ADVERTISEMENT

ಸಿನಿಮಾ ವಿಮರ್ಶೆ: ಅಧ್ಯಯನಕ್ಕೆ ಹೆಚ್ಚು ಆಪ್ತವಾದ ‘ಪದ್ಮಗಂಧಿ’

ವಿನಾಯಕ ಕೆ.ಎಸ್.
Published 18 ಡಿಸೆಂಬರ್ 2025, 4:25 IST
Last Updated 18 ಡಿಸೆಂಬರ್ 2025, 4:25 IST
<div class="paragraphs"><p>ಚಿತ್ರದ ದೃಶ್ಯ</p></div>

ಚಿತ್ರದ ದೃಶ್ಯ

   

ಸಾಮಾನ್ಯವಾಗಿ ಸ್ಟಾರ್‌ ನಾಯಕರ ಸಿನಿಮಾಗಳಲ್ಲಿ ಮುಕ್ಕಾಲು ಭಾಗ ಸಿನಿಮಾ ಸ್ಟಾರ್‌ ನಟರೇ ಆವರಿಸಿಕೊಂಡಿರುತ್ತಾರೆ. ಅವರ ಅಭಿಮಾನಿಗಳಿಗಾಗಿಯೇ ಮಾಡಿದ ಸಿನಿಮಾಗಳವು. ಹೀಗಾಗಿ ಅಲ್ಲಿ ಮೊದಲು ನಾಯಕನಿಗೆ ಜಾಗ, ಉಳಿದರೆ ಕಥೆಗೆ, ನಾಯಕಿಗೆ, ಇತರೆ ನಟರಿಗೆ. ಅದೇ ರೀತಿಯ ಸಿನಿಮಾ ‘ಪದ್ಮಗಂಧಿ’. ಇಲ್ಲಿ ನಾಯಕನ ಜಾಗದಲ್ಲಿ ಕಮಲವಿದೆಯಷ್ಟೆ! ಕಮಲದ ಹೂ, ಎಸಳು, ಬೀಜ, ದಂಟು...ಹೀಗೆ ಒಂದು ಕಮಲದಲ್ಲಿ ಏನೆಲ್ಲ ಭಾಗಗಳಿರಬಹುದೋ, ಕಮಲದಿಂದ ಏನೆಲ್ಲ ಮಾಡಬಹುದೋ ಅವೆಲ್ಲವೂ ಚಿತ್ರದಲ್ಲಿ ಬರುತ್ತವೆ. ಪ್ರತಿ ದೃಶ್ಯವೂ ಕಮಲದ್ದೇ, ಸಂಭಾಷಣೆಯೂ ಕಮಲಮಯ. ಚಿತ್ರ ಮುಗಿಯುವ ಹೊತ್ತಿಗೆ ಇದು ಬರಿ ಸಿನಿಮಾವಲ್ಲ, ಕಮಲದ ದಿಗ್ದರ್ಶನ ಎಂಬ ಭಾವ ಮೂಡಿರುತ್ತದೆ!

ರಾಮೋಹಳ್ಳಿಯಲ್ಲಿನ ‘ಶುಭಂ ಕರೋತಿ–ಮೈತ್ರೇಯಿ ಗುರುಕುಲ’ ಹೆಣ್ಣುಮಕ್ಕಳಿಗೆ ಸನಾತನ ಮಾದರಿಯ ಶಿಕ್ಷಣ ನೀಡುವ ವಿಶಿಷ್ಟ ತಾಣ. ಆ ಗುರುಕುಲವೇ ಕಥೆಯ ಕೇಂದ್ರಬಿಂದು. ಅಲ್ಲಿನ ವಿದ್ಯಾರ್ಥಿನಿ ಮಹಾಪದ್ಮಳಿಗೆ ಕಮಲದ ಕುರಿತು ಅತೀವ ಆಸಕ್ತಿ. ಕುಳಿತಲ್ಲಿ, ನಿಂತಲ್ಲಿ ಅದರದ್ದೇ ಧ್ಯಾನ. ಆಕೆ ಪದ್ಮ ಪುಷ್ಪದ ಮಜಲುಗಳು, ಇತಿಹಾಸ ಹುಡುಕಿಕೊಂಡು ಹೋಗುವುದು ಚಿತ್ರದ ಒಟ್ಟಾರೆ ಕಥೆ. ಇದರ ಹುಡುಕಾಟದ ಜತೆಗೆ ಗುರುಕುಲದಲ್ಲಿ ವಿದ್ಯಾರ್ಥಿನಿಯರ ದಿನಚರಿಯನ್ನು ತೆರೆದಿಡುವುದು ಒಂದು ಹೊಸ ಲೋಕವನ್ನು ಪರಿಚಯಿಸುತ್ತದೆ. ಪ್ರಮೋದ್‌ ಕಾಮತರು ನಡೆಸುವ ಈ ಗುರುಕುಲದಲ್ಲಿ ಸಂಸ್ಕೃತವೇ ಪ್ರಥಮ ಭಾಷೆ. ನಿತ್ಯದ ಪಾಠ–ಸಂಭಾಷಣೆಗಳು ಈ ಭಾಷೆಯಲ್ಲಿಯೇ ನಡೆಯುತ್ತವೆ. ಹೀಗಾಗಿ ಚಿತ್ರದುದ್ದಕ್ಕೂ ಕನ್ನಡದ ಜತೆ ಸಂಸ್ಕೃತ ಸಂಭಾಷಣೆಯೂ ಹೇರಳವಾಗಿದೆ. 

ADVERTISEMENT

ಮಹಾಪದ್ಮ, ಆಕೆಯ ಸಹಪಾಠಿಗಳು, ಗುರುಕುಲದ ಬೋಧಕ ವರ್ಗದ ಸುತ್ತವೇ ಕಥೆ ಸಾಗುತ್ತದೆ. ಈ ಗುರುಕುಲದ ಅಧ್ಯಾಪಕ ವೃಂದ ಮತ್ತು ಮಕ್ಕಳೆ ಚಿತ್ರದಲ್ಲಿ ನಟಿಸಿರುವುದರಿಂದ ಆ ಭಾಗ ಆಪ್ತವೆನಿಸುತ್ತದೆ. ಆಗಾಗ ಅತಿಥಿ ಪಾತ್ರಗಳಲ್ಲಿ ನಾಡಿನ ವಿದ್ವಾಂಸರು ಬಂದು ಕಮಲದ ವೈಶಿಷ್ಟ್ಯವನ್ನು ವಿವರಿಸಿ ಹೋಗುತ್ತಾರೆ. ಮಹಾಪದ್ಮಳ ನಟನೆ ಸಹಜ ಎನ್ನಿಸುತ್ತದೆ. ಗುರುಮಾತೆಯಾಗಿ ಪರಿಪೂರ್ಣ ಚಂದ್ರಶೇಖರ್‌ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದ ಹಲವು ಪಾತ್ರಗಳು ಕೆಲವು ಕಡೆ ನಾಟಕೀಯ ಎನ್ನಿಸುತ್ತವೆ.

ನಿರ್ದೇಶಕರು ಕಮಲದ ಕುರಿತು ಆಳವಾಗಿ ಅಧ್ಯಯನ ಮಾಡಿರುವುದು ಚಿತ್ರದಲ್ಲಿ ಬರುವ ಸನ್ನಿವೇಶಗಳಿಂದ ತಿಳಿಯುತ್ತದೆ. ಈಗಾಗಲೇ ಕನ್ನಡ ಸಿನಿಮಾಗಳಲ್ಲಿ ಬಂದ ಕಮಲ ಕುರಿತಾದ ದೃಶ್ಯಗಳನ್ನು ಮಹಾಪದ್ಮಳ ಕಲಿಕೆಯ ಭಾಗದಲ್ಲಿ ಬಳಸಿರುವುದು ಚೆನ್ನಾಗಿದೆ. ಮಹಾಪದ್ಮಳ ಈ ಪಯಣಕ್ಕೆ ಒಂದು ಗಟ್ಟಿಯಾದ ಕಥೆ, ಪಾತ್ರದ ಹಿನ್ನೆಲೆ, ಸಂಬಂಧಗಳು, ತಿರುವುಗಳನ್ನು ನೀಡುವ ಅವಕಾಶ ನಿರ್ದೇಶಕರಿಗಿತ್ತು. ಇಡೀ ಕಥಾವಸ್ತು ವಿಷಯ ಕೇಂದ್ರೀತವಾಗಿರುವುದರಿಂದ, ಹೇಳಿಕೊಂಡು ಹೋದ ರೀತಿಯೂ ಕಮಲ ಕುರಿತು ಆಳವಾದ ಅಧ್ಯಯನಕ್ಕೆ ಹೆಚ್ಚು ಆಪ್ತವಾಗಿರುವುದರಿಂದ ಇದನ್ನು ಸಿನಿಮಾ ಬದಲು ಉತ್ತಮ ಸಾಕ್ಷ್ಯಚಿತ್ರವಾಗಿಸಬಹುದಿತ್ತು ಎಂಬ ಭಾವ ಅನೇಕ ಕಡೆಗಳಲ್ಲಿ ಮೂಡುತ್ತದೆ. ಸಾಕಷ್ಟು ದೃಶ್ಯಗಳು ಅರ್ಧ ಆಗಿರುವಾಗ ಮತ್ತೊಂದು ದೃಶ್ಯ ಪ್ರಾರಂಭವಾಗಿ ಆ ದೃಶ್ಯಗಳು ಅಪೂರ್ಣ ಎನ್ನಿಸುತ್ತವೆ. ತಾಂತ್ರಿಕವಾಗಿ ಸಂಕಲನ, ಸಂಗೀತಗಳನ್ನು ಇನ್ನಷ್ಟು ಉತ್ತಮವಾಗಿಸಬಹುದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.