ಕನ್ನಡದ ಖ್ಯಾತ ನಟ, ತಮ್ಮ ಕಂಚಿನ ಕಂಠದಿಂದಲೇ ಚಿರಪರಿಚಿತರಾದ ವಶಿಷ್ಠ ಸಿಂಹ ಹೊಸ ವರ್ಷವನ್ನು ಸಿಂಹದ ಮರಿಯನ್ನು ದತ್ತು ಪಡೆದುಕೊಳ್ಳುವ ಮೂಲಕ ಆರಂಭಿಸಿದ್ದರು. ಆಂಗ್ಲ ಪತ್ರಿಕೆಯೊಂದಕ್ಕೆ ವಸಿಷ್ಠ ನೀಡಿದ್ದ ಸಂದರ್ಶನದಲ್ಲಿ ತಮ್ಮ ಚೊಚ್ಚಲ ತಮಿಳು ಹಾಗೂ ತೆಲುಗು ಸಿನಿಮಾಗಳ ಕುರಿತು ಮಾತನಾಡಿದ್ದರು. ‘ನಾನು ಲಾಕ್ಡೌನ್ಗೂ ಮೊದಲು ಎರಡು ತೆಲುಗು ಸಿನಿಮಾಗಳ ಶೂಟಿಂಗ್ ಮುಗಿಸಿದ್ದೆ. ಒಂದು ‘ಒಡೆಲ್ಲಾ ರೈಲ್ವೇ ಸ್ಟೇಷ್ಟನ್’, ಇನ್ನೊಂದು ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ನಾರಪ್ಪ ನನ್ನ ಮೂರನೇ ಸಿನಿಮಾ. ತಮಿಳಿನಲ್ಲಿ ನಾನು ಮೊದಲ ಸಿನಿಮಾದಲ್ಲಿ ದುಶಂತ್ ಜೊತೆ ನಟಿಸುತ್ತಿದ್ದೇನೆ. ಈ ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು ಸದ್ಯ ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ನನ್ನ ತೆಲುಗು ಸಿನಿಮಾಗಳ ಕೆಲಸ ಮುಗಿದ ಕೂಡಲೇ ಈ ಸಿನಿಮಾದ ಶೂಟಿಂಗ್ನಲ್ಲಿ ಭಾಗವಹಿಸುತ್ತೇನೆ. ನನ್ನ ಎರಡು ಕನ್ನಡ ಸಿನಿಮಾಗಳು ಬಾಕಿ ಇವೆ’ ಎಂದಿದ್ದಾರೆ. ಶ್ರೀಕಾಂತ್ ಅಡ್ಡಲಾ ನಿರ್ದೇಶನದ ನಾರಪ್ಪದಲ್ಲಿ ವಸಿಷ್ಠ ಅವರದ್ದು ಖಳನಾಯಕನ ಪಾತ್ರ.
ಇವರ ಗೋಧ್ರ ಹಾಗೂ ಕಾಲಚಕ್ರ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ‘ಪ್ಯಾನ್ ಇಂಡಿಯಾ ಚಿತ್ರಗಳ ಸೋಲು–ಗೆಲುವು ಅನಿಶ್ಚಿತ. ಅದರ ಬದಲು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಒಬ್ಬ ನಟನಾಗಿ ನನ್ನ ಪ್ರತಿಭೆ ತೋರುವುದು ಮುಖ್ಯ. ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೆಲಸ ಮಾಡಿದರೆ ಬೇರೆ ಬೇರೆ ಭಾಗದ ಜನರ ಜೊತೆ ಹೆಚ್ಚು ಬೆರೆಯಬಹುದು. ಬೇರೆ ಭಾಷೆಯ ಸಿನಿಕ್ಷೇತ್ರಕ್ಕೆ ನಾನು ಎಂಟ್ರಿ ಕೊಟ್ಟಿದ್ದು ಆಕಸ್ಮಿಕವಾಗಿ’ ಎಂದಿದ್ದಾರೆ.
ವಸಿಷ್ಠ ಅವರ ಕಾಲಚಕ್ರ ಟೀಸರ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ನೋಟ, ಧ್ವನಿ ಹಾಗೂ ದೃಶ್ಯಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಚಿತ್ರದಲ್ಲಿ ಎರಡು ಭಿನ್ನ ಪಾತ್ರಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.