ADVERTISEMENT

ಸಿನಿ ಸುದ್ದಿ | ‘ಉಡಾಳ’ ಉಪ್ಪಿನಕಾಯಿಯಲ್ಲ: ಉತ್ತರ ಕರ್ನಾಟಕ ಫುಲ್‌ಮೀಲ್ಸ್‌

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 23:57 IST
Last Updated 10 ನವೆಂಬರ್ 2025, 23:57 IST
ಹೃತಿಕಾ, ಪೃಥ್ವಿ
ಹೃತಿಕಾ, ಪೃಥ್ವಿ   

‘ಪದವಿಪೂರ್ವ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಪೃಥ್ವಿ ಶಾಮನೂರು ಹೊಸ ಸಿನಿಮಾ ‘ಉಡಾಳ’ ಇದೇ 14ಕ್ಕೆ ರಿಲೀಸ್‌ ಆಗುತ್ತಿದ್ದು, ನಟ ನವೀನ್‌ ಶಂಕರ್‌ ಹಾಗು ನಟಿ ನಿಶ್ವಿಕಾ ನಾಯ್ಡು ಇತ್ತೀಚೆಗೆ ಚಿತ್ರದ ಟ್ರೇಲರ್‌ ರಿಲೀಸ್‌ ಮಾಡಿದರು. 

ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರು ಫಿಲಂಸ್ ಲಾಂಛನದಲ್ಲಿ ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ಈ ಸಿನಿಮಾ ನಿರ್ಮಿಸಿದ್ದಾರೆ. ಯೋಗರಾಜ್‌ ಭಟ್‌ ಅವರ ಜೊತೆ ಸಹ ನಿರ್ದೇಶಕರಾಗಿದ್ದ ಅಮೋಲ್ ಪಾಟೀಲ್ ನಿರ್ದೇಶಿಸಿರುವ ಈ ಸಿನಿಮಾ ಸಂಪೂರ್ಣವಾಗಿ ಉತ್ತರ ಕರ್ನಾಟಕ ಸ್ಲ್ಯಾಂಗ್‌ನಲ್ಲೇ ಇದೆ. 

‘ಉತ್ತರ ಕರ್ನಾಟಕದ ಸೊಗಡನ್ನು ಊಟದಲ್ಲಿ ಉಪ್ಪಿನಕಾಯಿ ಇದ್ದ ಹಾಗೆ ಮಾತ್ರ ಕೆಲವು ಚಿತ್ರಗಳಲ್ಲಿ ಬಳಸಿಕೊಳ್ಳಲಾಗಿತ್ತು. ಆದರೆ ನಮ್ಮ ಚಿತ್ರ ಫುಲ್ ಮೀಲ್ಸ್ ತರಹ ಉತ್ತರ ಕರ್ನಾಟಕದ್ದೇ ಸಿನಿಮಾ. ಇಡೀ ಕಥೆ ವಿಜಾಪುರದಲ್ಲೇ ನಡೆಯುತ್ತದೆ. ಉತ್ತರ ಕರ್ನಾಟಕದ ಸುಂದರತೆ ಈ ಚಿತ್ರದಲ್ಲಿದೆ’ ಎನ್ನುತ್ತಾರೆ ಅಮೋಲ್ ಪಾಟೀಲ್. ಇದು ಇವರು ನಿರ್ದೇಶಿಸುತ್ತಿರುವ ಚೊಚ್ಚಲ ಸಿನಿಮಾ. 

ADVERTISEMENT

‘ನಗಿಸುವುದು ಸುಲಭವಲ್ಲ. ಅದೇ ರೀತಿ ನಗು ಬರುವುದು ಅಷ್ಟು ಸುಲಭವಿಲ್ಲ. ಆದರೆ ಅಮೋಲ್, ನಾಯಕ ಪೃಥ್ವಿ ಶಾಮನೂರು ಸೇರಿದಂತೆ 20 ಕಲಾವಿದರ ತಂಡ ಈ ಚಿತ್ರದ ಮೂಲಕ ನಗುವಿನ ರಸದೌತಣವನ್ನೇ ಬಡಿಸಿದೆ. ಇದೇ ರೀತಿ ಕಲಿತು ನಟನೆ ಮಾಡಿದರೆ ಪೃಥ್ವಿ ಸ್ವಲ್ಪ ದಿನಗಳಲ್ಲಿ ಸ್ಟಾರ್ ನಟ ಆಗುತ್ತಾನೆ’ ಎಂದರು ಯೋಗರಾಜ್‌ ಭಟ್‌. 

ಈ ಚಿತ್ರದಲ್ಲಿ ಪೃಥ್ವಿ ಗೈಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೃತಿಕ ಶ್ರೀನಿವಾಸ್ ಚಿತ್ರದ ನಾಯಕಿ. ಬಲ ರಾಜವಾಡಿ, ಮಾಳು ನಿಪ್ನಾಳ್, ಹರೀಶ್ ಹಿರಿಯೂರು, ಬಿರಾದಾರ್, ಸುಮಿತ್ ಸಂಕೋಜಿ, ವಾದಿರಾಜ ಬಬ್ಲಾದಿ, ಪ್ರವೀಣ್ ಗಸ್ತಿ, ದಯಾನಂದ ಬೀಳಗಿ, ರೇಣುಕ, ಶ್ರೀಧರ್, ದಾನಪ್ಪ, ಶಿಲ್ಪ ಶಾಂತಕುಮಾರ್, ಸೋನಿಯಾ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.