ಬೆಂಗಳೂರು: ಇತ್ತೀಚೆಗಷ್ಟೇ ಕೋವಿಡ್–19ನಿಂದ ಚೇತರಿಸಿಕೊಂಡ ಬಾಲಿವುಡ್ನ ಬಿಗ್ ಬಿ ಅಮಿತಾಬ್ ಬಚ್ಚನ್ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಭಾಗಿಯಾಗಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಚಿತ್ರೀಕರಣದ ಸೆಟ್ನಲ್ಲಿನ ಚಿತ್ರಗಳೊಂದಿಗೆ 'ನೀಲಿ ಪಿಪಿಇಗಳ ಸಾಗರದಲ್ಲಿ...' ಎಂದು ಅಮಿತಾಬ್ ಪ್ರಕಟಿಸಿಕೊಂಡಿದ್ದಾರೆ.
ಕೋವಿಡ್ ದೃಢಪಟ್ಟ ಬಳಿಕ ಆಸ್ಪತ್ರೆಗೆ ದಾಖಲಾದ ಅಮಿತಾಬ್ (77) ಮೂರು ವಾರ ಚಿಕಿತ್ಸೆ ಪಡೆದು ಆಗಸ್ಟ್ 2ರಂದು ಮನೆಗೆ ಮರಳಿದರು. ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ಪತಿ (ಕೆಬಿಸಿ) 12ನೇ ಸೀಸನ್ನ ಚಿತ್ರೀಕರಣದ ಕುರಿತು ಭಾನುವಾರ ತಮ್ಮ ಬ್ಲಾಗ್ನಲ್ಲಿ ಚಿತ್ರಸಹಿತ ಬರೆದುಕೊಂಡಿದ್ದಾರೆ. ಚಿತ್ರೀಕರಣದಲ್ಲಿ ಸಿಬ್ಬಂದಿ ಸುರಕ್ಷಿತ ಅಗತ್ಯವಿರುವ ಸೂಕ್ತ ಕ್ರಮಗಳನ್ನು ಪಾಲಿಸುತ್ತಿದ್ದಾರೆ ಎಂದಿದ್ದಾರೆ.
ಹಲವು ಅಭಿಮಾನಿಗಳು ಅವರ ಆರೋಗ್ಯದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಕಾಳಜಿ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಮೀಮ್ಗಳ ಮೂಲಕ ವ್ಯಂಗ್ಯವಾಡಿದ್ದಾರೆ. 'ಮರಳಿ ಕೆಲಸದಲ್ಲಿ... ನೀಲಿ ಪಿಪಿಇ ಸಾಗರದಲ್ಲಿ...ಕೆಬಿಸಿ 12....ಶುರು 2000ರಲ್ಲಿ... ಈಗ 2020....20 ವರ್ಷಗಳು ಕಳೆದಿವೆ! ಇದು ದೀರ್ಘಾವಧಿ...' ಎಂದು ಅಮಿತಾಬ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೆಬಿಸಿ ಮೊದಲ ಸೀಸನ್ ನಡೆದಿದ್ದು 2000ರ ಜುಲೈನಲ್ಲಿ ಹಾಗೂ ಅಮಿತಾಬ್ ಅದರ ನಿರೂಪಕರಾಗಿದ್ದರು. ಮೂರನೇ ಸೀಸನ್ ಹೊರತು ಪಡಿಸಿ ಉಳಿದ ಹನ್ನೊಂದು ಆವೃತ್ತಿಗಳಲ್ಲಿಯೂ ನಟ ಅಮಿತಾಬ್ ಬಚ್ಚನ್ ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ. ಮೂರನೇ ಸೀಸನ್ಗೆ ಶಾರೂಕ್ ಖಾನ್ ನಿರೂಪಕರಾಗಿದ್ದರು.
ಕಾರ್ಯಕ್ರಮ 20 ವರ್ಷಗಳನ್ನು ಪೂರೈಸಿರುವುದು, ಕೋವಿಡ್ ಪರಿಸ್ಥಿತಿಯಲ್ಲಿ ಪಿಪಿಇ ಕಿಟ್ ಧರಿಸಿ, ಮಾಸ್ಕ್, ನ್ಯಾನಿಟೈಸರ್ಗಳ ಸಹಿತ ಚಿತ್ರೀಕರಣ ನಡೆಸುತ್ತಿರುವುದು, ಅಂತರ ಕಾಯ್ದುಕೊಳ್ಳುತ್ತಿರುವುದು, ಕೆಬಿಸಿಯಲ್ಲಿನ ಕುರ್ಚಿ, ಅಲ್ಲಿನ ವಾತಾವರಣ, ಕ್ಯಾಮೆರಾಗಳು ಹಾಗೂ ಈ ಎಲ್ಲದರಿಂದ ಮನಸ್ಸಿನಲ್ಲಿ ಏಳುತ್ತಿರುವ ವಿಚಿತ್ರ ಭಾವನೆಗಳ ಬಗ್ಗೆ ಬರೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.