ಸರ್ಜಿಕಲ್ ಸ್ಟ್ರೈಕ್ ಎಂಬ ರಣಾಂಗಣದ ಕತೆಯ ಚಲನಚಿತ್ರ ‘ಉರಿ’ಯ ಗೆಲುವಿನ ರೂವಾರಿಯಾದ ನಟ ವಿಕ್ಕಿ ಕೌಶಲ್ ಈಗ ಮತ್ತೊಂದು ರಣಾಂಗಣದಲ್ಲಿ ಕತ್ತಿ ಮಸೆಯಲಿದ್ದಾರೆ.
‘ಉರಿ: ದಿ ಸರ್ಜಿಕಲ್ ಸ್ಟ್ರೈಕ್‘ನ ನಿರ್ದೇಶಕ ಆದಿತ್ಯ ಧರ್ ಅವರದೇ ಪ್ರಾಜೆಕ್ಟ್ನಲ್ಲಿ ವಿಕ್ಕಿ, ಪೌರಾಣಿಕ ಪಾತ್ರವೊಂದರ ಪೋಷಾಕು ಧರಿಸಲಿದ್ದಾರೆ. ಕರಣ್ ಜೋಹರ್ ನಿರ್ಮಾಣದ ಬಹುತಾರಾಗಣದ ಚಿತ್ರ ‘ತಖ್ತ್’ನಲ್ಲಿ ವಿಕ್ಕಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟರಲ್ಲೇ ಆದಿತ್ಯ ಧರ್ ಎರಡನೇ ಬಾರಿಗೆ ವಿಕ್ಕಿಗೆ ಆ್ಯಕ್ಷನ್– ಕಟ್ ಹೇಳುವ ಸುಳಿವು ನೀಡಿದ್ದಾರೆ.
ಅದು ಕುರುಕ್ಷೇತ್ರ... ವಿಕ್ಕಿ ಈ ಬಾರಿ ಕಾಣಿಸಿಕೊಳ್ಳಲಿರುವುದು ಕುರುಕ್ಷೇತ್ರದಲ್ಲಿ ಪಾಂಡವರ ವಿರುದ್ಧ ಹೋರಾಡಿದ ಅಶ್ವತ್ಥಾಮನ ಪಾತ್ರಕ್ಕಾಗಿ ವಿಕ್ಕಿ ಜೊತೆ ಆದಿತ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ‘ಉರಿ’ಗೆ ಬಂಡವಾಳ ಹೂಡಿ ರಾನಿ ಸ್ಕ್ರೂವಾಲಾ ಅವರೇ ಹೊಸ ಚಿತ್ರಕ್ಕೂ ಆರ್ಥಿಕ ಇಂಧನ ಪೂರೈಸಲಿದ್ದಾರೆ.
ಆದಿತ್ಯ ಧರ್ ಅವರ ಕೈಯಲ್ಲಿ ‘ಉರಿ’ಯಷ್ಟೇ ಶಕ್ತಿಶಾಲಿಯಾದ ಮತ್ತೊಂದು ಸಿನಿಮಾವನ್ನು ಮಾಡಿಸುವ ಉದ್ದೇಶ ನಿರ್ಮಾಪಕರಿಗಿತ್ತು. ಇದೀಗ ಮಹಾಭಾರತದ ಕತೆ ಮತ್ತು ಪಾತ್ರಗಳ ಹಿನ್ನೆಲೆಯುಳ್ಳ ಚಿತ್ರಕ್ಕೆ ಅವರು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ವಿಕ್ಕಿ ಕೌಶಲ್ ಅವರನ್ನೇ ನಾಯಕನಟರಾಗಿ ಗೊತ್ತುಮಾಡುವಂತೆಯೂ ನಿರ್ದೇಶಕರಿಗೆ ಸೂಚಿಸಿದ್ದರು ಎಂದು ಬಾಲಿವುಡ್ ಗಲ್ಲಿಯ ಮಾಹಿತಿ. ಮತ್ತೊಂದುಮೂಲದ ಪ್ರಕಾರ, ಆದಿತ್ಯ ಅವರು ಏಳು ವರ್ಷಗಳ ಹಿಂದೆಯೇ ಚಿತ್ರಕತೆ ಬರೆದಿಟ್ಟುಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.