ADVERTISEMENT

ಭೂಮಿಗೆ ಬಂದೇ ಬಿಟ್ಟ ಭಗವಂತ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 7:21 IST
Last Updated 20 ಮಾರ್ಚ್ 2023, 7:21 IST
ಭೂಮಿಗೆ ಬಂದ ಭಗವಂತ ಧಾರಾವಾಹಿಯ ಪೋಸ್ಟರ್‌
ಭೂಮಿಗೆ ಬಂದ ಭಗವಂತ ಧಾರಾವಾಹಿಯ ಪೋಸ್ಟರ್‌   

ದೇವರು ಮನುಷ್ಯನೊಳಗೆ ಅವತರಿಸಿದರೆ ಹೇಗಿರುತ್ತದೆ? ಇಂಥ ಅದೆಷ್ಟೋ ಕಾಲ್ಪನಿಕ ಕಥೆಗಳನ್ನು ನೋಡಿದ್ದೇವೆ. ಕೇಳಿದ್ದೇವೆ. ಆದರೆ ಅಂಥದ್ದೇ ಇನ್ನೊಂದು ಹೊಸ ಕಥೆ ಕಿರುತೆರೆಯಲ್ಲಿ ಮೂಡಿಬರುತ್ತಿದೆ. ಮಾರ್ಚ್‌ 20ರಿಂದ ರಾತ್ರಿ 10 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಪ್ರಸಾರವಾಗಲಿದೆ.

ವಿಶಿಷ್ಟ ಕಥಾಹಂದರ ಹೊಂದಿದ್ದು ಮಧ್ಯಮ ವರ್ಗದ ಜನರ ಕಷ್ಟ, ನಷ್ಟ, ಇಷ್ಟಗಳನ್ನು ಜತೆಗೆ ಅವರು ದೇವರನ್ನು ನೋಡುವ ರೀತಿಯನ್ನು ಅನಾವರಣಗೊಳಿಸಲಿದೆ. ಈ ಧಾರಾವಾಹಿ ಮಧ್ಯಮ ವರ್ಗದ ಭಾವನೆಗಳಿಗೆ ಕನ್ನಡಿ ಹಿಡಿಯುವುದರ ಜತೆಗೆ, ದೈನಂದಿನ ಬದುಕಿನಲ್ಲಿ ಎದುರಾಗುವ ಅನೇಕ ಗೊಂದಲ, ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಲಿದೆ.

ಮಧ್ಯಮ ವರ್ಗದ ಸೂಕ್ಷ್ಮ ಪ್ರಶ್ನೆಗಳಿಗೆ ಉತ್ತರ ನೀಡಲೆಂದೇ ಕಥಾನಾಯಕನ ಸ್ನೇಹಿತನಾಗಿ ಭಗವಂತ ಭೂಮಿಗೆ ಬರುತ್ತಿದ್ದಾನೆ. ನಟ - ನಿರ್ದೇಶಕ ನವೀನ್ ಕೃಷ್ಣ , ಕೃತ್ತಿಕಾ, ಹಿರಿಯ ನಟ ಉಮೇಶ್, ಬಾಲ ಕಲಾವಿದರಾದ ಅಂಕಿತಾ, ಡ್ರಾಮಾ ಜೂನಿಯರ್ಸ್ ಖ್ಯಾತಿಯ ಅನುರಾಗ್ ಮತ್ತು ಭಗವಂತನ ಪಾತ್ರದಲ್ಲಿ ಕಾರ್ತಿಕ್ ಸಾಮಗ ಕಾಣಿಸಿಕೊಂಡಿದ್ದಾರೆ . ಅಷ್ಟೇ ಅಲ್ಲದೆ ಎಮ್.ಎನ್. ಸುರೇಶ್, ಬೆಂಗಳೂರು ನಾಗೇಶ್, ಪವನ್, ಗೌತಮಿ ಸೇರಿದಂತೆ ದೊಡ್ಡ ತಾರಾ ಬಳಗ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದೆ.

ADVERTISEMENT

ಈ ಧಾರಾವಾಹಿಯ ಶೀರ್ಷಿಕೆ ಗೀತೆಗೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಧೀಂದ್ರ ಭಾರದ್ವಾಜ್ ಮತ್ತು ರಾಘವೇಂದ್ರ ಸಿ.ವಿ. ಸಾಹಿತ್ಯ ರಚಿಸಿದ್ದಾರೆ. ಹೆಸರಾಂತ ಗಾಯಕ ಶಂಕರ್ ಮಹದೇವನ್ ಧ್ವನಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.