‘ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರದು ಸ್ನೇಹಮಯ ವ್ಯಕ್ತಿತ್ವ. ವರನಟ ರಾಜ್ಕುಮಾರ್ ಸಮಯ ಪರಿಪಾಲನೆಯಲ್ಲಿ ಪ್ರಸಿದ್ಧಿ ಪಡೆದಿದ್ದರು. ಅವರ ಬಳಿಕ ನಾನು ಎಸ್ಪಿಬಿಯಲ್ಲಿ ಅಂತಹ ಶಿಸ್ತನ್ನು ಕಂಡಿದ್ದೇನೆ’ ಎಂದು ನೆನಪಿಸಿಕೊಂಡರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ.
‘ಬಾಳೊಂದು ಚದುರಂಗ’ ಸಿನಿಮಾಕ್ಕೆ ಬಂಡವಾಳ ಹೂಡಿದ್ದೆ. ಸಾಯಿಸುತೆ ಅವರ ಕಾದಂಬರಿ ಆಧರಿಸಿದ ಚಿತ್ರ ಇದು. ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ದೊರೆ–ಭಗವಾನ್. ಅನಂತನಾಗ್, ಲಕ್ಷ್ಮಿ, ಅಂಬರೀಷ್, ಸುಧಾರಾಣಿ, ಸಾಯಿಕುಮಾರ್, ರಮೇಶ್ ಅರವಿಂದ್ ನಟಿಸಿದ್ದರು. ಇದರಲ್ಲಿ ನಟಿಸುವಂತೆ ಎಸ್ಪಿಬಿ ಅವರಿಗೂ ಕೋರಿದೆ. ಮೊದಲಿಗೆ ಅವರು ಒಪ್ಪಿಕೊಳ್ಳಲಿಲ್ಲ. ಕೊನೆಗೆ, ಅಭಿನಯಿಸಲು ಒಪ್ಪಿದರು. ಸಮಯಕ್ಕೆ ಸರಿಯಾಗಿ ಶೂಟಿಂಗ್ ಸೆಟ್ಗೆ ಹಾಜರಾಗುತ್ತಿದ್ದರು. ನಾನೊಬ್ಬ ದೊಡ್ಡ ಗಾಯಕ ಎಂಬ ಭ್ರಮೆ ಅವರಿಗೆ ಇರಲಿಲ್ಲ. ಸೆಟ್ನಲ್ಲಿ ತನ್ನ ಪಾತ್ರದ ಬಗ್ಗೆಯಷ್ಟೇ ಚರ್ಚಿಸುತ್ತಿದ್ದರು. ಬೇರೆ ಯಾವುದೇ ವಿಷಯ ಕುರಿತು ಮಾತನಾಡುತ್ತಿರಲಿಲ್ಲ’ ಎಂದು ಹೇಳಿದರು.
‘ಸ್ನೇಹಕ್ಕೆ ಮತ್ತೊಂದು ಹೆಸರೆಂದರೆ ಎಸ್ಪಿಬಿ. ಅವರು ನಿಧನರಾಗಿರುವುದು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.