ಮೂರನೇ ವರ್ಷದ ‘ಬನ್ನಂಜೆ ಸಂಭ್ರಮ‘ ಕಾರ್ಯಕ್ರಮ ಇದೇ 28ರಂದು ನಗರದಲ್ಲಿ ನಡೆಯಲಿದೆ.
ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಈ ಕಾರ್ಯಕ್ರಮ ಆಯೋಜಿಸಿದೆ. ಜಯನಗರದ ಜೆ.ಎಸ್.ಎಸ್ ಸಭಾಂಗಣದಲ್ಲಿ ಸಂಜೆ 4.30ರಿಂದ ರಾತ್ರಿ 9 ಗಂಟೆವರೆಗೂ ಕಾರ್ಯಕ್ರಮ ನಡೆಯಲಿದೆ.
ಅತಿಥಿಗಳಾಗಿ ರಾಮಭದ್ರಾಚಾರ್ಯ ಮಹಾರಾಜ್, ವಿದ್ವಾನ್ ಉಮಾಕಾಂತ ಭಟ್ಟರು, ಮಲ್ಲೇಪುರಂ ಜಿ.ವೆಂಕಟೇಶ್, ಬನ್ನಂಜೆ ಗೋವಿಂದಾಚಾರ್ಯ ಭಾಗವಹಿಸಲಿದ್ದಾರೆ.
ದೇಸೀ ಮಾರ್ಗ ಶೈಲಿಯ ನೃತ್ಯ ನಾಟಕ ‘ಪಾಂಚಾಲಿ’ ಪ್ರದರ್ಶನ ಕೂಡ ನಡೆಯಲಿದೆ. ಹಿರಿಯ ರಂಗಕರ್ಮಿ ಬಿ.ಜಯಶ್ರೀ, ವಿದ್ವಾನ್ ಸತ್ಯನಾರಾಯಣ ರಾಜು ಅವರು ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ.
‘ನಮ್ಮ ಕಲಾಜೀವ’ರು ತಂಡ ಮುಖ್ಯಭೂಮಿಕೆಯಲ್ಲಿ ತೊಡಗಿಸಿಕೊಂಡಿದೆ. ಎಚ್.ಎಸ್.ವೆಂಕಟೇಶಮೂರ್ತಿ ರಚಿಸಿದ್ದರೆ, ಜಯಶ್ರೀ ಅವರೇ ಈ ನಾಟಕವನ್ನು ನಿರ್ದೇಶಿಸಿದ್ದಾರೆ.
ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಹುಟ್ಟುಕೊಂಡಿದ್ದಕ್ಕೂ ಒಂದು ವಿಶೇಷತೆ ಇದೆ. ಗೋವಿಂದಾಚಾರ್ಯರಿಗೆ 80 ವರ್ಷ ತುಂಬಿದ ಸಂಭ್ರಮ ಆಚರಿಸುವುದಕ್ಕಾಗಿ ಇದು ಹುಟ್ಟಿಕೊಂಡಿತು.
2015ರಲ್ಲಿ ಈ ಉದ್ದೇಶದಿಂದ ಆರಂಭವಾದ ಸಂಸ್ಥೆ ಅದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ 5 ದಿನಗಳ ‘ಬನ್ನಂಜೆ ಸಂಭ್ರಮ 80‘ ಎಂಬ ಕಾರ್ಯಕ್ರಮ ನಡೆಸಿತ್ತು.
ಇದರ ನೆನಪಿಗಾಗಿ ಪ್ರತಿವರ್ಷ ಬನ್ನಂಜೆ ಸಂಭ್ರಮ, ಒಂದು, ಎರಡು ಎಂದು ಆಚರಿಸಲಾಗುತ್ತಿದೆ. ಈಗ ಮೂರನೇ ವರ್ಷದ ಕಾರ್ಯಕ್ರಮ ನಡೆಯುತ್ತಿದೆ.
ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಬನ್ನಂಜೆಯವರ ಉಪಸ್ಥಿತಿಯಲ್ಲಿ ಭಾರತದ ಒಬ್ಬ ಶ್ರೇಷ್ಠ ವಿದ್ವಾಂಸರನ್ನು ಪರಿಚಯಿಸುವುದು. ಅವರ ಒಂದು ಉಪನ್ಯಾಸವನ್ನು ಏರ್ಪಡಿಸುವುದು.
ಈ ಬಾರಿ ರಾಮಭದ್ರಾಚಾರ್ಯ ಮಹಾರಾಜ್ ಅವರು ಉಪನ್ಯಾಸ ನೀಡಲಿದ್ದಾರೆ. ಪದ್ಮವಿಭೂಷಣ ಪುರಸ್ಕೃತರಾಗಿರುವ ಅವರು 22 ಭಾಷೆಗಳಲ್ಲಿ ಮಾತನಾಡಬಲ್ಲರು.
ಅನೇಕ ಗ್ರಂಥಗಳನ್ನು ಕಂಠಸ್ಥ ಮಾಡಿದ್ದಾರೆ. ಇವರು ಭಾಗವತಸಾರದ ಕುರಿತು ಮಾತನಾಡಲಿದ್ದಾರೆ. ಉತ್ತರಪ್ರದೇಶದ ತುಲಸೀ ಪೀಠಾಧೀಶ್ವರ ಜಗದ್ಗುರುಗಳಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.