ಆಗಸ್ಟ್ 22 ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬ. ಅಂದು ಮೆಗಾಸ್ಟಾರ್ 65ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಮೆಗಾಸ್ಟಾರ್ ಅಭಿಮಾನಿಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಷ್ಟ್ಯಾಗ್ ಟ್ರೆಂಡ್ ಆರಂಭಿಸಿದ್ದಾರೆ. ಜೊತೆಗೆ ಚಿರು ಅಭಿನಯದ ‘ಆಚಾರ್ಯ’ ಸಿನಿಮಾದ ಫಸ್ಟ್ಲುಕ್ ಹಾಗೂ ಮೋಷನ್ ಪೋಸ್ಟರ್ ಕೂಡ ಅಂದೇ ಬಿಡುಗಡೆಯಾಗಲಿದೆ.
ಇವೆಲ್ಲದರ ನಡುವೆ ಚಿರಂಜೀವಿ ಪುತ್ರ ರಾಮ್ಚರಣ್ ಆ ದಿನ ತಾವು ನಿರ್ಮಿಸುತ್ತಿರುವ ಮುಂದಿನ ಚಿತ್ರವನ್ನು ಘೋಷಣೆ ಮಾಡಲಿದ್ದಾರೆ ಎನ್ನುತ್ತಿವೆ ಆಪ್ತ ವಲಯಗಳು.
ನಟರ ಹುಟ್ಟುಹಬ್ಬದ ದಿನದಂದು ಪೋಸ್ಟರ್ ಅಥವಾ ಟೀಸರ್ ಬಿಡುಗಡೆ ಮಾಡುವುದು ಈಗ ಟ್ರೆಂಡ್ ಆಗಿದೆ. ನಿರ್ದೇಶಕ ಕೊರಟಾಲ ಶಿವ ಪೋಸ್ಟರ್ ಕೆಲಸದಲ್ಲಿ ತೊಡಗಿದ್ದಾರೆ. ಈ ನಡುವೆ ರಾಮ್ ನಿರ್ಮಾಣದ ಮುಂದಿನ ಚಿತ್ರದ ಕುರಿತು ಊಹಾಪೋಹಗಳು ಕೇಳಿ ಬರುತ್ತಿವೆ.
ಚಿರಂಜೀವಿ ಅಭಿನಯದ ‘ಕೈದಿ ನಂ. 150’ ಚಿತ್ರದಿಂದ ರಾಮ್ ತಮ್ಮ ತಂದೆಗಾಗಿ ಕೋನಿಡೆಲಾ ಪ್ರೊಡಕ್ಷನ್ ಅಡಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ರಾಮ್ಚರಣ್ ಲೂಸಿಫರ್ ರಿಮೇಕ್ ಚಿತ್ರವನ್ನು ಘೋಷಣೆ ಮಾಡಲಿದ್ದಾರಾ ಅಥವಾ ಬಾಬಿ ನಿರ್ದೇಶನದ ಸಿನಿಮಾವನ್ನು ಘೋಷಣೆ ಮಾಡಲಿದ್ದಾರಾ ಎಂಬ ಬಗ್ಗೆ ಅಭಿಮಾನಿಗಳು ಕುತೂಹಲಗೊಂಡಿದ್ದಾರೆ.
‘ಆಚಾರ್ಯ’ ಸಿನಿಮಾವನ್ನು ರಾಮ್ಚರಣ್ ಹಾಗೂ ನಿರಂಜನ್ ರೆಡ್ಡಿ ನಿರ್ಮಾಣ ಮಾಡಲಿದ್ದಾರೆ.
ಅಷ್ಟೇ ಅಲ್ಲದೇ ಮೈತ್ರಿ ಮೂವಿ ಮೇಕರ್ಸ್ಗಾಗಿ ಒಂದು ಸಿನಿಮಾ ಮಾಡುವುದಾಗಿ ಚಿರಂಜೀವಿ ಹೇಳಿಕೊಂಡಿದ್ದಾರೆ. ಆದರೆ ಈ ಎಲ್ಲಾ ಸಿನಿಮಾಗಳಿಗೂ ಸಹಾಯಕ ನಿರ್ಮಾಪಕನಾಗುತ್ತೇನೆ ಎಂದು ರಾಮ್ಚರಣ್ ಹೇಳಿಕೊಂಡಿದ್ದಾರೆ.
ಹಾಗಾದರೆ ರಾಮ್ ಘೋಷಣೆ ಮಾಡುವ ಹೊಸ ಚಿತ್ರ ಯಾವುದು ಎಂಬುದರ ಬಗ್ಗೆ ಕುತೂಹಲ ಮೂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.