ADVERTISEMENT

ಸಾರೋಟ ಕುದುರೆಗಳಿಗೂ ತಟ್ಟಿದ ಕೊರೊನಾ ಬಿಸಿ, ಸ್ವಯಂಸೇವಾ ಸಂಸ್ಥೆಯಿಂದ ಮೇವು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 12:41 IST
Last Updated 6 ಜುಲೈ 2020, 12:41 IST
ಸಮಭಾವ ಸಂಸ್ಥೆಯಲ್ಲಿರುವ ಕುದುರೆಗಳು
ಸಮಭಾವ ಸಂಸ್ಥೆಯಲ್ಲಿರುವ ಕುದುರೆಗಳು   

ಕೊರೊನಾ ಸೋಂಕು ಮನುಕುಲವನ್ನಷ್ಟೇ ಅಲ್ಲ, ಪ್ರಾಣಿ ಸಂಕುಲವನ್ನೂ ಕಾಡುತ್ತಿದೆ. ಲಾಕ್‌ಡೌನ್‌ ಅವಧಿಯಲ್ಲಿ ಸರಿಯಾದ ನೀರು, ಆಹಾರ ಸಿಗದೆ ಪ್ರಾಣಿ, ಪಕ್ಷಿಗಳಿಗೂ ಸಂಕಷ್ಟ ಎದುರಾಗಿದೆ.

ಅರಮನೆ ಮೈದಾನ, ಜಯಮಹಲ್‌ ಪ್ಯಾಲೇಸ್‌ ಮತ್ತುನಗರದ ಇತರ ಕಡೆಗಳಲ್ಲಿ ನಡೆಯುತ್ತಿದ್ದ ಮದುವೆ ದಿಬ್ಬಣ, ಮೆರವಣಿಗೆಯಲ್ಲಿ ವೈಯ್ಯಾರದಿಂದ ಹೆಜ್ಜೆ ಹಾಕುತ್ತ ಗಮನ ಸೆಳೆಯುತ್ತಿದ್ದ ಕುದುರೆಗಳ ಆಹಾರಕ್ಕೂ ಕೊರೊನಾ ಸಂಚಕಾರ ತಂದಿದೆ.

ಕೊರೊನಾದಿಂದಾಗಿ ಇಡೀ ದೇಶ ಲಾಕ್‌ಡೌನ್‌ ಆಗಿದೆ. ಮದುವೆ, ಜನ್ಮದಿನ, ಸಿನಿಮಾ ಬಿಡುಗಡೆಯಂತಹ ಮೊದಲಾದ ಅದ್ಧೂರಿ ಸಮಾರಂಭಗಳಿಗೆ ಸರಕಾರ ನಿರ್ಬಂಧ ಹೇರಿದೆ. ಇದರಿಂದ ಸಹಜವಾಗಿ ಸಾರೋಟ ಮತ್ತು ಕುದರೆ ಮಾಲೀಕರ ಆದಾಯಕ್ಕೆ ಕತ್ತರಿ ಬಿದ್ದಿದೆ. ಇದು ಅಂತಿಮವಾಗಿ ಕುದುರೆಗಳ ಮೇಲೂ ಪರಿಣಾಮ ಬೀರಿದೆ.

ADVERTISEMENT

ಕುದುರೆಗಳಿಗೆ ದುಬಾರಿ ಓಟ್ಸ್‌, ಹುರುಳಿಕಾಳು ಸೇರಿದಂತೆ ಮೇವು ಸಂಗ್ರಹಿಸುವುದು ಅವುಗಳ ಮಾಲೀಕರಿಗೆ ಸಮಸ್ಯೆಯಾಗಿದೆ. ಮೊದಲಿನಂತೆ ಪೌಷ್ಟಿಕಆಹಾರ ಸಿಗದೆ ಕುದುರೆಗಳು ಸೊರಗುತ್ತಿವೆ. ಕುದುರೆಗಳ ಮಾಲೀಕರು ಅಸಹಾಯಕರಾಗಿದ್ದಾರೆ.

ಇದನ್ನು ಮನಗಂಡ ಬೆಂಗಳೂರಿನಬನ್ನೇರುಘಟ್ಟ ರಸ್ತೆಯ ಆರ್‌ಆರ್‌ ಲೇಔಟ್‌ನಲ್ಲಿನ ‘ಸಮಭಾವ’ ಎಂಬ ಸ್ವಯಂಸೇವಾ ಸಂಸ್ಥೆಯು ‘ಓಟ್ಸ್‌ ಫಾರ್‌ ಎ ಕಾಸ್’ ಎಂಬ ಅಭಿಯಾನದ ಮೂಲಕ ಕುದುರೆಗಳಿಗೆ ಮೇವು ಸಂಗ್ರಹಿಸುತ್ತಿದೆ. ಸಂಕಷ್ಟದಲ್ಲಿರುವ ಕುದುರೆ ಮಾಲೀಕರನ್ನು ಸಂಪರ್ಕಿಸಿ ಕುದುರೆಗಳಿಗೆ ಅಗತ್ಯ ಆಹಾರ ವಿತರಿಸುತ್ತಿದೆ. ಲಾಕ್‌ಡೌನ್‌ನಲ್ಲಿ ನಗರದ ಬಿಡಾಡಿ ಕುದುರೆಗಳಿಗೂ ಮೇವು ನೀಡುವ ಕೆಲಸ ಮಾಡುತ್ತಿದೆ. ಸದ್ಯ ಸಂಸ್ಥೆಯು 20ಕ್ಕೂ ಹೆಚ್ಚು ಕುದುರೆಗಳ ಆರೈಕೆ ನೋಡಿಕೊಳ್ಳುತ್ತಿದೆ.

ಪ್ರತಿ ತಿಂಗಳು ಈ ಕುದುರೆಗಳಿಗೆ ಕನಿಷ್ಟ 27 ಮೇವಿನ ಚೀಲದ ಅವಶ್ಯಕತೆ ಇದೆ. ಪ್ರತಿ ಚೀಲಕ್ಕೆ ₹ 1,710 ವೆಚ್ಚವಾಗುತ್ತದೆ. ಪ್ರಾಣಿಪ್ರಿಯರು ಸಂಸ್ಥೆಯೊದಿಗೆ ಕೈ ಜೋಡಿಸಬಹುದು ಎಂದುಸಮಭಾವ ಸಂಸ್ಥೆಯ ಸಂಸ್ಥಾಪಕ‌ ಸಂದೇಶ್ ರಾಜು ತಿಳಿಸಿದ್ದಾರೆ.

ಸಮಭಾವ ಸರ್ಕಾರೇತರ ಸೇವಾ ಸಂಸ್ಥೆಯುಪ್ರಾಣಿಗಳ ರಕ್ಷಣೆ ಮತ್ತುಹಕ್ಕುಗಳಿಗಾಗಿ ಕೆಲಸ ಮಾಡುತ್ತಿದೆ. ಪ್ರಾಣಿಗಳ ಹಕ್ಕುಗಳ ಬಗ್ಗೆಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.ವಿವರ: Samabhava.org,ದೂರವಾಣಿ ಸಂಪರ್ಕ: 80 40977216

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.