ಸಮಷ್ಟಿ ರಂಗತಂಡವು ಮಾರ್ಚ್ 24ರಂದು ಮಧ್ಯಾಹ್ನ 3.30 ಹಾಗೂ ಸಂಜೆ 7.30ಕ್ಕೆ ರಂಗಶಂಕರದಲ್ಲಿ ‘ಮುಕ್ಕಾಂ ಪೋಸ್ಟ್ ಬೊಂವಾಡಿ’ ನಾಟಕ ಪ್ರದರ್ಶಿಸಲಿದೆ.
ಮರಾಠಿ ನಾಟಕಕಾರ ಪರೇಶ್ ಮೊಕಾಶಿ ರಚಿಸಿರುವ ಈ ನಾಟಕವನ್ನು ಕೆ.ಆರ್. ಓಂಕಾರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ನಾಟಕದ ವಿನ್ಯಾಸ ಮತ್ತು ನಿರ್ದೇಶನ ರವೀಂದ್ರ ಪೂಜಾರಿ ಅವರದ್ದು.
ಸಾರಾಂಶ: ‘ಮುಕ್ಕಾಂ ಪೋಸ್ಟ್ ಬೊಂವಾಡಿ’ ಕಾಲ್ಪನಿಕ ಕತೆ. ಅಣುಬಾಂಬ್ ತಯಾರಿಕೆಯ ಸೂತ್ರಗಳನ್ನು ಪಡೆಯಲು ಜಪಾನ್ಗೆ ಹೋದ ಹಿಟ್ಲರ್, ವಾಪಸ್ ಬರುವಾಗ ಪ್ರಮಾದವಶಾತ್ ಬೊಂವಾಡಿಯಲ್ಲಿ ಇಳಿಯುತ್ತಾನೆ.
ಅಲ್ಲಿನ ಪೊಲೀಸ್ ಸ್ಟೇಷನ್ನ ವಯರ್ಲೆಸ್ ಪೋನ್ ಬಳಸಲು ಹೋಗಿ ಹೊರಬರಲಾರದೆ ನಾಟಕ ತಂಡವೊಂದಕ್ಕೆ ರವಾನಿಸಲ್ಪಡುತ್ತಾನೆ.
ಹಿಟ್ಲರ್ನನ್ನು ಬಚ್ಚಿಟ್ಟನೆಂಬ ಆರೋಪದಿಂದ ಬಂಧಿತನಾದ ನಾಟಕ ತಂಡದ ಮುಖ್ಯಸ್ಥನನ್ನು ಬಿಡಿಸಲು ತಂಡದ ಸದಸ್ಯರು ಬೇರೆಬೇರೆ ವೇಷದಲ್ಲಿ ಹರ ಸಾಹಸಪಡುತ್ತಾರೆ. ಕಡೆಗೂ ತಮ್ಮ ನಾಟಕದ ಪ್ರದರ್ಶನವನ್ನು ಮುಗಿಸುತ್ತಾರೆ.
ಆದಿಯಿಂದ ಅಂತ್ಯದವರಗೂ ಹಾಸ್ಯಲೇಪಿತ ದೃಶ್ಯಗಳನ್ನು ಹೊಂದಿರುವ ಈ ನಾಟಕವು, ನಾಟಕದ ತಯಾರಿ ಹಾಗೂ ಪ್ರದರ್ಶನದ ಗೊಂದಲ, ನಾಟಕಪ್ರೇಮಿ ಬ್ರಿಟಿಷ್ ಅಧಿಕಾರಿ ಮತ್ತು ಅಲ್ಲಿನ ಭಾರತೀಯ ಪೇದೆಯ ಪೇಚಾಟ, ಮರಳಿ ಜರ್ಮನಿಗೆ ಹೋಗುವ ಹಿಟ್ಲರ್ನ ಪರದಾಟಗಳನ್ನು ಹಾಸ್ಯಮಯವಾಗಿ ಚಿತ್ರಿಸುತ್ತದೆ.
ಸಮಷ್ಟಿ ತಂಡದ ಕುರಿತು: 2000ರಲ್ಲಿ ಹುಟ್ಟಿಕೊಂಡ ತಂಡ ಸಮಷ್ಟಿ. ಹೊಸ ಪ್ರತಿಭೆಗಳನ್ನು ಹುಡುಕಿ ಅವರಲ್ಲಿ ರಂಗಾಸಕ್ತಿಯನ್ನು ಬೆಳೆಸುವುದು ತಂಡದ ಉದ್ದೇಶ.
‘ಆಷಾಢದ ಒಂದು ದಿನ’, ‘ಸಾಂಬಶಿವ ಪ್ರಹಸನ’, ‘ಮೃಚ್ಛಕಟಿಕ’, ‘ಹದ್ದು ಮೀರಿದ ಹಾದಿ’, ‘ಅಲೆಗಳಲ್ಲಿ ರಾಜಹಂಸಗಳು’, ‘ಹರಿಣಾಭಿಸರಣ’ ಮೊದಲಾದ ನಾಟಕಗಳನ್ನು ರಂಗಕ್ಕೆ ಯಶಸ್ವಿಯಾಗಿ ತಂದಿದೆ. ಆಸಕ್ತರಿಗೆ ರಂಗಭೂಮಿ ಮತ್ತು ಯಕ್ಷಗಾನದ ಶಿಬಿರಗಳನ್ನೂ ತಂಡ ಆಯೋಜಿಸುತ್ತಾ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.