ಬೆಂಗಳೂರು: ಪ್ರಗುಣಿ ಒಟಿಟಿ ವೆಂಚರ್ ಹಮ್ಮಿಕೊಂಡ ಕಿರುಚಿತ್ರ ಸ್ಪರ್ಧೆಯಲ್ಲಿ ‘ಆಕಾಂಕ್ಷ’ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ.
ಇದೇ ಸ್ಪರ್ಧೆಯಲ್ಲಿ ಬಿಂಬಶ್ರೀ ಅವರಿಗೆ ಅತ್ಯುತ್ತಮ ನಟಿ, ನಾಗೇಂದ್ರ ಶಾ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಗೌರವ ಲಭಿಸಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಪತ್ರಕರ್ತ ರವಿ ಹೆಗಡೆ ‘ಕಲೆ ಮತ್ತು ವಾಣಿಜ್ಯದ ನಡುವೆ ಅಂತರ ಮುಖ್ಯ. ಆದರೆ ಇತ್ತೀಚೆಗೆ ಅವರೆಡೂ ಬೆಸೆದುಕೊಂಡ ಪರಿಣಾಮ ಕಲಾಕ್ಷೇತ್ರದಲ್ಲಿನ ಸಣ್ಣಪುಟ್ಟವರನ್ನು ಪ್ರಶಸ್ತಿಗೆ ಗುರುತಿಸಲಾಗದಂತೆ ಆಗಿದೆ’ ಎಂದರು.
ಕಿರುಚಿತ್ರ ಸ್ಪರ್ಧೆಯ ತೀರ್ಪುಗಾರ, ಪತ್ರಕರ್ತ ಜೋಗಿ ಮಾತನಾಡಿ, ‘ಕಿರುಚಿತ್ರ ಅಂದರೆ, ಕಡಿಮೆ ಸಮಯದಲ್ಲಿ ಹೆಚ್ಚು ವಿಷಯ ಹೇಳುವ ಪರಿ. ಒಂದು ದೃಶ್ಯದಿಂದ ಇನ್ನೊಂದು ದೃಶ್ಯಕ್ಕೆ ಅದರ ವೇಗ ಕೂಡ ಅಷ್ಟೇ ವೇಗವಾಗಿರಬೇಕು. ಆದರೆ ಇಲ್ಲಿ ಬಂದ ಬಹಳಷ್ಟು ಚಿತ್ರಗಳಲ್ಲಿ ಕತೆಯೇ ಇರಲಿಲ್ಲ. ಕತೆ ಕೂಡ ಮುಖ್ಯ. ಕಿರುಚಿತ್ರ ನಿರ್ದೇಶನ ದೊಡ್ಡ ಚಿತ್ರಗಳ ನಿರ್ದೆಶನದ ಮೊದಲ ಮೆಟ್ಟಿಲು’ ಎಂದರು.
ನಿರ್ದೇಶಕ ಪಿ. ಶೇಷಾದ್ರಿ ಮಾತನಾಡಿ, ‘ಸಿನಿಮಾ ಕೂಡ ಸಾಹಿತ್ಯವೇ. ಸಾಹಿತ್ಯದಲ್ಲಿ ಹೇಗೆ ಕಾದಂಬರಿ, ಕಾವ್ಯ, ಗದ್ಯ ಎಂಬ ವಿಭಾಗಗಳಿವೆಯೋ ಹಾಗೆಯೇ ಸಿನಿಮಾ ಕೂಡ. ನನ್ನ ಪ್ರಕಾರ ಕಿರುಚಿತ್ರ ಅಂದರೆ ಕಾವ್ಯ ಇದ್ದ ಹಾಗೆ. ಕಡಿಮೆ ಅವಧಿಯ ಕಾವ್ಯದಲ್ಲಿ ಹೇಗೆ ವಿಶಾಲ ಅರ್ಥವನ್ನು ಕಟ್ಟಿಕೊಡಲು ಸಾಧ್ಯವೋ ಹಾಗೆಯೇ ಕಿರುಚಿತ್ರವೊಂದು ಕಡಿಮೆ ಅವಧಿಯಲ್ಲಿ ತನ್ನ ಕಥೆಯನ್ನು ಜನರಿಗೆ ಮನಸ್ಸಿಗೆ ನಾಟುವಂತೆ ಕಟ್ಟಿಕೊಡಬಲ್ಲದು’ ಎಂದು ಅಭಿಪ್ರಾಯಪಟ್ಟರು.
ನಿರ್ದೇಶಕ ಟಿ.ಎನ್. ಸೀತಾರಾಂ ಸಮಾರಂಭ ಉದ್ಘಾಟಿಸಿದರು. ಸಂಗೀತ ನಿರ್ದೇಶಕ ವಿ.ಮನೋಹರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.