ಬಹುನಿರೀಕ್ಷಿತ ‘ಆದಿಪುರುಷ್’ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ನಟಿಸುವುದು ಪಕ್ಕಾ ಆಗಿದೆ. ಈ ವಿಷಯವನ್ನು ಸ್ವತಃ ನಿರ್ದೇಶಕ ಓಂ ರಾವುತ್ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಖಚಿತಪಡಿಸಿದ್ದಾರೆ. ಆದರೆ ಈ ವಿಷಯ ತಿಳಿದ ಕೆಲ ಗಂಟೆಗಳ ಒಳಗೆ ಸೈಫ್ರನ್ನು ಸಿನಿಮಾದಿಂದ ಹೊರಗಿಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಕುತೂಹಲಕಾರಿ ವಿಷಯವೆಂದರೆ ಯಾವ ಕಾರಣಕ್ಕೆ ಸೈಫ್ ಅವರನ್ನು ಸಿನಿಮಾದಿಂದ ಕೈ ಬಿಡಬೇಕು ಎಂಬ ಬಗ್ಗೆ ಯಾವುದೇ ನಿಖರವಾದ ಕಾರಣವಿಲ್ಲ. ಆದರೆ ‘ಆದಿಪುರುಷ್ ಐತಿಹಾಸಿಕ ಸಿನಿಮಾವಾಗಿದೆ. ಅಲ್ಲದೇ ಸೈಫ್ಗೆ ಭಾರತೀಯ ಇತಿಹಾಸದ ಬಗ್ಗೆ ಅಷ್ಟೊಂದು ಜ್ಞಾನವಿಲ್ಲ’ ಎಂಬುದು ಕೆಲವರ ಅಭಿಪ್ರಾಯ. ‘ಸೈಫ್ ಪುತ್ರಿ ಸಾರಾ ಅಲಿ ಖಾನ್ ದಿವಂಗತ ನಟ ಸುಶಾಂತ್ ಸಿಂಗ್ ಜೊತೆ ಇದ್ದಾಗ ಅವರನ್ನು ಬಿಟ್ಟು ಹೋಗಲು ಸುಶಾಂತ್ಗೆ ಸೈಫ್ ಬೆದರಿಕೆ ಹಾಕಿದ್ದರು’ ಎಂಬುದು ಇನ್ನೂ ಕೆಲವರ ಹೇಳಿಕೆ. ಇನ್ನು ಕೆಲವರು ‘ಸೈಫ್ ನೆಪೋಟಿಸಂ ಕೂಸು’ ಎಂದಿದ್ದಾರೆ. ಇದೆಲ್ಲದರ ಜೊತೆ ’ರಾಣಾ ದಗ್ಗುಬಾಟಿ ಲಂಕೇಶ್ ಪಾತ್ರಕ್ಕೆ ಸೂಕ್ತ’ ಎಂಬುದು ಇನ್ನೂ ಕೆಲವರ ವಾದ.
ನಿನ್ನೆ ಇಡೀ ದಿನ ಸೈಫ್ ಅವರನ್ನು ಸಿನಿಮಾದಿಂದ ತೆಗೆದು ಹಾಕಬೇಕು ಎಂಬ ಒತ್ತಾಯ ಟ್ವಿಟ್ವರ್ನಲ್ಲಿ ಕೇಳಿ ಬರುತ್ತಿತ್ತು.
‘ದಿವಂಗತ ನಟ ಸುಶಾಂತ್ ವಿಷಯದಲ್ಲಿ ತಲೆ ಹಾಕದ ವ್ಯಕ್ತಿಗಳ ಸಿನಿಮಾವನ್ನು ನಾವು ನೋಡುವುದಿಲ್ಲ’ ಎಂದು ಟ್ವಿಟ್ಟರ್ ಖಾತೆಯಲ್ಲಿ ಒಬ್ಬರು ಬರೆದುಕೊಂಡಿದ್ದಾರೆ.
‘ಸುಶಾಂತ್ರಿಗೆ ತಮ್ಮ ಮಗಳ ಸಹವಾಸ ಬಿಡು ಎಂದು ಸೈಫ್ ಬೆದರಿಕೆ ಹಾಕಿದ್ದರು’ ಎಂದು ಇನ್ನೊಬ್ಬರು ದೂರಿದ್ದಾರೆ.
ನೆಪೋಟಿಸಂ ಮಾತು ತೆಗೆದಿರುವ ಇನ್ನೊಬ್ಬರು ‘ಈ ವಿಷಯವನ್ನು ಹಗುರವಾಗಿ ಪರಿಗಣಿಸಬೇಡಿ. ಸಡಕ್ 2 ಸಿನಿಮಾ ವಿಷಯದಲ್ಲಿ ಏನಾಗಿತ್ತು ಎಂಬುದು ನಿಮಗೆ ಅರಿವಿದೆ. ದಯವಿಟ್ಟು ಸೈಫ್ರನ್ನು ಈ ಸಿನಿಮಾದಿಂದ ದೂರವಿಡಿ’ ಎಂದು ಬರೆದುಕೊಂಡಿದ್ದಾರೆ.
‘ಡಿಯರ್ ಪ್ರಭಾಸ್ ಸರ್, ನೀವು ಯಾವುದೇ ಖಾನ್, ಭಟ್ ಹಾಗೂ ಅವರ ಆತ್ಮೀಯರನ್ನು ಸಿನಿಮಾದಲ್ಲಿ ಸೇರಿಸಿಕೊಂಡರೆ ನಾವು ಕ್ಷಮಿಸುವುದಿಲ್ಲ. ಈ ಬಾರಿ ಜನರು ಈ ವಿಷಯದಲ್ಲಿ ತುಂಬಾ ಗಂಭೀರರಾಗಿದ್ದಾರೆ. ಒಂದು ವೇಳೆ ಅದೇ ಆದರೆ ನಾವು ಸಿನಿಮಾವನ್ನು ಬಹಿಷ್ಕರಿಸುತ್ತೇವೆ. ನಾವು ನಿಮ್ಮನ್ನು ಪ್ರೀತಿಸುತ್ತೇವೆ. ನಿಮ್ಮ ಗೌರವವನ್ನು ಇದರಿಂದ ಹಾಳು ಮಾಡಿಕೊಳ್ಳಬೇಡಿ’ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
ಸೈಫ್ ಅಲಿ ಖಾನ್ ಈ ಚಿತ್ರದಲ್ಲಿ ಸೂಕ್ತರಲ್ಲ ಅವರಿಗೆ ಭಾರತೀಯ ಇತಿಹಾಸದ ಬಗ್ಗೆ ಜ್ಞಾನವಿಲ್ಲ ಎಂದು ಬರೆದುಕೊಂಡಿರುವ ಇನ್ನೊಬ್ಬ ಟ್ವಿಟ್ಟರ್ ಬಳಕೆದಾರ ‘ಡಿಯರೆಸ್ಟ್ ಓಂ ರಾವತ್ ಹಾಗೂ ಪ್ರಭಾಸ್ ಬ್ರಿಟಿಷರು ಬರುವ ಮೊದಲು ಭಾರತದ ಪರಿಕಲ್ಪನೆ ಇರಲಿಲ್ಲ ಎಂದು ನಂಬಿರುವ ಸೈಫ್ ಅಲಿ ಖಾನ್ರನ್ನು ಸಿನಿಮಾದಿಂದ ದೂರ ಇರಿಸಿ. ಇಲ್ಲದಿದ್ದರೆ ನಾವೇ ಸಿನಿಮಾವನ್ನು ಬಹಿಷ್ಕರಿಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ.
ಕೆಲವರು ರಾಣಾ ಈ ಪಾತ್ರಕ್ಕೆ ಉತ್ತಮ ಆಯ್ಕೆ ಎಂದಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅವರು ‘ರಾವಣ ಪಾತ್ರಕ್ಕೆ ಸೈಫ್ ಅಲಿ ಖಾನ್ ನಮಗೆ ಬೇಡ. ಅವರಿಗೆ ಇತಿಹಾಸದ ಅರಿವಿಲ್ಲ. ರಾಣಾ ದಗ್ಗುಬಾಟಿಯನ್ನು ರಾವಣನನ್ನಾಗಿ ಮಾಡಿ. ಅಷ್ಟೇ ನಮ್ಮ ಬೇಡಿಕೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.