ADVERTISEMENT

ಆಳ–ಅಗಲ | ಅಲ್ಪಾವಧಿ ಸಿಜೆಐ: ಸಾಂವಿಧಾನಿಕ ತೀರ್ಮಾನಕ್ಕೆ ಅಡ್ಡಿ?

ಮಂಜುನಾಥ್ ಹೆಬ್ಬಾರ್‌
Published 19 ಮೇ 2025, 23:30 IST
Last Updated 19 ಮೇ 2025, 23:30 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   
ಸಿಜೆಐ ಸಂಜೀವ್‌ ಖನ್ನಾ ಅವರ ನಿವೃತ್ತಿ ನಂತರ ನ್ಯಾ. ಬಿ.ಆರ್‌.ಗವಾಯಿ ಅವರು ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಜೀವ್‌ ಖನ್ನಾ ಅವರು ಆರು ತಿಂಗಳು ಎರಡು ದಿನಗಳಿಗೆ ದೇಶದ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಹಾಲಿ ಸಿಜೆಐ ಗವಾಯಿ ಅವರ ಅಧಿಕಾರಾವಧಿಯೂ ಆರು ತಿಂಗಳು ಒಂಬತ್ತು ದಿನಗಳಿಗೆ ಮುಗಿಯುತ್ತದೆ. ಮುಂದಿನ ಆರು ವರ್ಷಗಳಲ್ಲಿ ದೇಶವು ಏಳು ಸಿಜೆಐಗಳನ್ನು ಕಾಣಲಿದೆ. ಎಲ್ಲರ ಅಧಿಕಾರ ಅವಧಿ ಕಡಿಮೆ ಇರುವುದು ಇದಕ್ಕೆ ಕಾರಣ. ಅಲ್ಪಾವಧಿಗೆ ಸಿಜೆಐ ಹುದ್ದೆಯಲ್ಲಿರುವುದರಿಂದ ಸಾಂವಿಧಾನಿಕವಾಗಿ ಮಹತ್ವವಿರುವ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ವಿಳಂಬವಾಗುತ್ತದೆ. ಹಾಗಾಗಿ, ಬೇರೆ ಸಾಂವಿಧಾನಿಕ ಹುದ್ದೆಗಳಿಗೆ ಇರುವ ರೀತಿಯಲ್ಲಿ ಸಿಜೆಐ ಹುದ್ದೆಗಳ ಸೇವಾವಧಿಯನ್ನೂ ನಿರ್ದಿಷ್ಟ ಅವಧಿಗೆ ನಿಗದಿಪಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಪ್ರಕರಣ 1: ವಕ್ಫ್‌ ತಿದ್ದುಪಡಿ ಕಾಯ್ದೆ–2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ 72 ಅರ್ಜಿಗಳ ವಿಚಾರಣೆಯನ್ನು ಹಿಂದಿನ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ನೇತೃತ್ವದ ಪೀಠವು ಏಪ್ರಿಲ್‌ 16ರಂದು ಕೈಗೆತ್ತಿಕೊಂಡಿತು. ಕಾಯ್ದೆಯ ಕೆಲವೊಂದು ನಿಯಮಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡುವ ಇಂಗಿತ ವ್ಯಕ್ತಪಡಿಸಿತು. ಕೋರ್ಟ್‌ ತೀರ್ಪಿನಿಂದ ಮುಜುಗರ ಆಗುವುದನ್ನು ತಪ್ಪಿಸಲು ಕೇಂದ್ರವು ಏ. 17ರ ವಿಚಾರಣೆಯ ಸಂದರ್ಭದಲ್ಲಿ, ‘ನ್ಯಾಯಾಲಯಗಳು ವಕ್ಫ್‌ ಎಂದು ಘೋಷಿಸಿರುವ ಆಸ್ತಿಗಳನ್ನು ಡಿ–ನೋಟಿಫೈ ಮಾಡುವುದಿಲ್ಲ’ ಎಂದು ಹೇಳಿತು. ಕೆಲವೊಂದು ನಿಯಮಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕೇ ಬೇಡವೇ ಎಂಬ ಬಗ್ಗೆ ಮೇ 5ರಂದು ತೀರ್ಮಾನ ಕೈಗೊಳ್ಳುವುದಾಗಿ ಸಿಜೆಐ ಪೀಠ ತಿಳಿಸಿತು. ಮೇ 5ರಂದು ವಿಚಾರಣೆ ಆರಂಭವಾಗುತ್ತಿದ್ದಂತೆ ಸಿಜೆಐ ಖನ್ನಾ ಅವರು ವಿಚಾರಣೆಯಿಂದ ಹಿಂದಕ್ಕೆ ಸರಿಯುವುದಾಗಿ ತಿಳಿಸಿದರು. ನಿವೃತ್ತಿಗೆ ಒಂದು ವಾರ ಇರುವುದರಿಂದ ಈ ತೀರ್ಮಾನಕ್ಕೆ ಬಂದಿರುವುದಾಗಿ ಪ್ರಕಟಿಸಿದರು. ಇದೀಗ, ಸಿಜೆಐ ಬಿ.ಆರ್‌.ಗವಾಯಿ ನೇತೃತ್ವದ ಪೀಠ ಪ್ರಕರಣದ ವಿಚಾರಣೆ ಆರಂಭಿಸಿದೆ. ಗವಾಯಿ ಅವರ ಅವಧಿ ಆರು ತಿಂಗಳುಗಳಷ್ಟೇ. 

ಪ್ರಕರಣ 2: ಎರಡು ವರ್ಷ ಸಿಜೆಐ ಆಗಿದ್ದ ಡಿ.ವೈ.ಚಂದ್ರಚೂಡ್‌ ಅವರು 23 ಸಾಂವಿಧಾನಿಕ ಪೀಠಗಳ ನೇತೃತ್ವ ವಹಿಸಿದ್ದರು. 612 ತೀರ್ಪುಗಳನ್ನು ನೀಡಿದ್ದರು. ಹೈಬ್ರಿಡ್‌ ವಿಚಾರಣೆ ಸೇರಿದಂತೆ ಅನೇಕ ಸುಧಾರಣೆಗಳನ್ನು ತಂದಿದ್ದರು. ವೈವಾಹಿಕ ಅತ್ಯಾಚಾರ ಸಂಬಂಧ ಪತಿಗೆ ನೀಡಲಾಗಿರುವ ಕಾನೂನು ರಕ್ಷಣೆ ಪ್ರಶ್ನಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಅವರ ನೇತೃತ್ವದ ಪೀಠವು 2024ರ ಅಕ್ಟೋಬರ್‌ನಲ್ಲಿ ನಡೆಸಬೇಕಿತ್ತು. ನಿವೃತ್ತಿಯ ಸನಿಹದಲ್ಲಿದ್ದ ಕಾರಣ ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದರು. ಮುಂದಿನ ಸಿಜೆಐ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದರು. ಆದರೆ, ನಂತರದ ಸಿಜೆಐ ಅವರು ಪೀಠ ರಚನೆ ಮಾಡಲೇ ಇಲ್ಲ.

ಪ್ರಕರಣ 3: ಅಬಕಾರಿ ನೀತಿ ಹಗರಣದಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ನ್ಯಾ. ಸಂಜೀವ್ ಖನ್ನಾ ನೇತೃತ್ವದ ಪೀಠವು 2024ರ ನವೆಂಬರ್‌ನಲ್ಲಿ ಜಾಮೀನು ನೀಡಿತ್ತು. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರದ ಬಗ್ಗೆ ವಿಸ್ತೃತ ಪೀಠದಿಂದ ವಿಚಾರಣೆ ನಡೆಯಬೇಕು ಎಂದು ಈ ಪೀಠವು ಅಭಿಪ್ರಾಯಪಟ್ಟಿತ್ತು. ಆದರೆ, ಈವರೆಗೆ ವಿಸ್ತೃತ ಪೀಠ ರಚನೆಯಾಗಿಲ್ಲ. 

ADVERTISEMENT

– ಸುಪ್ರೀಂ ಕೋರ್ಟ್‌ನಲ್ಲಿ ಕಳೆದ ಏಳು ತಿಂಗಳಲ್ಲಿ ಮೂರು ಮಹತ್ವದ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ಆಗಿರುವ ಬೆಳವಣಿಗೆ ಇದು. ಈ ಮೂರೂ ಪ್ರಕರಣಗಳು ಸಾಂವಿಧಾನಿಕ ಮಹತ್ವದ್ದು. ನಿವೃತ್ತಿಯ ಕಾರಣ ಮುಂದಿಟ್ಟು ಮುಖ್ಯ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದಕ್ಕೆ ಸರಿದರು. 

ಸುಪ್ರೀಂ ಕೋರ್ಟ್‌ ಈ ವರ್ಷವೇ ಮೂವರು ಮುಖ್ಯ ನ್ಯಾಯಮೂರ್ತಿಗಳನ್ನು ಕಾಣುತ್ತಿದೆ. 2031ರವರೆಗೆ ಅಂದರೆ, ಆರು ವರ್ಷಗಳಲ್ಲಿ ಎಂಟು ಮಂದಿ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ (ಈಗಿನ ಸಿಜೆಐ ಸೇರಿದಂತೆ). ‘ಸಿಜೆಐಗಳು ಅಲ್ಪಾವಧಿಗೆ ಇದ್ದರೆ ನ್ಯಾಯಾಂಗ ಕ್ಷೇತ್ರದಲ್ಲಿ ಆಡಳಿತಾತ್ಮಕ ಸುಧಾರಣೆ ಆಗುವುದಿಲ್ಲ. ಸಾಂವಿಧಾನಿಕ ಪ್ರಕರಣಗಳ ವಿಚಾರಣೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ, ಬೇರೆ ಸಾಂವಿಧಾನಿಕ ಹುದ್ದೆಗಳ ರೀತಿಯಲ್ಲಿ ನಿರ್ದಿಷ್ಟ ಸೇವಾವಧಿ ನಿಗದಿಪಡಿಸಬೇಕು’ ಎಂಬ ಚರ್ಚೆ ಆರಂಭವಾಗಿದೆ. 

‘ಸಿಜೆಐ ಆಗಿ ನ್ಯಾಯಾಂಗದಲ್ಲಿ ಹಲವು ಸುಧಾರಣೆಗಳನ್ನು ತರುವ ಕನಸಿತ್ತು. ಅಲ್ಪಾವಧಿಯಿಂದ ಸಾಧ್ಯವಾಗಿಲ್ಲ. ಕೇಂದ್ರ ಗೃಹ ಕಾರ್ಯದರ್ಶಿಯ ಮಾದರಿಯಲ್ಲೇ ಮುಖ್ಯ ನ್ಯಾಯಮೂರ್ತಿ ಅವರಿಗೂ ನಿರ್ದಿಷ್ಟ ಸೇವಾವಧಿ ನಿಗದಿಪಡಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ಸದಾಶಿವಂ ಅವರು ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿಪ್ರಾಯಪಟ್ಟಿದ್ದರು. ಅವರು ಒಂಬತ್ತು ತಿಂಗಳು (2013–2014) ಸಿಜೆಐ ಆಗಿದ್ದರು. ಅವರ ಈ ಮಾತು ಈಗ ಮಹತ್ವ ಪಡೆದುಕೊಂಡಿದೆ. 

ಸಾಮಾನ್ಯವಾಗಿ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಗಳಾಗಿ ನೇಮಕಗೊಳ್ಳುವಾಗ 55ರಿಂದ 60 ವರ್ಷಗಳು ಆಗಿರುತ್ತದೆ. ಇದು ಸಹ ಸಿಜೆಐಗಳು ಅಲ್ಪಾವಧಿಗೆ ಇರಲು ಕಾರಣ ಎನ್ನುತ್ತಾರೆ ಕಾನೂನು ತಜ್ಞರು. 

ಬೇರೆ ಸಾಂವಿಧಾನಿಕ ಹುದ್ದೆಗಳ ರೀತಿಯಲ್ಲೇ ಸಿಜೆಐ ಅವರಿಗೂ ಕನಿಷ್ಠ ಎರಡು ವರ್ಷಗಳ ಸೇವಾವಧಿ ನಿಗದಿಪಡಿಸಬೇಕು ಎಂದು ಕಾನೂನು ಆಯೋಗ ಶಿಫಾರಸು ಮಾಡಿತ್ತು. ನ್ಯಾಯಾಂಗ ಆಡಳಿತದಲ್ಲಿ ಗುಣಮಟ್ಟ ಕಾಪಾಡಲು ಮುಖ್ಯ ನ್ಯಾಯಮೂರ್ತಿಗೆ ನಿರ್ದಿಷ್ಟ ಸೇವಾವಧಿ ಅಗತ್ಯ. ಅವರು ದೇಶದಾದ್ಯಂತ ಪ್ರವಾಸ ಮಾಡಿ ಕಾನೂನು ತಜ್ಞರನ್ನು, ವೃತ್ತಿಪರರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಬೇಕು. ಈ ಮೂಲಕ, ತಳ ಹಂತದ ವಿಷಯಗಳನ್ನು ಅರಿತುಕೊಳ್ಳಬಹುದು’ ಎಂದು ಆಯೋಗವು ತನ್ನ 14ನೇ ವರದಿಯಲ್ಲಿ ತಿಳಿಸಿತ್ತು.

ನಿವೃತ್ತಿ ವಯಸ್ಸು 65 ವರ್ಷ
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ವರ್ಷ. ನ್ಯಾಯಮೂರ್ತಿಗಳ ವಯಸ್ಸು ಹಾಗೂ ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡ ದಿನದ ಆಧಾರದಲ್ಲಿ ಮುಖ್ಯ ನ್ಯಾಯಮೂರ್ತಿಯ ಅವಧಿ ನಿರ್ಣಯವಾಗುತ್ತದೆ. ಆದರೆ, ಇಲ್ಲಿ ವಯಸ್ಸಿಗಿಂತ ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡ ದಿನ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ, ಹಿರಿಯ ನ್ಯಾಯಮೂರ್ತಿ ಸಿಜೆಐ ಆಗಿ ನೇಮಕಗೊಳ್ಳುತ್ತಾರೆ. 2031ರವರೆಗಿನ ಮುಖ್ಯ ನ್ಯಾಯಮೂರ್ತಿಗಳ ಹೆಸರು ಬಹುತೇಕ ಅಂತಿಮಗೊಂಡಿದೆ. ಒಂದು ವೇಳೆ, ನಿಧನ, ಸ್ವಯಂ ನಿವೃತ್ತಿ, ದೋಷಾರೋಪಣೆಯಂತಹ ಅನಿರೀಕ್ಷಿತ ಸಂಗತಿಗಳು ಘಟಿಸಿದಲ್ಲಿ ಈ ಪಟ್ಟಿ ಬದಲಾಗಬಹುದು.
34: ಸುಪ್ರೀಂ ಕೋರ್ಟ್‌ನ ಒಟ್ಟು ನ್ಯಾಯಮೂರ್ತಿಗಳು | 32: ಈಗಿರುವ ನ್ಯಾಯಮೂರ್ತಿಗಳು
ಕಾನೂನು ತಜ್ಞರ ಅಭಿಪ್ರಾಯಗಳು
ಪ್ರಸ್ತುತ ಸಾಂವಿಧಾನಿಕ ಚೌಕಟ್ಟಿನಲ್ಲಿ ಸಿಜೆಐ ಅವರ ನಿರ್ದಿಷ್ಟ ಸೇವಾವಧಿ ವ್ಯವಸ್ಥೆಗೆ ಅನುಮತಿ ಇಲ್ಲ. ಜೊತೆಗೆ, ಇದು ಅಪೇಕ್ಷಣೀಯ ಅಲ್ಲ. ಸರಿಯಾದ ಕಾರ್ಯವಿಧಾನವೆಂದರೆ, ನ್ಯಾಯಮೂರ್ತಿಗಳನ್ನು ಹೇಗೆ ನೇಮಕಾತಿ ಮಾಡಬೇಕು ಎಂದರೆ ಅವರು ಕನಿಷ್ಠ 18 ತಿಂಗಳ ಅವಧಿಗೆ ಸಿಜೆಐ ಆಗಿ ಕೆಲಸ ನಿರ್ವಹಿಸುವಂತಿರಬೇಕು. ನ್ಯಾಯಮೂರ್ತಿಗಳ ನೇಮಕ ಸಂದರ್ಭದಲ್ಲಿ ಕೊಲಿಜಿಯಂ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. 
– ಮೋಹನ್‌ ಕಾತರಕಿ, ಸುಪ್ರೀಂ ಕೋರ್ಟ್‌ ಹಿರಿಯ ವಕೀಲ 
ಹಿರಿತನದ ಆಧಾರದಲ್ಲಿ ಮುಖ್ಯ ನ್ಯಾಯಮೂರ್ತಿಗಳ ನೇಮಕ ಆಗುತ್ತದೆ. ಅವರು 65 ವರ್ಷಕ್ಕೆ ನಿವೃತ್ತರಾಗಲೇಬೇಕು. ಈ ವ್ಯವಸ್ಥೆ ಬದಲಾಗಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಅಲ್ಪಾವಧಿಯ ಸಿಜೆಐಗಳು ಉತ್ತಮ ಕೆಲಸ ಮಾಡಿಲ್ಲ ಎಂದು ಹೇಳುವುದು ಸರಿಯಲ್ಲ. ಅದ್ಭುತ ತೀರ್ಪು ನೀಡಿ ಉತ್ತಮ ಸಾಧನೆ ಮಾಡಿದವರ ಪಟ್ಟಿಯೇ ಇದೆ. ದೀರ್ಘಾವಧಿ ಸಿಜೆಐಗಳ ಬಗ್ಗೆ ಟೀಕೆಗಳು ಇವೆ. ಇಚ್ಛಾಶಕ್ತಿ ಇದ್ದರೆ ಸೇವಾವಧಿ ಮುಖ್ಯ ಅಲ್ಲ. 
– ಸಂಜಯ್‌ ಹೆಗ್ಡೆ, ಸುಪ್ರೀಂ ಕೋರ್ಟ್‌ ಹಿರಿಯ ವಕೀಲ 
ಸಿಜೆಐಗಳು ಅಲ್ಪಾವಧಿ ಇದ್ದರೆ ನ್ಯಾಯಾಂಗ ಕ್ಷೇತ್ರದಲ್ಲಿ ಆಡಳಿತಾತ್ಮಕ ಸುಧಾರಣೆ ಕಷ್ಟ. ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನೇಮಕಕ್ಕೆ ಸಿಜೆಐ ನೇತೃತ್ವದ ಕೊಲಿಜಿಯಂ ತೀರ್ಮಾನ ತೆಗೆದುಕೊಳ್ಳುತ್ತದೆ. ಅಲ್ಪಾವಧಿಯ ಸಿಜೆಐಗಳು ತರಾತುರಿಯಲ್ಲಿ ತೀರ್ಮಾನ ತೆಗೆದುಕೊಂಡರೆ ಈ ನೇಮಕಾತಿ ಪ್ರಕ್ರಿಯೆ ವಿವಾದಕ್ಕೆ ಒಳಗಾಗುವ ಸಾಧ್ಯತೆಯೂ ಇದೆ. ಜತೆಗೆ, ಅಲ್ಪಾವಧಿಯ ಸಿಜೆಐಗಳಿಗೆ ಸಾಂವಿಧಾನಿಕ ಪ್ರಕರಣಗಳ ಬಗ್ಗೆ ವಿಚಾರಣೆಗೆ ಸಮಯ ಇರುವುದಿಲ್ಲ. ಸಿಜೆಐಗಳಿಗೆ ಕನಿಷ್ಠ ಸೇವಾವಧಿ ನಿಗದಿಪಡಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕಿದೆ. 
– ಪಿ.ಪುನೀತ್‌, ಜೆಎನ್‌ಯು ಪ್ರಾಧ್ಯಾಪಕ ‌
ಭಾರತದ ಮುಖ್ಯ ನ್ಯಾಯಮೂರ್ತಿಯವರು ಸುಪ್ರೀಂ ಕೋರ್ಟ್‌ನ ಆಡಳಿತಾತ್ಮಕ ವ್ಯವಸ್ಥೆಯ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸುತ್ತಾರೆ. ಅವರು ಪ್ರಕರಣ ಹಂಚಿಕೆ, ನ್ಯಾಯಾಲಯ ನಿರ್ವಹಣೆ ಮತ್ತು ಸುಪ್ರೀಂ ಕೋರ್ಟ್‌ನ ಕಾರ್ಯಾಚರಣೆಗಳ ಒಟ್ಟಾರೆ ಮೇಲ್ವಿಚಾರಣೆಯಂತಹ ಮಹತ್ವದ ಜವಾಬ್ದಾರಿಗಳು ಮತ್ತು ನಿರ್ಣಾಯಕ ಕಾರ್ಯಗಳನ್ನು ಹೊಂದಿದ್ದಾರೆ. ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಅನೇಕ ಸುಧಾರಣೆಗಳು ಅಗತ್ಯವಿದೆ. ಒಬ್ಬ ಸಿಜೆಐ ತಮ್ಮ ಕೆಲಸ ಪ್ರಾರಂಭಿಸುವ ಹೊತ್ತಿಗೆ, ಅವರ ನಿವೃತ್ತಿ ಹತ್ತಿರವಾಗಿರುತ್ತದೆ. ಪರಿಣಾಮಕಾರಿ ನೀತಿ ಅನುಷ್ಠಾನಕ್ಕೆ ಯೋಜನೆ, ಕಾರ್ಯಗತಗೊಳಿಸುವಿಕೆ ಮತ್ತು ನಂತರದ ಮೌಲ್ಯಮಾಪನಕ್ಕೆ ಸಮಯ ಬೇಕಾಗುತ್ತದೆ. ಹೀಗಾಗಿ, ಕನಿಷ್ಠ ಎರಡು ವರ್ಷವಾದರೂ ಅವರ ಅಧಿಕಾರದ ಅವಧಿ ಇರಬೇಕು.
– ಚಂದ್ರಶೇಖರ್‌, ಸುಪ್ರೀಂ ಕೋರ್ಟ್‌ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.