ADVERTISEMENT

‘ಕೈಲಾಸ’ ಯಾತ್ರೆಗೆ ಹೊರಟ ವೈಭವ್‌

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 19:45 IST
Last Updated 13 ಫೆಬ್ರುವರಿ 2020, 19:45 IST
ರಾಶಿ ಬಾಲಕೃಷ್ಣ
ರಾಶಿ ಬಾಲಕೃಷ್ಣ   

ವೈಭವ್‌ ನಟಿಸಿದ ಮೊದಲ ಚಿತ್ರ ‘ತಾರಕಾಸುರ’. ಬುಡಬುಡಿಕೆ ಜನಾಂಗದ ಆಚರಣಾ ಪದ್ಧತಿ ಮತ್ತು ಮರಳು ಗಣಿಗಾರಿಕೆ ಸುತ್ತ ಇದರ ಕಥೆ ಹೆಣೆಯಲಾಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಯಶಸ್ಸು ಕಾಣಲಿಲ್ಲ. ಈಗ ‘ಕೈಲಾಸ’ ಸಿನಿಮಾದ ಮೂಲಕ ಮತ್ತೆ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ‘ಕಾಸಿದ್ರೆ’ ಎಂಬ ಅಡಿಬರಹವೂ ಈ ಚಿತ್ರಕ್ಕಿದೆ.

ಕಂಠೀರವ ಸ್ಟುಡಿಯೊದಲ್ಲಿ ಇತ್ತೀಚೆಗೆ ಇದರ ಮುಹೂರ್ತ ನೆರವೇರಿತು. ಬದುಕಿನ ಅರ್ಥ ಅರಿಯಲು ಹೊರಟ ಹುಡುಗ ಮತ್ತು ಜವಾಬ್ದಾರಿ ಇರುವ ಹುಡುಗಿಯ ನಡುವೆ ಅರಳುವ ಪ್ರೀತಿ ಮೂಲಕ ಕಥೆ ಶುರುವಾಗುತ್ತದೆಯಂತೆ. ಆಕೆಯ ಮನಸ್ಸು ಗೆಲ್ಲಲು ಆತ ಏನೆಲ್ಲಾ ಕಸರತ್ತು ನಡೆಸುತ್ತಾನೆ, ಎಲ್ಲಿ ಅಂಡಲೆಯುತ್ತಾನೆ ಎಂಬುದು ಸಿನಿಮಾದ ಕಥೆ.

ಹನ್ನೆರಡು ವರ್ಷಗಳ ಕಾಲ ಟೆಕ್ಕಿಯಾಗಿ ಕೆಲಸ ನಿರ್ವಹಿಸಿರುವ ನಾಗ್ ವೆಂಕಟ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಎರಡು ಕಿರುಚಿತ್ರಗಳು ಮತ್ತು ವೆಬ್ ಸಿರೀಸ್ ನಿರ್ದೇಶಿಸಿರುವ ಅನುಭವ ಅವರಿಗಿದೆ.ಬೆಂಗಳೂರು, ತೀರ್ಥಹಳ್ಳಿ ಮತ್ತು ಕೊಡಗಿನ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ.

ADVERTISEMENT

ವೈಭವ್‌ ಅವರದು ಬಿಂದಾಸ್ ಹುಡುಗನ ಪಾತ್ರ. ಬದುಕಿನ ಮೌಲ್ಯಗಳ ಹೊಣೆ ಹೊತ್ತುಕೊಂಡ ಹುಡುಗಿಯಾಗಿ ಮಂಗಳೂರು ಮೂಲಕ ರಾಶಿ ಬಾಲಕೃಷ್ಣ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ನಾಲ್ಕು ಹಾಡುಗಳಿಗೆ ಆಶಿಕ್ ಅರುಣ್ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ವಿನೋದ್ ರಾಜೇಂದ್ರನ್ ಅವರದು. ತ್ಯಾಗು ಎಂ. ಸಂಕಲನ ನಿರ್ವಹಿಸಿದ್ದಾರೆ. ಸ್ಟನ್ನರ್ ಸ್ಯಾಮ್ ಸಾಹಸ ನಿರ್ದೇಶಿಸಿದ್ದಾರೆ. ವಾಸಿಕ್ ಅಲ್‍ಸಾದ್ ಅವರು ಮಹದ್ ಪಿಕ್ಚರ್ಸ್ ಮೂಲಕ ಬಂಡವಾಳ ಹೂಡಿದ್ದಾರೆ. ಮೊದಲ ದೃಶ್ಯಕ್ಕೆ ನಟ ಧನಂಜಯ್‌ ಫಲಕ ತೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.