ಬೆಂಗಳೂರು: ಬಿಗ್ ಬಾಸ್ ಕನ್ನಡ 9ನೇ ಆವೃತ್ತಿಯ ಒಂಬತ್ತನೆ ವಾರ ಹಾಸ್ಯ ಕಲಾವಿದ ವಿನೋದ್ ಗೊಬ್ಬರಗಾಲ ಮನೆಯಿಂದ ಹೊರಹೋಗಿದ್ದಾರೆ.
ಮನೆಯ ಟಾಸ್ಕ್ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ವಿನೋದ್, ಕಳೆದ ವಾರ ಕೊಂಚ ಸಪ್ಪೆಯಾಗಿದ್ದ ಕಾರಣ ಜನಮನ್ನಣೆ ಗಳಿಸುವಲ್ಲಿ ವಿಫಲರಾಗಿದ್ದಾರೆ. ಮನೆಯ ಮೊದಲ ಕ್ಯಾಪ್ಟನ್ ಮತ್ತು ಎರಡು ಬಾರಿ ಕಿಚ್ಚನ ಚಪ್ಪಾಳೆ ಗಿಟ್ಟಿಸಿದ್ದ ವಿನೋದ್ ಎಲಿಮಿನೇಶನ್ ಎಲ್ಲರ ಅಚ್ಚರಿಗೆ ಕಾರಣವಾಗಿದೆ. 9 ವಾರ ಕಳೆದಿರುವ ಮನೆಯ ಸದಸ್ಯರಿಗೂ ಇದರಿಂದ ಶಾಕ್ ಆಗಿದೆ.
ಬಿಕ್ಕಿ ಬಿಕ್ಕಿ ಅತ್ತ ಗೊಬ್ಬರಗಾಲ
ಭಾನುವಾರದ ಎಪಿಸೋಡ್ನಲ್ಲಿ ಎಲಿಮಿನೇಶನ್ ಅಂತಿಮ ಹಂತದಲ್ಲಿ ಅನುಪಮಾ ಗೌಡ ಮತ್ತು ವಿನೋದ್ ಗೊಬ್ಬರಬಾಲ ಬಂದಿದ್ದರು. ಅಂತಿಮವಾಗಿ ಸುದೀಪ್ ತಮ್ಮ ಹೆಸರು ಘೋಷಿಸುತ್ತಿದ್ದಂತೆ ವಿನೋದ್ ನಿಂತಲ್ಲಿಯೇ ಕಣ್ಣೀರು ಹಾಕಿದರು. ಅವಕಾಶ ಕೊಟ್ಟವರಿಗೂ ಧನ್ಯವಾದ. ಆದರೆ, ನಮ್ಮ ಅಮ್ಮನಿಗೆ ಕೊಟ್ಟ ಆಸೆ ಈಡೇರಿಸಲಾಗಲಿಲ್ಲ ಎಂದು ಮರುಗಿದರು. ಗೆದ್ದು ಮನೆ ಕಟ್ಟಿಸುವ ಆಸೆ ನನ್ನದಾಗಿತ್ತು. ಅಮ್ಮನಿಗೆ ಮಾತು ಕೊಟ್ಟಿದ್ದೆ ಎಂದು ವೇದಿಕೆ ಮೇಲೂ ಅಳಲು ಆರಂಭಿಸಿದರು. ಬಳಿಕ, ಕೆಳಗೆ ಓಡಿಬಂದು ಅಲ್ಲಿ ಕುಳಿತಿದ್ದ ಅಮ್ಮನನ್ನು ತಬ್ಬಿ ಗೋಳಾಡಿದರು. ಇದನ್ನು ಗಮನಿಸುತ್ತಿದ್ದ ಸುದೀಪ್ ಮತ್ತು ನೆರೆದಿದ್ದ ಜನರು ಸ್ತಬ್ಧರಾದರು. ಬಳಿಕ, ವಿನೋದ್ ಅವರನ್ನು ಸಂತೈಸಿದ ಸುದೀಪ್, ನೀವು ಹಾಸ್ಯ ಕಲಾವಿದರು. ಅದರಿಂದಲೇ ಇಲ್ಲಿಯವರೆಗೆ ಬಂದಿದ್ದೀರಿ. ಅದನ್ನೇ ಮುಂದುವರಿಸಿಕೊಂಡು ಹೋಗಿ ಮನೆ ಕಟ್ಟುತ್ತೀರಿ ಎಂದು ತಿಳಿ ಹೇಳಿದರು.
ಗದ್ಗದಿತರಾದ ಅರುಣ್, ಶೆಟ್ಟಿ
ಹೌದು, ವಿನೋದ್ ಗೊಬ್ಬರಗಾಲ ಅವರ ಜೊತೆ ಅರುಣ್ ಸಾಗರ್ ಮತ್ತು ರೂಪೇಶ್ ಶೆಟ್ಟಿ ಉತ್ತಮ ಬಾಂಧವ್ಯ ಹೊಂದಿದ್ದರು. ಗೊಬ್ಬರಗಾಲ ಎಲಿಮಿನೇಶನ್ ಘೋಷಣೆ ಆಗುತ್ತಲೇ ಇಬ್ಬರೂ ಕಣ್ಣೀರು ಹಾಕಿದರು. ಆದರೂ ತಮ್ಮನ್ನು ತಾವೇ ಸಂತೈಸಿಕೊಂಡು ಬೀಳ್ಕೊಡುಗೆ ನೀಡಿದರು.
ಸದ್ಯ, ಮನೆಯಲ್ಲೀಗ 11 ಮಂದಿ ಉಳಿದಿದ್ದು, ಸದಸ್ಯರ ನಡುವೆ ಪೈಪೋಟಿ ಹೆಚ್ಚಿದೆ. ಹೀಗಾಗಿ, ಬರುವ ವಾರಗಳ ಎಲಿಮಿನೇಶನ್ ಮತ್ತಷ್ಟು ಕುತೂಹಲಕ್ಕೆ ಎಡೆಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.