ. 1947ರಲ್ಲೇ ನಾವು ಇದನ್ನು ನೋಡಿದ್ದೇವೆ. ಜೈಹಿಂದ್’ ಎಂದು ಸಾಮಿ ಬರೆದುಕೊಂಡಿದ್ದಾರೆ.
ಈ ಕುರಿತಂತೆ ಟ್ವಿಟರ್ನಲ್ಲಿ ಪರ–ವಿರೋಧ ಹೇಳಿಕೆಗಳು ಕೇಳಿಬಂದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.