ADVERTISEMENT

ಇನ್ನೆಷ್ಟು ಸಮಯ ರೈತರ ಸಂಕಷ್ಟ ನೋಡುತ್ತಾ ಇರಬೇಕು: ನಟ ಸೋನು ಸೂದ್ ಪ್ರಶ್ನೆ

ಪಿಟಿಐ
Published 19 ಡಿಸೆಂಬರ್ 2020, 4:17 IST
Last Updated 19 ಡಿಸೆಂಬರ್ 2020, 4:17 IST
ಸೋನು ಸೂದ್ (ಪಿಟಿಐ ಚಿತ್ರ)
ಸೋನು ಸೂದ್ (ಪಿಟಿಐ ಚಿತ್ರ)   

ಮುಂಬೈ: ಮೂರು ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಸ್ಥಿತಿಯನ್ನು ನೋಡಿ ಬಹಳ ಬೇಸರವಾಗಿದೆ ಎಂದು ನಟ ಸೋನು ಸೂದ್ ಹೇಳಿದ್ದಾರೆ. ಜೊತೆಗೆ, ರೈತರ ಸಮಸ್ಯೆಗಳು ಶೀಘ್ರ ಬಗೆಹರಿಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹರಿಯಾಣ, ಪಂಜಾಬ್‌ನ ಸಾವಿರಾರು ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸ ಕೃಷಿ ಕಾಯ್ದೆಗಳಿಂದ ಕನಿಷ್ಠ ಬೆಂಬಲ ಬೆಲೆ ರದ್ದಾಗಲಿದೆ, ತಾವು ಕಾರ್ಪೊರೇಟರ್‌ಗಳ ಅಡಿಯಾಳುಗಳಾಗಲಿದ್ದೇವೆ ಎಂಬ ಆತಂಕ ಅವರಲ್ಲಿದೆ.

ಕೋವಿಡ್ ಲಾಕ್‌ಡೌನ್‌ ವೇಳೆ ವಲಸೆ ಕಾರ್ಮಿಕರಿಗೆ ತವರಿಗೆ ಮರಳಲು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದ ಸೋನು ಸೂದ್, ರೈತರ ಪ್ರತಿಭಟನೆ ವಿಚಾರದಲ್ಲಿ ಚರ್ಚೆ ನಡೆಸಲು ಬಯಸುವುದಿಲ್ಲ ಎಂದಿದ್ದಾರೆ. ಯಾರು ಸರಿ, ಯಾರು ತಪ್ಪು ಎಂದು ಚರ್ಚಿಸುವುದಿಲ್ಲ. ರೈತರ ಸಮಸ್ಯೆಗಳಿಗೆ ಸಕಾಲಿಕ ಪರಿಹಾರ ದೊರೆತರೆ ಸಾಕು ಎಂದು ಹೇಳಿದ್ದಾರೆ.

ADVERTISEMENT

‘ತುಂಬಾ ಬೇಸರವಾಗಿದೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದೆ. ನಾನು ಹುಟ್ಟಿ ಬೆಳೆದಿದ್ದು ಪಂಜಾಬ್‌ನಲ್ಲಿ. ಅಲ್ಲಿನ ರೈತರ ಜೊತೆ ಸಮಯ ಕಳೆದಿದ್ದೇನೆ. ಸ್ವಲ್ಪ ಸಮಯ ನೀಡಿದರೆ ಪಂಜಾಬ್ ಸಮುದಾಯಕ್ಕೆ ಪ್ರೀತಿಯಿಂದ ಮನವರಿಕೆ ಮಾಡಿಕೊಡಬಹುದು ಎಂಬ ನಂಬಿಕೆ ನನಗಿದೆ ಎಂದು 'ವಿ ದಿ ವುಮನ್' ಎಂಬ ವರ್ಚುವಲ್ ಸಂವಾದದಲ್ಲಿ ಪತ್ರಕರ್ತೆ ಬರ್ಖಾ ದತ್ ಬಳಿ ನಡೆಸಿದ ಸಂಭಾಷಣೆಯಲ್ಲಿ ತಿಳಿಸಿದ್ದಾರೆ.

‘ಅವರು (ರೈತರು) ನಡುಕ ಹುಟ್ಟಿಸುವ ಚಳಿಯಲ್ಲಿ ಚಿಕ್ಕ ಮಕ್ಕಳೊಂದಿಗೆ ಹೆದ್ದಾರಿಗಳಲ್ಲಿ ಕುಳಿತಿದ್ದಾರೆ. ಕೆಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಎಷ್ಟು ಸಮಯ ನಾವಿದನ್ನು ನೋಡುತ್ತಾ ಇರಬೇಕು’ ಎಂದು ಸೋನು ಸೂದ್ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.