ಚಿಕ್ಕಮಗಳೂರಿನ ಕಾಫಿ ತೋಟ. ಅಲ್ಲೊಂದು ಮುದ್ದಾದ ಜೋಡಿ. ಈ ಪ್ರಣಯ ಪಕ್ಷಿಗಳ ಬದುಕಿನಲ್ಲಿ ನಡೆಯುವ ಒಂದಷ್ಟು ರೋಚಕ ಘಟನೆಗಳೆ ‘ಪ್ರಣಯಂ’ ಚಿತ್ರದ ಒಟ್ಟಾರೆ ಕಥೆ.
ಈ ಹಿಂದೆ ‘ಬಿಚ್ಚುಗತ್ತಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ರಾಜವರ್ಧನ್ ಚಿತ್ರದ ನಾಯಕ. ಮಾಸ್ ಹೀರೋ ಆಗಿ ರಾಜವರ್ಧನ್ ಇಷ್ಟವಾಗುತ್ತಾರೆ. ಅವರ ಪಾತ್ರಕ್ಕೆ ತಕ್ಕಂತೆ ಫೈಟ್ಗಳಿವೆ. ಮುದ್ದಾದ ಹುಡುಗಿಯಾಗಿ ನಾಯಕಿ ನೈನಾ ಗಂಗೂಲಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಛಾಯಾಚಿತ್ರಗ್ರಾಹಕ ನಾಗೇಶ್ ಆಚಾರ್ಯ ಚಿಕ್ಕಮಗಳೂರಿನ ಹಸಿರನ್ನು ಚೆಂದವಾಗಿ ಸೆರೆ ಹಿಡಿದಿದ್ದಾರೆ. ಮನೋಮೂರ್ತಿ ಸಂಗೀತ ಪ್ರೀತಿಯ ಭಾವವನ್ನು ಇಮ್ಮಡಿಗೊಳಿಸುತ್ತದೆ.
ದಂಪತಿಗಳ ನಡುವಿನ ನಿಶ್ಚಿತಾರ್ಥ ಮತ್ತು ಮದುವೆಯ ನಡುವಿನ ಅಮೂಲ್ಯ ಅವಧಿಯನ್ನು ನಿರ್ದೇಶಕರು ಚಿತ್ರದಲ್ಲಿ ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ನಾಯಕ ಮತ್ತು ನಾಯಕಿಯ ಕೆಮಿಸ್ಟ್ರಿ ಕೂಡ ಉತ್ತಮವಾಗಿದೆ.
ಇಡೀ ಕಥೆ ದಂಪತಿ ಕೇಂದ್ರಿಕೃತವಾಗಿದೆ. ಹೀಗಾಗಿ ನವಿರಾದ ಕಥೆಯ ನಡುವೆ ಟ್ವಿಸ್ಟ್ ನೀಡಲು ನಿರ್ದೇಶಕರು ಕೆಲ ಘಟನೆಗಳನ್ನು ತರುತ್ತಾರೆ. ಇವು ಸಹಜ ಅನ್ನಿಸದೇ ಚಿತ್ರಕಥೆ ಅಲ್ಲಲ್ಲಿ ಸ್ವಲ್ಪ ಓಘ ಕಳೆದುಕೊಳ್ಳುತ್ತದೆ. ಚಿತ್ರದ ಮೊದಲಾರ್ಧ ತರ್ಲೆ, ತುಂಟತನದಿಂದ ಕೂಡಿದೆ. ಮಾಸ್ ಅಂಶಗಳಿವೆ.
ದ್ವಿತೀಯಾರ್ಧದಲ್ಲಿ ಹೊಸತೊಂದು ಕತೆ ತೆರೆದುಕೊಂಡು ಭಿನ್ನವಾಗಿ ಸಾಗಿ, ಕುತೂಹಲಕರವಾಗಿ ಸಿನಿಮಾ ಮುಗಿಯುತ್ತದೆ. ದಂಪತಿಗಳ ಜೀವನದಲ್ಲಿ ಅನಿರೀಕ್ಷಿತ ಟ್ವಿಸ್ಟ್ ಕಾಣಿಸಿಕೊಂಡಾಗ, ಅವರ ವಿಚಾರ ಬದಲಾಗುತ್ತದೆ. ಸಂಬಂಧ ಪರೀಕ್ಷೆಗೆ ಒಳಪಡುತ್ತದೆ. ಈ ಹಂತದಲ್ಲಿ ಚಿತ್ರಕಥೆ ಇನ್ನಷ್ಟು ಗಟ್ಟಿಯಾಗಬೇಕಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.