ADVERTISEMENT

‘ಥಗ್ಸ್ ಆಫ್ ರಾಮಘಡ’ ಹಾಡು ಬಂತು...

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 10:56 IST
Last Updated 4 ಡಿಸೆಂಬರ್ 2022, 10:56 IST
ಚಂದನ್, ಮಹಾಲಕ್ಷ್ಮೀ, ಕಾರ್ತಿಕ್‌
ಚಂದನ್, ಮಹಾಲಕ್ಷ್ಮೀ, ಕಾರ್ತಿಕ್‌   

‘ಥಗ್ಸ್ ಆಫ್ ರಾಮಘಡ’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ‘ನಗು ನಗುತ ಆವರಿಸೋ ಈ ಹುಡುಗಿ’ ಹಾಡನ್ನು ದಿಯಾ ಖ್ಯಾತಿಯ ನಾಯಕ ನಟ ಪೃಥ್ವಿ ಅಂಬಾರ್ ಬಿಡುಗಡೆ ಮಾಡಿದರು. ನಿರ್ದೇಶಕ ಕಾರ್ತಿಕ್ ನಿರ್ದೇಶಿಸಿರುವ ಮೊದಲ ಸಿನಿಮಾ ಇದು.

‘ನಗು ನಗುತಾ ಆವರಿಸೋ ಈ ಹುಡುಗಿ’ ಹಾಡಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಈ ಹಾಡಿಗೆ ರಾಜೇಶ್ ಕೃಷ್ಣನ್, ಅನುರಾಧ ಭಟ್ ದನಿಯಾಗಿದ್ದಾರೆ. ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನೆ ಈ ಹಾಡಿಗಿದೆ. ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮೂವರು ಕೂಡ ರಂಗಭೂಮಿ ಕಲಾವಿದರಾಗಿದ್ದು, ಈ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ್ದಾರೆ. ಸೂರ್ಯ ಕಿರಣ್, ಪ್ರಭು ಹೊಸದುರ್ಗ, ಅಶ್ವಿನ್ ಹಾಸನ್,ಚಂದನ್ ರಾಜ್, ಮಹಾಲಕ್ಷ್ಮಿ, ಟೈಗರ್ ಗಂಗ, ಜಗದೀಶ್,ಸೂರ್ಯಕಿರಣ್, ರಾಘವೇಂದ್ರ, ವಿಶಾಲ್ ಪಾಟೀಲ್, ರವಿ ಸಾಲಿಯನ್, ಲೋಕೇಶ್ ಗೌಡ, ಭೀಷ್ಮ, ಸುಧೀನ್ ನಾಯರ್ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಹಾಡು ಬಿಡುಗಡೆ ಮಾತನಾಡಿದ ನಟ ಪೃಥ್ವಿ ಅಂಬಾರ್, ‘ ‘ಥಗ್ಸ್ ಆಫ್ ರಾಮಘಡ’ ತುಂಬಾ ಕ್ರಿಯೇಟಿವ್ ತಂಡ ಅಂತ ಹೇಳಬಹುದು. ಪ್ರತಿ ಶಾಟ್, ಎಲಿಮೆಂಟ್‌ನಲ್ಲೂ ಹೊಸತನವಿದೆ. ಹಾಡು ನೋಡಿ ತುಂಬಾ ಖುಷಿ ಆಯಿತು. ನಿರ್ದೇಶಕರು ತುಂಬಾ ಚೆನ್ನಾಗಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ’ ಎಂದರು.

ADVERTISEMENT

‘ಮೂಲತಃ ನಾನು ಯಾದಗಿರಿಯವನು. ಈ ಚಿತ್ರದ ಕಥೆ ಉತ್ತರ ಕರ್ನಾಟಕ ಭಾಗದಲ್ಲಿ 1995ರಲ್ಲಿ ನಡೆದ ಸತ್ಯ ಘಟನೆ ಆಧರಿಸಿದೆ. ಅದಕ್ಕೆ ಒಂದಿಷ್ಟು ಸಿನಿಮೀಯ ಸ್ಪರ್ಶ ಕೊಟ್ಟು ಕ್ರೈಂ ಕಲ್ಟ್ ಕಥಾಹಂದರದ ಸಿನಿಮಾ ಮಾಡಿದ್ದೇವೆ. ಉತ್ತರ ಕರ್ನಾಟಕ ಭಾಗದ ಒಂದು ಚಿಕ್ಕ ಹಳ್ಳಿಯಲ್ಲಿ ನಡೆಯುವ ಕಥೆ ಇದು. ಅದಕ್ಕೆಂದೇ ಪೂರ್ತಿ ಸಿನಿಮಾವನ್ನು ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಣ ನಡೆಸಲಾಗಿದೆ. ಆದಷ್ಟು ನೈಜವಾಗಿಯೇ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದೇವೆ. ಮುಂದಿನ ವರ್ಷ ಸಿನಿಮಾ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ’ ಎಂದು ನಿರ್ದೇಶಕ ಕಾರ್ತಿಕ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ನಾಯಕ ಚಂದನ್ ರಾಜ್ ಮಾತನಾಡಿ, ‘ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ ಎಲ್ಲರೂ ನೋಡಿ ಪ್ರೋತ್ಸಾಹಿಸಿ. ಅಶ್ವಿನ್ ಹಾಸನ್ ಅವರಿಂದ ಈ ಪಾತ್ರ ನನಗೆ ಸಿಕ್ತು ಅವರಿಗೆ ತುಂಬಾ ಧನ್ಯವಾದ ತಿಳಿಸುತ್ತೇನೆ. ಸಿನಿಮಾ ಬಿಡುಗಡೆಯಾದ ಮೇಲೆ ಎಲ್ಲರೂ ನೋಡಿ ಪ್ರೋತ್ಸಾಹಿಸಿ’ ಎಂದು ಕೋರಿದರು.

ನಾಯಕ ನಟಿ ಮಹಾಲಕ್ಷ್ಮೀ ಮಾತನಾಡಿ, ‘ನನ್ನ ಜರ್ನಿ ಆರಂಭವಾಗಿದ್ದು ರಂಗಭೂಮಿಯಿಂದ. ನನ್ನ ಪಾತ್ರ ಉತ್ತರ ಕರ್ನಾಟಕದ ಒಂದು ಕುಗ್ರಾಮದಲ್ಲಿರುವ ಹುಡುಗಿಯ ಪಾತ್ರ. ಎಷ್ಟೇ ನೋವಿದ್ದರೂ ನಗು ನಗುತಾ ಇರುವ ಪಾತ್ರ ನನ್ನದು. ಈ ಚಿತ್ರಕ್ಕಾಗಿ ಉತ್ತರ ಕರ್ನಾಟಕ ಭಾಷೆ ಕಲಿತು ಡಬ್ ಮಾಡಿದ್ದೇನೆ. ತುಂಬಾ ಚೆನ್ನಾಗಿ ಸಿನಿಮಾ ಮೂಡಿ ಬಂದಿದೆ’ ಎಂದರು. ಅಶ್ವಿನ್ ಹಾಸನ್ ತಾರಾಗಣದಲ್ಲಿದ್ದಾರೆ.

ಭಾರತ್ ಟಾಕೀಸ್ ನಡಿ ಜೈ ಕುಮಾರ್, ಕೀರ್ತಿ ರಾಜ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ರಾಜೇಶ್ ಕೃಷ್ಣನ್, ಶಶಾಂಕ್ ಶೇಷಗಿರಿ, ಅನುರಾಧ ಭಟ್ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ. ಮನು ದಾಸಪ್ಪ ಛಾಯಾಗ್ರಹಣ, ಶ್ರೀಧರ್ ಸಂಕಲನ, ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.