ADVERTISEMENT

ಆಳ–ಅಗಲ | ಮರಣದಂಡನೆ: ಯಾವುದು ‘ಮಾನವೀಯ’ ವಿಧಾನ?

ಬಿ.ವಿ. ಶ್ರೀನಾಥ್
Published 23 ಅಕ್ಟೋಬರ್ 2025, 23:30 IST
Last Updated 23 ಅಕ್ಟೋಬರ್ 2025, 23:30 IST
   
ಭಾರತದಲ್ಲಿ ಮರಣದಂಡನೆ ವಿಧಿಸಲಾಗಿರುವ ಅಪರಾಧಿಗಳಿಗೆ ಯಾವ ವಿಧಾನದ ಮೂಲಕ ಪ್ರಾಣಹರಣ ಮಾಡಬೇಕು ಎನ್ನುವುದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದ್ದು, ಚರ್ಚೆಗೆ ಗ್ರಾಸವಾಗಿದೆ. ಗಲ್ಲಿಗೇರಿಸುವುದರ ಬದಲು ವಿಷದ ಇಂಜೆಕ್ಷನ್ ನೀಡುವ ಮೂಲಕ ಅಪರಾಧಿ ಸಾಯುವಂತೆ ಮಾಡಬೇಕು ಎನ್ನುವ ವಾದ ಕೇಳಿಬಂದಿದೆ. ಆದರೆ, ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ಯಾವ ಬದಲಾವಣೆಗೂ ಸಿದ್ಧವಿರುವಂತೆ ಕಾಣುತ್ತಿಲ್ಲ

ಮರಣದಂಡನೆಯನ್ನು ಅನೇಕ ದೇಶಗಳಲ್ಲಿ ರದ್ದುಪಡಿಸಲಾಗಿದೆ. ಭಾರತದಲ್ಲಿ ವಿರಳ ಪ್ರಕರಣಗಳಲ್ಲಿ ಮಾತ್ರವೇ ಮರಣದಂಡನೆ ವಿಧಿಸಲಾಗುತ್ತಿದೆ. ಈ ಶಿಕ್ಷೆ ವಿಧಿಸಲ್ಪಟ್ಟವರ ಪ್ರಾಣಹರಣವನ್ನು ಯಾವ ವಿಧಾನದ ಮೂಲಕ ಮಾಡಬೇಕು ಎನ್ನುವುದು ದೇಶದಲ್ಲಿ ಬಹಳ ಹಿಂದಿನಿಂದಲೂ ಚರ್ಚೆಯಾಗುತ್ತಲೇ ಇದೆ. 

ಅಪರಾಧಿಗಳಿಗೆ ನೇಣು ಹಾಕುವುದು ಅತ್ಯಂತ ಕ್ರೂರ ಹಾಗೂ ಅನಾಗರಿಕ ಪದ್ಧತಿ. ಇದು ಹಳೆಯ ಹಾಗೂ ಅತ್ಯಂತ ಯಾತನಾದಾಯಕ ಪದ್ಧತಿಯಾಗಿದೆ ಎನ್ನುವ ಆಕ್ಷೇಪಣೆಗಳು ಹಿಂದೆಯೇ ಕೇಳಿಬಂದಿದ್ದವು. ಗಲ್ಲಿಗೇರಿಸುವಾಗ ಕುತ್ತಿಗೆಯ ಮೂಳೆ ಮುರಿಯುವುದು, ಕಣ್ಣು ಗುಡ್ಡೆ ಹೊರಬರುವುದು, ನಾಲಗೆ ಹೊರಚಾಚಿಕೊಂಡಿರುವುದು, ದೇಹದ ಭಾಗಗಳು ನೋಡಲಾಗದಂತೆ ವಿರೂಪಗೊಳ್ಳುವುದು ವರದಿಯಾಗಿವೆ. ಹೆಚ್ಚಿನ ಸಂದರ್ಭಗಳಲ್ಲಿ ಅಪರಾಧಿಗಳು ಮಲ, ಮೂತ್ರ ವಿಸರ್ಜನೆಯನ್ನೂ ಮಾಡಿಕೊಳ್ಳುತ್ತಾರೆ. ಈ ವಿಧಾನದಲ್ಲಿ ಅಪರಾಧಿಯ ಪ್ರಾಣ ಹೋಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಕ್ಷಿಪ್ರವಾದ, ಕಡಿಮೆ ಯಾತನೆಯ ಮಾರ್ಗಗಳನ್ನು ಹುಡುಕಬೇಕು; ವಿಷದ ಚುಚ್ಚುಮದ್ದು ನೀಡುವುದು, ಗುಂಡು ಹಾರಿಸಿ ಸಾಯಿಸುವುದು, ವಿದ್ಯುತ್ ಸ್ಪರ್ಶದ ಮೂಲಕ ಸಾವು, ಸಾರಜನಕದಿಂದ ಉಸಿರುಗಟ್ಟಿಸಿ ಸಾಯುವಂತೆ ಮಾಡುವುದು.. ಹೀಗೆ ಮರಣದಂಡನೆ ಜಾರಿಗೆ ಹಲವು ಪರ್ಯಾಯ ಮಾರ್ಗಗಳಿದ್ದು, ಅವುಗಳನ್ನು ಪರಿಗಣಿಸಬೇಕು ಎನ್ನುವ ಒತ್ತಾಯ ಕೇಳಿಬಂದಿತ್ತು.

ಗಲ್ಲು ಶಿಕ್ಷೆಯ ಸಾಂವಿಧಾನಿಕತೆ:
ಮರಣದಂಡನೆಯ ವಿಧಾನವು ನಾಲ್ಕು ಮುಖ್ಯ ಆಶಯಗಳನ್ನು ಒಳಗೊಳ್ಳಬೇಕು ಎಂದು 1983ರ ದೀನಾ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಸಾವಿನ ವಿಧಾನವು ಸರಳವಾಗಿರಬೇಕು ಮತ್ತು ಕ್ಷಿಪ್ರವಾಗಿ ಸಾವು ತರುವಂತಿರಬೇಕು, ಅಪರಾಧಿಯು ಬೇಗ ಪ್ರಜ್ಞಾಶೂನ್ಯನಾಗಿ ಸಾವಿಗೀಡಾಗಬೇಕು, ಘನತೆಯಿಂದ ಕೂಡಿರಬೇಕು ಮತ್ತು ದೇಹ/ಅಂಗ ವಿರೂಪಗೊಳ್ಳುವಂತೆ ಇರಬಾರದು ಎಂದು ಉನ್ನತ ನ್ಯಾಯಾಲಯ ಸೂಚಿಸಿತ್ತು. ಕೊನೆಗೆ, ಸುಪ್ರೀಂ ಕೋರ್ಟ್ ಇದೇ ಪ್ರಕರಣದಲ್ಲಿ ಗಲ್ಲು ಶಿಕ್ಷೆಯ ವಿಧಾನದ ಸಾಂವಿಧಾನಿಕತೆಯನ್ನು ಎತ್ತಿಹಿಡಿದಿತ್ತು. ದೇಶದಲ್ಲಿ ಗಲ್ಲು ಶಿಕ್ಷೆಯೊಂದೇ ಮರಣದಂಡನೆಯ ಜಾರಿ ವಿಧಾನ ಎಂದು ಸ್ಪಷ್ಟಪಡಿಸಿತ್ತು. ವಿಷದ ಇಂಜೆಕ್ಷನ್ ಮೂಲಕ ಪ್ರಾಣಹರಣ ಮಾಡುವ ವಿಧಾನವು ಎಲ್ಲ ಸಂದರ್ಭಗಳಲ್ಲಿಯೂ ಕ್ಷಿಪ್ರವಾಗಿ ಸಾವು ತರುತ್ತದೆ ಎನ್ನುವುದಕ್ಕೆ ಆಧಾರವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು.

ಆದರೆ, ಗಲ್ಲಿಗೇರಿಸುವ ವಿಧಾನವನ್ನು ಪುನರ್ ಪರಿಶೀಲಿಸಬೇಕು ಎಂದು ಭಾರತದ ಕಾನೂನು ಆಯೋಗವು 2003ರಲ್ಲಿ ಸೂಚಿಸಿತು. ವಿಷದ ಇಂಜೆಕ್ಷನ್ ನೀಡುವುದು ಹೆಚ್ಚು ಮಾನವೀಯವಾಗಿದ್ದು, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಈ ವಿಧಾನವನ್ನು ಬಳಸಲಾಗುತ್ತಿದೆ ಎನ್ನುವುದು ಆಯೋಗದ ಅಭಿಪ್ರಾಯವಾಗಿತ್ತು.

ADVERTISEMENT
ಗಲ್ಲು ಏಕೆ ಬೇಡ?:
2017ರಲ್ಲಿ ಹಿರಿಯ ವಕೀಲ ರಿಷಿ ಮಲ್ಹೋತ್ರಾ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿ, ನೇಣಿಗೆ ಬದಲು ಮರಣದಂಡನೆಗೆ ಪರ್ಯಾಯ ಮಾರ್ಗ ಅನುಸರಿಸಲು ಆದೇಶಿಸಬೇಕು ಎಂದು ಕೋರಿದರು. ಗಲ್ಲಿಗೇರಿಸಿದರೆ, ಅವರ ದೇಹವು ನೇಣು ಹಗ್ಗದಲ್ಲಿಯೇ 40 ನಿಮಿಷಗಳವರೆಗೆ ಇರುತ್ತದೆ; ಅದು ಕ್ರೂರ ಮತ್ತು ಬರ್ಬರ. ಅದರ ಬದಲು ಮಾನವೀಯವಾದ, ಘನತೆಯಿಂದ ಕೂಡಿದ ವಿಷದ ಚುಚ್ಚುಮದ್ದಿನ ಮಾರ್ಗ ಅನುಸರಿಸುವುದು ಉತ್ತಮ. ಸಂವಿಧಾನದ 21ನೇ ವಿಧಿಯು ಜೀವಿಸುವ ಹಕ್ಕು ಮತ್ತು ಘನತೆಯ ಹಕ್ಕುಗಳನ್ನು ಒಳಗೊಂಡಿರುವಂತೆಯೇ ಘನತೆಯಿಂದ ಸಾಯುವ ಹಕ್ಕನ್ನೂ ನೀಡಿದೆ; ಅಮೆರಿಕದ ಹೆಚ್ಚಿನ ರಾಜ್ಯಗಳಲ್ಲಿ ವಿಷದ ಇಂಜೆಕ್ಷನ್ ನೀಡುವ ಪದ್ಧತಿ ಇದೆ ಎನ್ನುವುದು ಅವರ ವಾದ.

ನೇಣಿಗೇರಿಸುವುದಕ್ಕಿಂತ ಇತರ ಮಾರ್ಗಗಳು ಕಡಿಮೆ ಯಾತನಾದಾಯಕ ಎನ್ನುವುದನ್ನು ನಿರಾಕರಿಸಿದ್ದ ಕೇಂದ್ರ ಸರ್ಕಾರವು, ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ 2018ರಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿತ್ತು. ಇದರ ಬಗ್ಗೆ ತಜ್ಞರ ಸಮಿತಿ ರಚನೆಗೆ ‌ಕ್ರಮ ಕೈಗೊಳ್ಳಬೇಕು ಎಂದು 2023ರಲ್ಲಿ ತಿಳಿಸಿದ್ದ ನ್ಯಾಯಾಲಯವು, ಈ ಕುರಿತು ಸಮಗ್ರ ಮಾಹಿತಿ ಒದಗಿಸುವಂತೆ ಕೇಂದ್ರವನ್ನು ಕೇಳಿತ್ತು. ಆದರೆ, ಅಪರಾಧಿಗಳಿಗೆ ಶಿಕ್ಷೆ ನೀಡುವ ವಿಧಾನದ ಬಗ್ಗೆ ನ್ಯಾಯಾಂಗವು ಶಾಸಕಾಂಗಕ್ಕೆ ನಿರ್ದೇಶಿಸಲಾಗದು ಎಂದು ಅಭಿಪ್ರಾಯಪಟ್ಟಿತ್ತು.

ಬದಲಾಗದ ಕೇಂದ್ರದ ಧೋರಣೆ:
ತಾನು ಯಾವ ವಿಧಾನದ ಮೂಲಕ ಸಾಯಬೇಕು ಎನ್ನುವ ಆಯ್ಕೆಯನ್ನು ಮರಣದಂಡನೆ ವಿಧಿಸಲ್ಪಟ್ಟಿರುವ ಅಪರಾಧಿಗೇ ನೀಡಬೇಕು ಎನ್ನುವುದು ಮಲ್ಹೋತ್ರಾ ಅವರ ವಾದ. ಆದರೆ, ಅದು ಕಾರ್ಯಸಾಧುವಲ್ಲ ಎಂದು ಕೇಂದ್ರವು ಪ್ರತಿಕ್ರಿಯಿಸಿದೆ.

ಪ್ರಸ್ತುತ ಈ ಕುರಿತ ವಾದ–ಪ್ರತಿವಾದ ನಡೆಯುತ್ತಿದ್ದು, ನ್ಯಾಯಾಲಯ ವಿಚಾರಣೆ ಮುಂದುವರಿಸುತ್ತಿದೆ. ಕಾಲ ಬದಲಾಗಿದೆ; ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರದ ಮನೋಭಾವವು ವಿಕಾಸಗೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚ್ಯವಾಗಿ ಹೇಳಿದೆ. ಇನ್ನೊಂದೆಡೆ, ಮರಣದಂಡನೆಯೇ ಅಮಾನವೀಯ ಶಿಕ್ಷಾ ಪದ್ಧತಿಯಾಗಿದ್ದು, ಅದನ್ನು ರದ್ದುಪಡಿಸಬೇಕು ಎನ್ನುವ ಬೇಡಿಕೆ ಇದೆ.

ವೈದ್ಯರ ವಿರೋಧ
ಗಲ್ಲು ಶಿಕ್ಷೆಯ ವಿಧಾನದಲ್ಲಿ, ಅಪರಾಧಿ ಸತ್ತಿದ್ದಾನೆಯೇ ಇಲ್ಲವೇ ಎನ್ನುವುದನ್ನು ದೃಢೀಕರಿಸುವುದಕ್ಕಷ್ಟೇ ವೈದ್ಯರ ಪಾತ್ರವು ಸೀಮಿತವಾಗಿರುತ್ತದೆ. ಆದರೆ, ವಿಷದ ಇಂಜೆಕ್ಞನ್ ಚುಚ್ಚುವ ವಿಧಾನದಲ್ಲಿ ವೈದ್ಯರೇ ಮರಣದಂಡನೆ ಜಾರಿ ಮಾಡುವವರೂ ಆಗಿರುತ್ತಾರೆ. ಹಲವು ದೇಶಗಳಲ್ಲಿ ವೈದ್ಯರು ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ವೈದ್ಯರ ಕಾರ್ಯವು ಜೀವ ಉಳಿಸುವುದೇ ವಿನಾ ಜೀವ ತೆಗೆಯುವುದಲ್ಲ ಎನ್ನುವುದು ಅವರ ವಾದ. ಮರಣದಂಡನೆ ಜಾರಿಯಲ್ಲಿ ವೈದ್ಯರ ಪಾತ್ರ ಪ್ರಮುಖವಾಗಿರುವ ಯಾವುದೇ ವಿಧಾನವನ್ನು ತಾನು ವಿರೋಧಿಸುವುದಾಗಿ ಬ್ರಿಟಿಷ್ ಮೆಡಿಕಲ್ ಕೌನ್ಸಿಲ್ ಹೇಳಿತ್ತು. ವಿಶ್ವ ವೈದ್ಯಕೀಯ ಸಂಘವೂ ಇದರ ವಿರುದ್ಧ ನಿಲುವು ತಳೆದಿದೆ. ಅಮೆರಿಕದಲ್ಲಿಯೂ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಅಮೆರಿಕದಲ್ಲಿ ವೈದ್ಯರು ಜೈಲು ಅಧಿಕಾರಿಗಳಿಗೇ ಚುಚ್ಚುಮದ್ದು ನೀಡುವ ತರಬೇತಿ ನೀಡುವ ಪದ್ಧತಿ ಅನುಸರಿಸಲಾಯಿತು. ಆದರೆ, ವೈದ್ಯರ ಅನುಪಸ್ಥಿತಿಯಲ್ಲಿ ಈ ವಿಧಾನವು ದೀರ್ಘವೂ ತ್ರಾಸದಾಯಕವೂ ಆಗಿದೆ ಎನ್ನುವ ವರದಿಗಳಿವೆ.

ಮರಣದಂಡನೆ ಹೆಚ್ಚಳ

ಜಗತ್ತಿನ ಶೇ 70ರಷ್ಟು ರಾಷ್ಟ್ರಗಳಲ್ಲಿ ಮರಣದಂಡನೆಯನ್ನು ರದ್ದುಪಡಿಸಲಾಗಿದೆ. ಆದರೂ, ಸುಮಾರು 50 ದೇಶಗಳಲ್ಲಿ ಈ ಶಿಕ್ಷೆ ಕಾನೂನುಬದ್ಧವಾಗಿದೆ. ಇದರಲ್ಲಿ ಭಾರತ, ಅಮೆರಿಕ, ಚೀನಾ, ಅಘ್ಗಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ, ಜಪಾನ್, ಇರಾನ್, ಇರಾಕ್, ಸೌದಿ ಅರೇಬಿಯಾ, ಥಾಯ್ಲೆಂಡ್ ಮುಂತಾದ ದೇಶಗಳಿವೆ. 2024ರಲ್ಲಿ ಚೀನಾ, ಇರಾನ್, ಸೌದಿ ಅರೇಬಿಯಾ, ಇರಾಕ್, ಯೆಮನ್‌ನಲ್ಲಿ ಹೆಚ್ಚು ಮಂದಿಗೆ ಮರಣದಂಡನೆ ವಿಧಿಸಲಾಗಿದೆ.

ಚೀನಾದಲ್ಲಿ ಅತಿ ಹೆಚ್ಚು ಮಂದಿಗೆ ಸಾವಿನ ಶಿಕ್ಷೆ ನೀಡಲಾಗಿದೆ.ಹೆಚ್ಚು ರಾಷ್ಟ್ರಗಳಲ್ಲಿ ಮರಣದಂಡನೆ ರದ್ದುಪಡಿಸಲಾಗುತ್ತಿದೆಯಾದರೂ ಈ ಶಿಕ್ಷೆಗೆ ಗುರಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸೌದಿ ಅರೇಬಿಯಾದಲ್ಲಿ ಶಿಕ್ಷೆಯ ಪ್ರಮಾಣವು ಹೆಚ್ಚಾಗುತ್ತಿದ್ದು, 2025ರಲ್ಲಿ ಜಾಗತಿಕ ಮಟ್ಟದಲ್ಲಿ ಈ ಸಂಖ್ಯೆ ಇನ್ನೂ ಏರಿಕೆ ಕಾಣಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಅಮೆರಿಕದಲ್ಲಿ ಪ್ರಸಕ್ತ ವರ್ಷ 39 ಮಂದಿಯನ್ನು ಮರಣದಂಡನೆಗೆ ಈಡು ಮಾಡಲಾಗಿದೆ. ಅವುಗಳಲ್ಲಿ 33 ಮಂದಿಗೆ ವಿಷದ ಇಂಜೆಕ್ಷನ್ ನೀಡಿ, ಇಬ್ಬರಿಗೆ ಗುಂಡು ಹೊಡೆದು, ನಾಲ್ವರ ಮಾಸ್ಕ್‌ಗಳ ಒಳಗೆ ಸಾರಜನಕ ಪೂರೈಸಿ ಉಸಿರುಗಟ್ಟಿಸಿ ಸಾಯಿಸಲಾಗಿದೆ. ಸಾರಜನಕದಿಂದ ಉಸಿರುಗಟ್ಟಿಸುವ ವಿಧಾನವು ಕ್ರೂರ ಮತ್ತು ಅಮಾನವೀಯ ಎಂದು ವಿಶ್ವಸಂಸ್ಥೆ ಆಕ್ಷೇಪಿಸಿದೆ. ಅಮೆರಿಕದ 50 ರಾಜ್ಯಗಳ ಪೈಕಿ 23ರಲ್ಲಿ ಮರಣದಂಡನೆಯನ್ನು ರದ್ದುಪಡಿಸಲಾಗಿದೆ.

ಭಾರತದಲ್ಲಿ ಹೆಚ್ಚು
ಜಗತ್ತಿನಲ್ಲಿ ಅತಿ ಹೆಚ್ಚು ಮರಣದಂಡನೆ ‌ವಿಧಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಅದರಲ್ಲೂ ಕೆಳಹಂತದ ನ್ಯಾಯಾಲಯಗಳು ಹೆಚ್ಚಿನ ಪ್ರಮಾಣದಲ್ಲಿ ಮರಣದಂಡನೆ ವಿಧಿಸುತ್ತಿವೆ. ಮರಣದಂಡನೆ ವಿಧಿಸಲ್ಪಟ್ಟ ಪ್ರತಿ ನಾಲ್ವರಲ್ಲಿ ಒಬ್ಬರು ಉತ್ತರ ಪ್ರದೇಶಕ್ಕೆ (130) ಸೇರಿದವರು. ನಂತರದ ಸ್ಥಾನಗಳಲ್ಲಿ ಗುಜರಾತ್ (71), ಮಹಾರಾಷ್ಟ್ರ (42), ಹರಿಯಾಣ (38), ಪಶ್ಚಿಮ ಬಂಗಾಳ (37), ಕೇರಳ (35), ಮಧ್ಯಪ್ರದೇಶ ಇವೆ. ಕರ್ನಾಟಕದಲ್ಲಿ 22 ಮಂದಿಗೆ ಈ ಶಿಕ್ಷೆ ವಿಧಿಸಲಾಗಿದ್ದು, ಜೈಲುವಾಸ ಅನುಭವಿಸುತ್ತಿದ್ದಾರೆ. ಪ್ರಸ್ತುತ ಭಾರತದ ವಿವಿಧ ಜೈಲುಗಳಲ್ಲಿ ಮರಣದಂಡನೆ ವಿಧಿಸಲ್ಪಟ್ಟ 564 ಮಂದಿ (2024ರ ಕೊನೆಗೆ) ಇದ್ದು, ಶಿಕ್ಷೆ ಜಾರಿಯನ್ನು ಎದುರು ನೋಡುತ್ತಿದ್ದಾರೆ. ಇದು ಎರಡು ದಶಕಗಳಲ್ಲಿಯೇ ಅತಿ ದೊಡ್ಡ ಸಂಖ್ಯೆಯಾಗಿದೆ.

ಆಧಾರ: ಪಿಟಿಐ, ಎಎಫ್‌ಪಿ, ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್, ಅಮ್ನೆಸ್ಟಿ ಇಂಟರ್‌ನ್ಯಾಷನಲ್, ದೆಹಲಿಯ ನ್ಯಾಷನಲ್ ಲಾ ಕಾಲೇಜ್ ಯೂನಿವರ್ಸಿಟಿ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.