ಧೀರಜ್ ಕುಮಾರ್
(ಚಿತ್ರ ಕೃಪೆ–ಇನ್ಸ್ಟಾಗ್ರಾಮ್)
ಮುಂಬೈ: ಬಾಲಿವುಡ್ ಹಿರಿಯ ನಟ, ನಿರ್ಮಾಪಕ ಧೀರಜ್ ಕುಮಾರ್ ಇಂದು (ಮಂಗಳವಾರ) ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 79 ವರ್ಷವಾಗಿತ್ತು.
ತೀವ್ರ ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 11 ಗಂಟೆಗೆ ನಿಧನರಾದರು ಎಂದು ಅವರ ಕುಟುಂಬದ ಸ್ನೇಹಿತ ಅಜಯ್ ಶುಕ್ಲಾ ಪಿಟಿಐಗೆ ತಿಳಿಸಿದ್ದಾರೆ.
ಅವರ ಅಂತ್ಯಕ್ರಿಯೆ ನಾಳೆ(ಬುಧವಾರ) ನಡೆಯಲಿದೆ ಎಂದು ಶುಕ್ಲಾ ಹೇಳಿದ್ದಾರೆ.
1965ರಲ್ಲಿ ಚಿತ್ರೋದ್ಯಮವನ್ನು ಪ್ರವೇಶಿಸಿದ್ದ ಧೀರಜ್ ಕುಮಾರ್, ಹಿಂದಿ ಮಾತ್ರವಲ್ಲದೆ ಪಂಜಾಬಿ ಚಲನಚಿತ್ರೋದ್ಯಮ ಮತ್ತು ಟಿವಿ ಜಗತ್ತಿನಲ್ಲಿಯೂ ಗುರುತಿಸಿಕೊಂಡಿದ್ದರು.
1970 ಮತ್ತು 1984ರ ನಡುವೆ, ಸುಮಾರು 21 ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದಾರೆ. 'ಸ್ವಾಮಿ', ಹೀರಾ ಪನ್ನಾ (1973), 'ರಾತೋಂ ಕಾ ರಾಜಾ', ರೋಟಿ ಕಪ್ಡಾ ಔರ್ ಮಕಾನ್ (1974), ಸರ್ಗಮ್ (1979), ಮತ್ತು ಕ್ರಾಂತಿ (1981) ಇವರು ನಟಿಸಿದ ಪ್ರಮುಖ ಹಿಂದಿ ಚಿತ್ರಗಳು.
1986ರಲ್ಲಿ ಅವರು ಕ್ರಿಯೇಟಿವ್ ಐ ಲಿಮಿಟೆಡ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದರು. ಇದರ ಬ್ಯಾನರ್ನಡಿ ಓಂ ನಮಃ ಶಿವಾಯ (1997) ಮತ್ತು ಘರ್ ಕಿ ಲಕ್ಷ್ಮಿ ಬೇಟಿಯಾನ್ (2006) ನಂತಹ ಜನಪ್ರಿಯ ದೂರದರ್ಶನ ಕಾರ್ಯಕ್ರಮಗಳನ್ನು ನಿರ್ಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.