‘ನಾಟಕ ಬೆಂಗ್ಳೂರು’ ಆಯೋಜಿಸಿರುವ ರಂಗೋತ್ಸವದಲ್ಲಿ ಮಂಗಳವಾರ ವಿಜಯನಗರ ಬಿಂಬ ‘ಬಾಳೂರು ಗುಡಿಕಾರ’ ನಾಟಕ ಪ್ರಸ್ತುತಪಡಿಸಲಿದೆ.
ನಾಟಕದ ಸಾರಾಂಶ: ಹೆನ್ರಿಕ್ ಇಬ್ಸನ್ನ ‘ಮಾಸ್ಟರ್ ಬಿಲ್ಡರ್’ ಪ್ರೇರಣೆಯಿಂದ ಬಿ. ಸುರೇಶ್ ಅವರು ರಚಿಸಿರುವ ನಾಟಕ ‘ಬಾಳೂರ ಗುಡಿಕಾರ’.
ಮೇಲ್ನೋಟಕ್ಕೆ ಈ ನಾಟಕ ಪ್ರತಿಷ್ಠೆಯ ಸಲುವಾಗಿ ಹಿರಿಯರು ಮತ್ತು ಕಿರಿಯರು ನಡೆಸುವ ಸಂಘಷ೯ವಾಗಿ ಕಾಣುತ್ತದೆ. ಆದರೆ ತನ್ನ ಅಂತರಾಳದಲ್ಲಿ ಪ್ರತಿಷ್ಠಿತರು ಎನಿಸಿಕೊಂಡವರ ಮುಖವಾಡ ಕಳಚುವ, ಸಣ್ಣತನಗಳನ್ನು ಮನೋ ವೈಜ್ಞಾನಿಕವಾಗಿ ನಗ್ನಗೊಳಿಸುವ ಕ್ರಿಯೆಯನ್ನು ಹುದುಗಿಸಿಕೊಂಡಿದೆ.
ವಾಸ್ತವ ಮತ್ತು ಕಲ್ಪನೆಗಳನ್ನು ಬೆದಕುತ್ತಾ ಸಾಗುವ ಪಾತ್ರಗಳು ನಮ್ಮ ಇಂದಿನ ಸಾಮಾಜಿಕ ಮನೋಲೋಕದ ಪಯಣವನ್ನು ಈ ನಾಟಕ ಬಿಂಬಿಸುತ್ತದೆ ಎಂದರೆ ತಪ್ಪಾಗಲಾರದು. ಈ ಪಯಣದಲ್ಲಿ ಪಾತ್ರಗಳು ತಾವು ಕಂಡುಕೊಂಡ ಅಂತಿಮ ಸತ್ಯವನ್ನು ಪ್ರೇಕ್ಷಕರ ಮುಂದೆ ಇರಿಸುತ್ತವೆ. ವಿಲಕ್ಷಣ ಸಂಗತಿಗಳು ಎದುರಾಗಿ ಪಾತ್ರಗಳನ್ನು ಗೊಂದಲಕ್ಕೀಡು ಮಾಡಿ ತಮ್ಮ ಹುಳುಕನ್ನು ತಾವೇ ಬಹಿರಂಗಪಡಿಸಿಕೊಂಡು ಒದ್ದಾಡುವಂತೆ ಮಾಡುತ್ತವೆ. ಕಟ್ಟುವ ಮತ್ತು ಕೆಡವುವ ಪ್ರಕ್ರಿಯೆ ಸಾಂಕೇತಿಕವಾಗಿ ನಾಟಕದುದ್ದಕ್ಕೂ ನಡೆದು ಪಾತ್ರಗಳ ಮನಸ್ಸು ನುಚ್ಚು ನೂರಾಗುತ್ತದೆ. ಪಾತ್ರಗಳು ತಮ್ಮ ಮನದ ಚೂರುಗಳನ್ನು ಜೋಪಾನವಾಗಿ ಆರಿಸಿ ಮತ್ತೆ ತಮ್ಮ ಮನಸ್ಸನ್ನು ಅಸ್ತಿತ್ವವನ್ನು ಕಟ್ಟಿಕೊಳ್ಳುವ ಪ್ರಕ್ರಿಯೆ, ಅಂತರಾಳದ ಬೇಗುದಿಗೆ ಸುಂದರ ಚೌಕಟ್ಟನ್ನು ನಿರ್ಮಿಸುತ್ತದೆ.
ನಾಟಕ ಬೆಂಗ್ಳೂರು ರಂಗೋತ್ಸವ: ‘ಬಾಳೂರ ಗುಡಿಕಾರ’ ನಾಟಕ ಪ್ರದರ್ಶನ. ಪ್ರಸ್ತುತಿ– ವಿಜಯನಗರ ಬಿಂಬ. ಮೂಲ– ಹೆನ್ರಿಕ್ ಇಬ್ಸನ್. ಕನ್ನಡಕ್ಕೆ ರಂಗರೂಪ–ಬಿ.ಸುರೇಶ. ನಿರ್ದೇಶನ– ಡಾ.ಎಸ್.ವಿ. ಕಶ್ಯಪ್. ಸ್ಥಳ– ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ರಾತ್ರಿ 7. ಟಿಕೆಟ್ ದರ ₹ 70
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.