ಆರ್ಎಸ್ಎಸ್ ಹುಟ್ಟಿ ನೂರು ವರ್ಷಗಳಾಗಿಬಿಟ್ಟಿತಂತೆ. ಇದು ನೋಡುವುದಕ್ಕೆ ಹೇಗಿದೆ ಅಂದರೆ, ಆರ್ಎಸ್ಎಸ್ ತನ್ನ ಎಳೆತನದಲ್ಲೆ ಬುದ್ಧಿ ಸ್ಥಗಿತಗೊಂಡ, ದೇಹ ಮಾತ್ರ ಬೆಳವಣಿಗೆಯಾದ ದಡೂತಿ ದೇಹದಂತೆ ಗೋಚರಿಸುತ್ತಿದೆ. ಆರ್ಎಸ್ಎಸ್ನಿಂದ ತರಬೇತಿ ಪಡೆದು ಹೊರಬೀಳುವವರೂ ಹಾಗೆಯೇ ಕಾಣುತ್ತಿದ್ದಾರೆ. ಈಗ ಅದು ಸಂಖ್ಯೆಯಲ್ಲಿ ಬಹಳ ದೊಡ್ಡದಾಗಿ ಬೆಳೆದಿರಬಹುದು. ಆದರೆ ಎಳೆತನದಲ್ಲೇ ಬುದ್ಧಿ ಸ್ಥಗಿತಗೊಂಡ ನಂತರವೂ ಆಗುವ ದಡೂತಿ ದೇಹದ ಅಸಮತೋಲನ ಇದು. ನಮ್ಮ ಸಹಜೀವಿಗಳು ಹೀಗಾಗಿರುವುದನ್ನು ಕಂಡು ಸಂಕಟವಾಗುತ್ತಿದೆ. ಆರ್ಎಸ್ಎಸ್ನ ಸ್ಥಗಿತ ಸ್ಥಿತಿಗೆ ಕಾರಣ ಎಲ್ಲಿದೆ? ಮೂಲ ಯಾವುದು? ನನ್ನ ಈ ಸಹಜೀವಿಗಳನ್ನು ಗುಣಮುಖರನ್ನಾಗಿಸುವುದು ಹೇಗೆ?
ಹೇಗೆ ಎಂದು ಹುಡುಕುತ್ತಿರುವೆ- ನನ್ನ ಸಂಕಟಕ್ಕಾಗಿ.
ಕೆಲವರಿಗೆ ನೆನಪಿರಲೂಬಹುದು. ಸಾಮಾನ್ಯವಾಗಿ ಆರ್ಎಸ್ಎಸ್ ಜಪಿಸುವುದು ಅವರ ಸರಸಂಘಚಾಲಕ ಗೋಲ್ವಲ್ಕರ್ ಅವರ ನುಡಿಗಳನ್ನು. ಈಗ ಒಂದಿಷ್ಟು ನೋಡೋಣ: ‘ನಾವು ಸಂಘಟನೆಯೊಂದರ ಭಾಗವೆಂದು ಹೇಳಿ ಅದರ ಶಿಸ್ತನ್ನು ಒಪ್ಪಿದಾಗ ಜೀವನದಲ್ಲಿ ಆಯ್ಕೆಗಳ ಪ್ರಶ್ನೆ ಇರುವುದಿಲ್ಲ. ಹೇಳಿದಂತೆ ಮಾಡಿ. ಕಬಡ್ಡಿ ಆಡಲು ಹೇಳಿದರೆ ಕಬಡ್ಡಿ ಆಡಿ. ಸಭೆ ನಡೆಸಬೇಕೆಂದು ಹೇಳಿದರೆ ಸಭೆ ನಡೆಸಿ... ಉದಾಹರಣೆಗೆ ನಮ್ಮ ಕೆಲವು ಮಿತ್ರರಿಗೆ ರಾಜಕೀಯದಲ್ಲಿ ಕೆಲಸ ಮಾಡುವಂತೆ ಹೇಳಲಾಯಿತು. ಇದರರ್ಥ ಅವರಿಗೆ ರಾಜಕೀಯದಲ್ಲಿ ಭಾರಿ ಆಸಕ್ತಿ ಇದೆ ಅಥವಾ ಪ್ರೇರೇಪಣೆ ಇದೆ ಎಂದಲ್ಲ. ಅವರು ರಾಜಕೀಯಕ್ಕಾಗಿ ನೀರಿಲ್ಲದ ಮೀನಿನಂತೆ ಪ್ರಾಣತ್ಯಾಗ ಮಾಡುವುದಿಲ್ಲ. ರಾಜಕೀಯದಿಂದ ಹೊರಬರುವಂತೆ ಹೇಳಿದರೆ ಅದಕ್ಕೂ ಅವರ ಆಕ್ಷೇಪವಿಲ್ಲ. ಅವರ ವಿವೇಚನಾಶಕ್ತಿ ಬೇಕಾಗಿಯೇ ಇಲ್ಲ.’ (ವಾರ್ಧಾದ ಸಿಂಡಿಯಲ್ಲಿ ಗೋಲ್ವಲ್ಕರ್
ಭಾಷಣ-ಮಾರ್ಚ್ 16, 1954).
ಆರ್ಎಸ್ಎಸ್ಗೆ ತಮ್ಮ ಸಂಘಟನೆ ಸೇರಿದವರಿಗೆ ವಿವೇಚನಾಶಕ್ತಿ ಬೇಕಾಗಿಯೇ ಇಲ್ಲವಂತೆ! ಆಯ್ಕೆಯೂ ಬೇಡವಂತೆ. ವಿವೇಚನೆ, ಆಯ್ಕೆ, ವಿವೇಕವಿಲ್ಲದ ಮನುಷ್ಯ ಏನಾಗುತ್ತಾನೆ? ರೋಬೊಟ್ನಂತೆ ಯಾರೋ ಎಲ್ಲೋ ಕಂಟ್ರೋಲ್ ಮಾಡುತ್ತಿರುವುದಕ್ಕೆ ತಕ್ಕಂತೆ ವರ್ತಿಸುತ್ತಾನೆ. ಆ ಮನುಷ್ಯನ ಒಳಗಿರುವ ಮನುಷ್ಯತನವೇ ಕಳೆದುಕೊಂಡಂತಾಗಿಬಿಟ್ಟಿರುತ್ತದೆ. ಆರ್ಎಸ್ಎಸ್ ಪಠ್ಯದಂತೆ ತರಬೇತಿ ಪಡೆದು ಪಳಗಿದ ಬಾಲಕರು ನೂರು ವರ್ಷ ಬದುಕಿದರೂ ರೋಬೊಟ್ನಂತೆಯೇ ಉಳಿದುಬಿಡಬಹುದು. ದೇಹ ಬೆಳೆದರೂ, ಸಂಘ ನೀಡುವ ತರಬೇತಿ ಕಾರಣವಾಗಿ ಬಹುತೇಕರ ಬುದ್ಧಿ ಸ್ಥಗಿತಗೊಳ್ಳಲೂಬಹುದು. ಇಂಥವರು ಕಣ್ಣೆದುರು ಕಾಣುವ ಸತ್ಯದ ನಿರಾಕರಣೆ ಮಾಡುತ್ತಾರೆ. ತಮ್ಮ ಸ್ಥಗಿತ ಆಲೋಚನೆಗೆ ಪೂರಕವಾಗಿ ವಾದ ಹುಟ್ಟಿಸುತ್ತಾರೆ. ಅಂತಹ ವಾದ ಇಲ್ಲದಾಗ ಸುಳ್ಳುಗಳನ್ನು ಹೆಣೆಯುತ್ತಾ ಹೋಗುತ್ತಾರೆ. ತಮ್ಮ ಶಕ್ತಿ ಪ್ರದರ್ಶನಕ್ಕೆ ಪರೇಡ್ ಮಾಡುತ್ತಿರುತ್ತಾರೆ. ಆರ್ಎಸ್ಎಸ್ ಇದನ್ನು ಶಿಸ್ತು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಮೇಲ್ನೋಟಕ್ಕೆ ಹಾಗೇ ಕಾಣಿಸುತ್ತದೆ. ಆದರೆ ಒಳಹೊಕ್ಕು ನೋಡಿದರೆ ಅದು- ಅರಳುವ ವ್ಯಕ್ತಿತ್ವವನ್ನು ಕಮರಿಸುವ ತರಬೇತಿ ಕೇಂದ್ರ ಅನ್ನಿಸುತ್ತದೆ.
ಹಾಗಾದರೆ, ಇವರ ಬಯಕೆ ಏನು? ಮನುಷ್ಯರಲ್ಲಿ ಮನುಷ್ಯತನವನ್ನು ಕತ್ತರಿಸುತ್ತಿರುವ ಈ ಕ್ರೌರ್ಯ ಯಾಕಾಗಿ? ಯಾಕೆಂದರೆ, ಅವರ ದೇವರ ಸಾಕ್ಷಾತ್ಕಾರಕ್ಕಾಗಿ. ನೋಡಿ, ಅವರ ಗುರೂಜಿ ಗೋಲ್ವಲ್ಕರ್ ಹೇಳುತ್ತಾರೆ- ‘ನಮ್ಮಲ್ಲಿರುವ ಎಲ್ಲಾ ಶಕ್ತಿಗಳನ್ನು ಪ್ರಚೋದಿಸುವ ‘ಜೀವಂತ’ ಪರಮಾತ್ಮ ಬೇಕು. ಆದುದರಿಂದಲೇ ನಮ್ಮ ಹಿರಿಯರು ಹೇಳಿದರು: ‘ನಮ್ಮ ಸಮಾಜವೇ ನಮ್ಮ ದೇವರು... ಹಿಂದೂ ಜನಾಂಗವೇ ‘ವಿರಾಟ ಪುರುಷ’ ಸರ್ವಶಕ್ತನ ರೂಪ’ ಎಂದರು. ‘ಹಿಂದೂ’ ಎಂಬ ಪದವನ್ನು ಅವರು ಬಳಸದಿದ್ದರೂ ‘ಪುರುಷ ಸೂಕ್ತ’ದಲ್ಲಿ ಬರುವ ಈ ಕೆಳಗಿನ ವರ್ಣನೆಯಲ್ಲಿ ಈ ಮಾತು ಸ್ಪಷ್ಟವಾಗುತ್ತದೆ- ಬ್ರಾಹ್ಮಣನು ಆತನ ಶಿರ, ರಾಜನೇ ಬಾಹುಗಳು, ವೈಶ್ಯರು ತೊಡೆಗಳು ಮತ್ತು ಶೂದ್ರನು ಪಾದ ಎನ್ನುವ ಮಾತು ಬಂದಿದೆ. ಈ ಚತುರ್ವಿಧ (ಚಾತುರ್ವರ್ಣ) ವ್ಯವಸ್ಥೆಯನ್ನು ಹೊಂದಿದವರು ಎಂದರೆ ಹಿಂದೂ ಜನಾಂಗ, ಇದೇ ನಮ್ಮ ದೇವರು ಎಂಬುದೇ ಇದರ ಅರ್ಥ’. (ಉಲ್ಲೇಖ: ಗೋಲ್ವಲ್ಕರ್, ಚಿಂತನಗಂಗಾ, 3ನೇ ಮುದ್ರಣ, ಪುಟ 29, ಪ್ರಕಟಣೆ: ಸಾಹಿತ್ಯಸಿಂಧು, ಬೆಂಗಳೂರು).
ಅಂದರೆ, ಹಿಂದೂ ಸಮಾಜದಲ್ಲಿ ಚಾತುರ್ವರ್ಣ ಸಾಮಾಜಿಕ ಪದ್ಧತಿಯನ್ನು ಪ್ರತಿಷ್ಠಾಪಿಸುವುದೇ ಇವರಿಗೆ ಜೀವಂತ ದೇವರ ಸಾಕ್ಷಾತ್ಕಾರವಂತೆ! ಇಂತಹ ಸಮಾಜವೊಂದರಲ್ಲಿ, ತಲೆ ಅಂದರೆ ಮಿದುಳು ನಿರ್ಧರಿಸಿದಂತೆ ತೋಳು, ತೊಡೆ, ಪಾದಗಳು ನಡೆದುಕೊಳ್ಳುವುದಷ್ಟೆ ಅವುಗಳ ಕೆಲಸವಾಗಿರುತ್ತದೆ. ಅಂದರೆ, ಚಾತುರ್ವರ್ಣದ ಸಾಮಾಜಿಕ ಪದ್ಧತಿಯಲ್ಲಿ ಪಾದವಾದವರು (ಶೂದ್ರ) ಅವರೂ ಸಾವಯವ ಮನುಷ್ಯರಾದರೂ ಅವರೊಳಗೂ ಮಿದುಳಿದೆ ಎಂದು ಪರಿಗಣಿಸುವುದಿಲ್ಲ. ಪಾದಗಳದು ಮಾತ್ರವಲ್ಲ ಬಾಹು, ತೊಡೆಗಳ ಕತೆಯೂ ತಲೆಗೆ ಕೆಳಗಿನದೇ. ಅವರ ಮಿದುಳಿಗೆ ಮೌಢ್ಯ, ರೂಢಿ, ಆಚರಣೆ, ಪುರಾಣ ಕತೆಗಳನ್ನು ತುಂಬಿ ನಿಷ್ಕ್ರಿಯವಾಗಿಸುವ ವ್ಯವಸ್ಥೆ ಇದು.
ಇದೆಲ್ಲಾ ಮಾಡುತ್ತಿರುವ ಅವರ ಒಳಬಯಕೆ ಏನೆಂದು ನೋಡಿದರೆ, ಸಾವರ್ಕರ್ ಅವರ ಬರಹಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ– ‘ಹಿಂದೂ ರಾಷ್ಟ್ರದಲ್ಲಿ ವೇದಗಳ ನಂತರ ಮನುಸ್ಮೃತಿಯೇ ಅತ್ಯಂತ ಪೂಜನೀಯ ಮತಗ್ರಂಥವಾಗಿದೆ. ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿ-ಪದ್ಧತಿಗಳು, ಚಿಂತನೆ ಮತ್ತು ನಡವಳಿಕೆಗಳಿಗೆ ನಿರ್ಣಾಯಕ ತತ್ವ ಅದೇ ಆಗಿದೆ. ಈ ಗ್ರಂಥ ಶತಮಾನಗಳಿಂದಲೂ ನಮ್ಮ ದೇಶದ ಆಧ್ಯಾತ್ಮಿಕ ಹಾಗೂ ದೈವಿಕ ಪಯಣವನ್ನು ಕ್ರೋಡೀಕರಿಸಿ ಸಂಹಿತೆ ಆಗಿಸಿದೆ. ಕೋಟ್ಯಂತರ ಹಿಂದುಗಳು ಇಂದಿಗೂ ತಮ್ಮ ಬದುಕು ಹಾಗೂ ನಡೆನುಡಿಗಳಲ್ಲಿ ಅನುಸರಿಸುತ್ತಿರುವ ನೀತಿ ನಿಯಮಗಳಿಗೆ ಮನುಸ್ಮೃತಿಯೇ ಆಧಾರ. ಇವತ್ತು ಮನುಸ್ಮೃತಿಯೇ ಹಿಂದೂ ಕಾಯ್ದೆ’ (ಉಲ್ಲೇಖ: ಡಿ.ವಿ.ಸಾವರ್ಕರ್, ‘Women in manusmrithi’ 'savarkar sanmarga’, ಸಂಪುಟ 4, ಪ್ರಭಾತ್ ಪ್ರಕಾಶನ, ದೆಹಲಿ. ಆಯ್ದ ಭಾಗದ ಅನುವಾದ: ಸುರೇಶ್ ಭಟ್, ಬಾಕ್ರಬೈಲು).
ಚಾತುರ್ವರ್ಣ ಹಿಂದುತ್ವದವರಿಗೆ ಮನುಧರ್ಮಶಾಸ್ತ್ರವೇ ಕಾನೂನು ಆಗಬೇಕಂತೆ. ನ್ಯಾಯದೊಳಗಿಂದಲೆ ನ್ಯಾಯವನ್ನೆ ಕೊಂದ ತಾರತಮ್ಯದ ನ್ಯಾಯಪದ್ಧತಿ ಇದು. ಹೀಗಿದ್ದೂ ಅದೇ ಸಂವಿಧಾನ ಆಗಬೇಕಂತೆ. ಇದೇನಿದು? ಗೋಲ್ವಲ್ಕರ್, ಸಾವರ್ಕರ್ ಅವರ ಈ ಎಲ್ಲಾ ಮಾತುಗಳು ಅಪಮೌಲ್ಯಗಳಲ್ಲವೆ? ಸೈದ್ಧಾಂತಿಕ ಭ್ರಷ್ಟತೆಯಲ್ಲವೆ? ಬೌದ್ಧಿಕ ಭ್ರಷ್ಟರಾದವರು ಮಾತ್ರ ಹೀಗೆಲ್ಲಾ ಯೋಚಿಸಬಲ್ಲರು! ಹೀಗಾದರೆ ಮಹಿಳೆಯರ ಗತಿ ಏನು? ಕ್ಷತ್ರಿಯರಿಗೆ, ವೈಶ್ಯರಿಗೆ ಒಳ್ಳೆಯ ವಾತಾವರಣವಾದರೂ ಇದೆ. ಆದರೆ, ಈ ಹಿಂದೆ ಮೇಲಿನವರ ಸೇವಕರಾಗಿದ್ದ ಶೂದ್ರರು ಎನ್ನಿಸಿಕೊಂಡಿದ್ದವರ ಪಾಡೇನು? ಇನ್ನು ಊರಾಚೆಯ ಅಸ್ಪೃಶ್ಯರಂತೂ ಲೆಕ್ಕಕ್ಕೂ ಇಲ್ಲ, ಜಮಕ್ಕೂ ಇಲ್ಲ- ಹೀಗಾಗುತ್ತದೆ.
ಈ ಚಾತುರ್ವರ್ಣ ಸಮಾಜದ ಸ್ಯಾಂಪಲ್ ನೋಡುವುದಕ್ಕೆ ನೂರು ವರ್ಷಗಳ ಹಿಂದಕ್ಕೆ, ಕೇರಳದ ವೈಕಂಗೆ ಹೋದರೆ ಸಾಕು. ಅದ್ವೈತ ನುಡಿಯುವ ಶಂಕರಾಚಾರ್ಯರು ಹುಟ್ಟಿದ ಕೇರಳದ ವೈಕಂನಲ್ಲಿ ಒಂದು ಬೃಹತ್ ಶಿವನ ದೇವಾಲಯ ಈಗಲೂ ಇದೆ. ನೂರು ವರ್ಷಗಳ ಹಿಂದೆ ಆ ದೇವಾಲಯಕ್ಕೆ ಶೂದ್ರರು, ಅಸ್ಪೃಶ್ಯರು ಅನ್ನಿಸಿಕೊಂಡವರಿಗೆ, ದೇವಸ್ಥಾನದ ಒಳಕ್ಕೆ ಪ್ರವೇಶ ಅತ್ತಗಿರಲಿ, ಆ ದೇವಸ್ಥಾನದ ಪ್ರಾಂಗಣದ ಸುತ್ತ ಇದ್ದ ನಾಲ್ಕು ರಸ್ತೆಗಳಲ್ಲಿ ನಡೆಯಲೂ ಅವಕಾಶ ಇರಲಿಲ್ಲ! ಆ ಕಾಲದಲ್ಲಿ ವೈಕಂನಲ್ಲಿ ಈಳವ ಸಮುದಾಯಕ್ಕೆ ಸೇರಿದ ಒಬ್ಬರು ತುಂಬಾ ಶ್ರೀಮಂತರಾದ ಲಾಯರ್ ಇದ್ದರು. ಆ ಊರಲ್ಲಿ ಕಾರು ಇದ್ದುದು ಬಹುಶಃ ಅವರದು ಮಾತ್ರವೆ. ಅವರು ವೈಕಂನಿಂದ ಬೇರೆ ಊರಿಗೆ ಹೋಗುವಾಗ ಆ ದೇವಸ್ಥಾನದ ಪ್ರಾಂಗಣದ ರಸ್ತೆ ಸಿಕ್ಕಾಗ ಅವರು ಅಲ್ಲಿ ಕಾರಿಂದ ಇಳಿದು, ಪ್ರಾಂಗಣದ ರಸ್ತೆಗೆ ತಮ್ಮ ಪಾದ ಸೋಕಿಸದೆ ಪಕ್ಕದ ಕಿರುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆದರೆ ಆ ಕಾರಿನ ಡ್ರೈವರ್ ನಾಯರ್ ಆದ್ದರಿಂದ ಕಾರನ್ನು ಪ್ರಾಂಗಣದ ರಸ್ತೆಯಲ್ಲೆ ಓಡಿಸಿಕೊಂಡು ಮುಂದೆ ಆ ಲಾಯರ್ ಸಿಗುವ ಪ್ರಾಂಗಣದಾಚೆ ಕಾಯುತ್ತಿದ್ದನು. ಕೇರಳ ಪ್ರವಾಸ ಮುಗಿಸಿದ ಸ್ವಾಮಿ ವಿವೇಕಾನಂದರು ಕೇರಳವನ್ನು ಹುಚ್ಚರ ಸಂತೆ ಎಂದಿರುವುದರಲ್ಲಿ ಉತ್ಪ್ರೇಕ್ಷೆ ಇಲ್ಲ ಅನ್ನಿಸುತ್ತದೆ.
ಇಂತಹ ದಾರುಣವಾದ ಆ ಕಾಲಘಟ್ಟದಲ್ಲಿ ದೇವಸ್ಥಾನದ ಪ್ರಾಂಗಣದ ರಸ್ತೆಯಲ್ಲಿ ಅವರ್ಣೀಯರು ನಡೆದಾಡುವುದಕ್ಕಾಗಿ ಸತ್ಯಾಗ್ರಹವನ್ನು ಅಂದಿನ ಸ್ವಾತಂತ್ರ್ಯಪೂರ್ವದ ಕಾಂಗ್ರೆಸ್ ನಾಯಕತ್ವ ವಹಿಸುತ್ತದೆ. ನಾರಾಯಣ ಗುರುಗಳ ಆಶೀರ್ವಾದ ಹಾಗೂ ಮಹಾತ್ಮ ಗಾಂಧಿಯವರ ಮಾರ್ಗದರ್ಶನದಲ್ಲಿ ಈ ಸತ್ಯಾಗ್ರಹ ಜರುಗುತ್ತದೆ. 1924 ಮಾರ್ಚ್ 30ರಂದು ನಾಯರ್ ಸಮುದಾಯಕ್ಕೆ ಸೇರಿದ ಪಣಿಕ್ಕರ್, ಈಳವ ಸಮುದಾಯಕ್ಕೆ ಸೇರಿದ ಬಾಹುಲೆಯನ್, ಪೊಲೆಯ ಸಮುದಾಯಕ್ಕೆ ಸೇರಿದ ಕುಂಜಪ್ಪು- ಈ ಮೂವರು, ಭಿನ್ನಭಿನ್ನವಾಗಿ ಛಿದ್ರಗೊಂಡಿದ್ದವರು ಒಟ್ಟಾಗಿ ಕೈ ಕೈ ಹಿಡಿದು ವೈಕಂನ ಶಿವದೇವಾಲಯವನ್ನು ಬಳಸು ಹಾಕುವ ರಸ್ತೆ ಕಡೆಗೆ ಹೆಜ್ಜೆ ಹಾಕುತ್ತಾರೆ. ಹೀಗೆ ಪ್ರತಿದಿನವೂ ಸತ್ಯಾಗ್ರಹಿಗಳು ಹೆಜ್ಜೆ ಹಾಕುತ್ತಾರೆ. ಅವರು ತಡೆಯಲ್ಪಡುತ್ತಾರೆ ಅಥವಾ ಬಂಧನಕ್ಕೊಳಗಾಗುತ್ತಾರೆ. ಆ ನಡುವೆ ಸತ್ಯಾಗ್ರಹ ಮಂಕಾದಾಗ ಸತ್ಯಾಗ್ರಹಿಗಳ ವಿನಂತಿಗೆ ಸ್ಪಂದಿಸಿ, ಅಸಮತೆಗೆ ಅಗ್ನಿಸ್ವರೂಪಿ ಮಹರ್ಷಿ ಪೆರಿಯಾರ್ ಅವರ ಪ್ರವೇಶವಾಗುತ್ತದೆ. ಅವರ ಪ್ರವೇಶ ಕೇರಳಕ್ಕೆ ಮಾತ್ರವಲ್ಲ; ತಮಿಳುನಾಡಲ್ಲೂ ವಿದ್ಯುತ್ ಸಂಚಾರವಾದಂತಾಗಿ ಸತ್ಯಾಗ್ರಹದ ಕಾವು ಹೆಚ್ಚುತ್ತದೆ. ಸತತ 604 ದಿನ ನಡೆದ ಸತ್ಯಾಗ್ರಹವು ಇಡೀ ದೇಶದ ಗಮನ ಸೆಳೆಯುತ್ತದೆ, ಜನಸಮುದಾಯವನ್ನು ಎಚ್ಚರಗೊಳಿಸುತ್ತದೆ.
ಮುಂದೆ ಗಾಂಧೀಜಿಯವರು 1925ರ ಮಾರ್ಚ್ 9ರಂದು ಕೇರಳಕ್ಕೆ ಕಾಲಿಟ್ಟಾಗ ನುಡಿದ ಮೊದಲ ಮಾತುಗಳು: ‘ಅಸ್ಪೃಶ್ಯತೆ, ಶೂದ್ರತ್ವ ಎರಡು ಕೆಟ್ಟ ಪದ್ಧತಿಗಳು. ಅದರ ಬಗ್ಗೆ ವೈದಿಕರ ಜೊತೆ ಚರ್ಚಿಸೋಣ ಅಂದುಕೊಂಡಿದ್ದೇನೆ’. ಮಾರನೇ ದಿನವೆ ಸತ್ಯಾಗ್ರಹಕ್ಕೆ ವಿರುದ್ಧವಾಗಿದ್ದ ಇಂದನತ್ತುರಲ್ ದೇವನ್ ನೀಲಕಂಠನ್ ನಂಬೂದಿರಿ ಮತ್ತಿತರರ ಜೊತೆ ನಾಲ್ಕು ಗಂಟೆ ಸಂವಾದಿಸುತ್ತಾರೆ. ಗಾಂಧೀಜಿ ಸಾಗರದಾಚೆ ಹೋಗಿದ್ದರು ಎಂಬ ಕಾರಣಕ್ಕೊ ಅಥವಾ ವೈಶ್ಯ ಎಂಬ ಕಾರಣಕ್ಕಾಗೊ ಗಾಂಧಿಯವರು ನಂಬೂದಿರಿಯವರ ಮನೆ ಬಾಗಿಲ ಆಚೆ ಜಗುಲಿ ಮೇಲೆ ಕೂತು, ನಂಬೂದಿರಿಯವರು ಮನೆ ಒಳಗೆ ಆಸೀನರಾಗಿ ಸಂವಾದ ಜರುಗುತ್ತದೆ!
ಮಹಾದೇವ ದೇಸಾಯಿ ಅವರ ‘Day To-day With Gandhi’ ಹೊತ್ತಗೆಯಲ್ಲಿ ದಾಖಲಾಗಿರುವ ಸಂಭಾಷಣೆಯ ಒಂದು ತುಣುಕು ಹೀಗಿದೆ:
ನಂಬೂದಿರಿ: ನೀವು (ಅಸ್ಪೃಶ್ಯರು, ಶೂದ್ರರ ಬಗ್ಗೆ ಮಾತನಾಡುತ್ತ) ದಮನಿತರು ಎಂಬ ವಾಕ್ಯ ಬಳಸುತ್ತೀರಿ... ಅವರು ದಮನಕ್ಕೆ ಒಳಗಾಗಲು ಕಾರಣವೇನು?
ಗಾಂಧಿ: ... ಭಾರತೀಯರ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಜಲಿಯನ್ ವಾಲಾಬಾಗ್ನಲ್ಲಿ ಯಾವ ಕಾರಣವು ಜನರಲ್ ಡಯರ್ನನ್ನು ಪ್ರಚೋದಿಸಿತೊ ಅದೇ ಕಾರಣ.
ನಂಬೂದಿರಿ: ಶಂಕರಾಚಾರ್ಯರನ್ನೂ ಮಧ್ವಾಚಾರ್ಯರನ್ನೂ ಜನರಲ್ ಡಯರ್ ಎಂದು ಇವರು (ಗಾಂಧಿ) ಹೇಳುತ್ತಿದ್ದಾರಾ?
ಗಾಂಧಿ: ಓ! 1918ರಲ್ಲಿ ಪಂಜಾಬ್ನಲ್ಲಿ ಇದ್ದ ಡಯರ್ ಕುರಿತು ಹೇಳುತ್ತಿರುವೆ. ನೀವುಗಳು ಇಂದು ಯಾವ ಮನಃಸ್ಥಿತಿಯಲ್ಲಿ ಮಾತಾಡುತ್ತಿದ್ದೀರೊ, ಅದೇ ಮನಃಸ್ಥಿತಿ ಜನರಲ್ ಡಯರ್ಗೂ ಇತ್ತು...
ನಂಬೂದಿರಿ: (ಅಸ್ಪೃಶ್ಯರು, ಶೂದ್ರರು ದಮನಿತರಾಗುವಂತೆ) ನಾವು ಹಾಗೆಲ್ಲ ಮಾಡಲಿಲ್ಲವಲ್ಲ!
ಗಾಂಧಿ: ... (ಹಾಗೆ ಮಾಡಲಿಲ್ಲ ಎಂಬ) ಈ ಅಜ್ಞಾನವು, ಜನರಲ್ ಡಯರ್ನ ಅಜ್ಞಾನಕ್ಕೆ ಸಮನಾದುದು ಎಂದು ಹೇಳುತ್ತೇನೆ.
ನಂಬೂದಿರಿ: ಹಿಂದೂ ಮತದಲ್ಲಿ ಆಚಾರ್ಯರು ಹಲವರಿದ್ದಾರೆ. ಮಧ್ವಾಚಾರ್ಯರು, ಶಂಕರಾಚಾರ್ಯರು... ನಾವು ಶಂಕರಾಚಾರ್ಯರ ಅನುಯಾಯಿಗಳು. ರೂಢಿಗೆ ಸಂಬಂಧಪಟ್ಟಂತೆ ಆಚಾರ್ಯರು ಹೇಳುವುದನ್ನು ಮಾತ್ರ ಒಪ್ಪಿಕೊಳ್ಳುತ್ತೇವೆ.
ಮಾತುಕತೆಯಲ್ಲಿ ನಂಬೂದಿರಿಯವರು ರೂಢಿ, ಸಂಪ್ರದಾಯ, ಮತ್ತವರ ಆಚಾರ್ಯರಿಗೆ ಗಂಟು ಬೀಳುತ್ತಾರೆ. ಅವರ ಆಚಾರ್ಯರುಗಳು ತಮ್ಮ ಭಾಷ್ಯದಲ್ಲಿ ಚಾತುರ್ವರ್ಣವನ್ನು ಸಹಿಸಿಕೊಂಡದ್ದಕ್ಕೆ ಹಾಗೂ ವಿದ್ಯೆಯನ್ನು ಶೂದ್ರರಿಗೆ ನಿರಾಕರಿಸಿದ ಕಾರಣವಾಗಿ, ತದನಂತರದ ಅವರ ಅನುಯಾಯಿಗಳು ‘ನಿತ್ಯ ನಾರಕಿ’ಗಳಾಗಿ ತೆವಳುವಂತಾಗಿರುವುದನ್ನು ನಾವೀಗ ಕಾಣಬೇಕಾಗಿದೆ. ಅದ್ವೈತ ನುಡಿಯುವ ಶಂಕರಾಚಾರ್ಯರೇ, ‘ಮನು ಹೇಳಿರುವುದೆಲ್ಲಾ ಔಷಧಿ ಸಮಾನ’ ಎಂದು ಪರಿಗಣಿಸುವುದಾದರೆ, ಅಲ್ಲಿಗೆ ಶಂಕರಾಚಾರ್ಯರ ಅದ್ವೈತ ನೆಗೆದುಬಿದ್ದು ಪ್ರಾಣ ಕಳೆದುಕೊಂಡಂತಾಯ್ತು! ಸಾಮಾಜಿಕ ಅಸಮಾನತೆಯನ್ನು ಎತ್ತಿ ಹಿಡಿಯುವುದರಲ್ಲಿ ಉಳಿದ ಆಚಾರ್ಯರುಗಳೂ ಒಬ್ಬರಿಗಿಂತ ಒಬ್ಬರು ಹೆಚ್ಚು. ಅಲ್ಲಿಗೆ ಕತೆ ಮುಗಿಯಿತಲ್ಲ! ಇವರಿಗೇ ಮೊದಲು ಬಿಡುಗಡೆ ಬೇಕಾಗಿದೆ.
ಒಟ್ಟಿನಲ್ಲಿ ಸಂವಾದ ಫಲಕಾರಿಯಾಗಲಿಲ್ಲ. ಭಾರತದ ನಾಗರಿಕತೆಯಲ್ಲಿ ಇತಿಹಾಸದ ಉದ್ದಕ್ಕೂ ಹುಟ್ಟಿ ಬಂದ ಸಂತರು ಮತ್ತು ಮೇರು ವ್ಯಕ್ತಿತ್ವದವರು ಯಾಕೆ ಚಾತುರ್ವರ್ಣ ಮತ್ತು ಮನುಸ್ಮೃತಿಯನ್ನು ವಿರೋಧಿಸಿದವರೇ ಆಗಿದ್ದಾರೆ? ಇದನ್ನು ಸ್ಪಷ್ಟಪಡಿಸಿ ಹೇಳುವುದಾದರೆ, ಯಾರು ಚಾತುರ್ವರ್ಣ ಮತ್ತು ಮನುಸ್ಮೃತಿಯನ್ನು ಧಿಕ್ಕರಿಸಿ ನಿಲ್ಲುತ್ತಾರೋ, ಅವರೇ ಮಹಾತ್ಮರಾಗುತ್ತಾರೆ. ಭಾರತದ ವಿವೇಕ, ವಿವೇಚನೆ ಇಲ್ಲಿಯೇ ಇರುವುದು. ಈ ವಿವೇಕ ವಿವೇಚನೆ ಸಾಧ್ಯವಾಗದೇನೇ ಬೆಳವಣಿಗೆಯೇ ಇಲ್ಲದೆ ಆರ್ಎಸ್ಎಸ್ ತಾನೇ ಸ್ಥಗಿತಗೊಂಡಿದೆ, ತನ್ನ ಸ್ವಯಂಸೇವಕರನ್ನೂ ಸ್ಥಗಿತಗೊಳಿಸಿದೆ.
ಆರ್ಎಸ್ಎಸ್ನಲ್ಲಿ ಪಳಗಿದವರು ಉನ್ನತ ಸ್ಥಾನಕ್ಕೇರಿದರೂ ಅವರ ಸಂಘದ ತರಬೇತಿಯ ಕಾರಣವಾಗಿ ಅವರ ಬುದ್ಧಿಮತ್ತೆ ಹೇಗಿರುತ್ತದೆಂದರೆ; ಹೀಗೇ ಒಂದು ಟಿ.ವಿ. ಸಂದರ್ಶನದಲ್ಲಿ ರೇಡಾರ್ ಬಗ್ಗೆ ಮಾತಾಡುತ್ತ ‘ನಾನೇನೂ ಈ ವಿಚಾರದಲ್ಲಿ ಎಕ್ಸ್ಪರ್ಟ್ ಅಲ್ಲ. ಆದರೆ, ಪಾಕಿಸ್ತಾನದ ಮೇಲೆ ಏರ್ಸ್ಟ್ರೈಕ್ ಮಾಡಲು ‘ರೇಡಾರ್ನಿಂದ ಬಚಾವಾಗುವುದು ಹೇಗೆ’ ಎಂದು ವಾಯುಸೇನೆಯ ಅಧಿಕಾರಿಗಳು ಚಿಂತಿಸುತ್ತಿದ್ದರು. ಆಗ ನಾನು- ‘ಮೋಡಗಳಿರುವಾಗ ಸ್ಟ್ರೈಕ್ ಮಾಡಿಬಿಡಿ, ರೇಡಾರ್ನಿಂದ ಬಚಾವಾಗಬಹುದು’ ಎಂದೆ. ಕಡೆಗೆ ಹಾಗೆಯೇ ಮಾಡಿದರು’- ಇಂಥ ಕಲ್ಪನಾವಿಲಾಸ ಬಾಲಲೀಲೆಯಲ್ಲವೆ? ಮಕ್ಕಳು ಹೀಗೆಲ್ಲಾ ಹೇಳಿದರೆ ಸಂತೋಷಪಡಬಹುದು. ಆದರೆ ದೊಡ್ಡವರೇ ಹೀಗೆಲ್ಲ ಹೇಳಿದರೆ ಭ್ರಮಾಧೀನ ಅನ್ನಿಸಿಕೊಳ್ಳುವುದಿಲ್ಲವೆ? ಹೀಗೆಲ್ಲಾ ಆಗುತ್ತ ಭಾರತದಲ್ಲಿ ಸಂತೋಷ ಅನ್ನುವುದು ದುಬಾರಿಯಾಗಿಬಿಟ್ಟಿದೆ, ಜೊತೆಗೆ ಅದು ಅಳುತ್ತಿದೆ ಕೂಡ.
ಭಾರತದಲ್ಲಿ Happiness Index ಅರಳಬೇಕಿದೆ. ಇದಕ್ಕೆ ಆರ್ಎಸ್ಎಸ್ ಕೂಡ ಕೈಜೋಡಿಸಬೇಕಿದೆ. ಅದಕ್ಕಾಗಿ, ನೂರು ವರ್ಷ ತುಂಬುವ ಆರ್ಎಸ್ಎಸ್ಗೆ ಒಂದೆರಡು ಪ್ರಾರ್ಥನೆ ಸಲ್ಲಿಸುವೆ:
(1) ನೂರು ವರ್ಷಗಳಾದರೂ ಆರ್ಎಸ್ಎಸ್ ಸಂಘಟನೆಯನ್ನು ರಿಜಿಸ್ಟ್ರೇಷನ್ ಮಾಡಿಸದೇ ಇರುವುದು ಹಾಗೂ ಸಾರ್ವಜನಿಕರಿಂದ ಶೇಖರಿಸುವ ಹಣಕ್ಕೆ ಲೆಕ್ಕಪತ್ರ ಬಹಿರಂಗಪಡಿಸದೇ ಇರುವುದು ಮತ್ತು ಸಂಘದ ಸಂಪತ್ತಿನ ವಿವರ ನೀಡದಿರುವುದು ಒಳ್ಳೆಯ ಸಂಸ್ಕೃತಿಯಲ್ಲ. ನೂರು ವರ್ಷ ತುಂಬಿದ ಈ ಸಂದರ್ಭದಲ್ಲಾದರೂ ಕಳಂಕರಹಿತರಾಗಿ ಎಂದು ಪ್ರಾರ್ಥಿಸುವೆ.
(2) ಭಾರತದ ಬಹುತೇಕ ಕುಟುಂಬಗಳಲ್ಲಿ ಪಿತೃಪಕ್ಷ ಆಚರಿಸುತ್ತಾರೆ. ಗತಿಸಿದ ತಮ್ಮ ಪೂರ್ವಿಕರಿಗೆ ಅವರ ಇಷ್ಟಾರ್ಥಗಳನ್ನು ಎಡೆ ಇಟ್ಟು, ಪೂಜೆ ಸಲ್ಲಿಸುತ್ತಾರೆ. ಈ ಪಿತೃಪೂಜೆ ಆಚರಣೆಗೆ, ಹಂಸ-ಕ್ಷೀರ ನ್ಯಾಯದ ನೀತಿ ಅಳವಡಿಸಿಕೊಂಡು ಗುಣಾತ್ಮಕ ಮಾಡುವುದಾದರೆ, ಉದಾಹರಣೆಗೆ ನಾನು, ನನ್ನ ಗತಿಸಿದ ಜೈವಿಕ ಪಿತೃಗಳಿಗೂ ಜೊತೆಗೆ ನನ್ನನ್ನು ಪ್ರಭಾವಿಸಿದ ಸೈದ್ಧಾಂತಿಕ ಪಿತೃಗಳಿಗೂ ಪೂಜೆ ಸಲ್ಲಿಸುತ್ತೇನೆ. ‘ಕೂಡಿಸುವುದು ದೈವ; ವಿಭಜಿಸುವುದು ದೆವ್ವ’ ಎಂಬ ಭಾರತೀಯ ಸುಪ್ತಮನಸ್ಸಿನ ವಿವೇಕಕ್ಕೆ ಶರಣಾಗಿ ನನ್ನ ಜೈವಿಕ ಮತ್ತು ಸೈದ್ಧಾಂತಿಕ ಪಿತೃಗಳಲ್ಲಿದ್ದ ಕೂಡಿಸುವ ಅಂಶಗಳನ್ನು ಸೇವಿಸುತ್ತೇನೆ; ವಿಭಜಿಸುವ ಅಂಶಗಳನ್ನು ವಿಸರ್ಜಿಸುತ್ತೇನೆ. ಹೀಗೆಯೇ ಆರ್ಎಸ್ಎಸ್ ಕೂಡ ತನ್ನ ಸೈದ್ಧಾಂತಿಕ ಪೂರ್ವಿಕರಾದ ಗೋಲ್ವಲ್ಕರ್ ಮತ್ತು ಸಾವರ್ಕರ್ ಮತ್ತಿತರರಲ್ಲಿ ಇರಬಹುದಾದ ಒಳ್ಳೆಯ ಸ್ವಭಾವಗಳನ್ನು ಸೇವಿಸಿ, ಅವರ ವಿಭಜಿಸುವ, ತಾರತಮ್ಯದ, ಅಪಮೌಲ್ಯದ ಆಲೋಚನೆಗಳನ್ನು ವಿಸರ್ಜಿಸುವುದಾದರೆ, ಅದರಲ್ಲಿ ಕಳೆದುಕೊಳ್ಳುವುದು ಏನೂ ಇರುವುದಿಲ್ಲ. ಅದು ವಿಷಕಾರಿ ಗುಣಗಳ ವಿಸರ್ಜನೆ ಅಷ್ಟೆ! ಆಗ ಆರ್ಎಸ್ಎಸ್ನ ದೇಹ, ಮನಸ್ಸಿನಲ್ಲಿರುವ ವಿಷಕಾರಿ ಕೊಳಕು ನಿವಾರಣೆಯಾಗುತ್ತದೆ. ಇದರಿಂದ ಸಮಾಜದಲ್ಲಿರುವ ವಿಷಕಾರಿ ಕೊಳಕೂ ನಿವಾರಣೆಯಾಗುತ್ತದೆ. ಆರ್ಎಸ್ಎಸ್ ಬಂಧಿಸಿಟ್ಟಿದ್ದ ವಿವೇಚನೆ, ಆಯ್ಕೆ, ವಿವೇಕ ಬಿಡುಗಡೆಯಾಗುತ್ತವೆ.
ಆಗ ಭಾರತದಲ್ಲಿ ಸಹನೆ ಮತ್ತು ಪ್ರೀತಿ ವೃದ್ಧಿಸುತ್ತದೆ. ಇದು ಮುಂದೆ ‘ಗೌರವೀ ಸಹಬಾಳ್ವೆ’ಯಾಗಿ ಬೆಳೆಯುತ್ತದೆ. ಇದೂ ಬೆಳೆದರೆ ‘ವಿಕೇಂದ್ರೀಕೃತ ಸಹಭಾಗಿ’ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯ ಸಹಜವಾಗುತ್ತದೆ. ಇದಕ್ಕಾಗಿ ಆರ್ಎಸ್ಎಸ್ ತನ್ನ ಗುರುವಾಕ್ಯಗಳ ನೇಣುಹಗ್ಗದಿಂದ ಬಿಡಿಸಿಕೊಂಡು ವಿವೇಕ, ವಿವೇಚನೆ, ಆಯ್ಕೆಯನ್ನು ಪಡೆದುಕೊಳ್ಳಬೇಕಾಗಿದೆ; ಪಡೆದುಕೊಂಡು ಹೊಸಹುಟ್ಟು ಪಡೆಯುವ ಆರ್ಎಸ್ಎಸ್ಗೆ ಹುಟ್ಟುಹಬ್ಬದ ಶುಭಾಶಯಗಳು.
ಹಿಂದಕ್ಕೆ ಚಲಿಸುವ ಪದ್ಧತಿ
ಇಂದು ಚಾತುರ್ವರ್ಣ ಸಮಾಜ ಮರುಕಳಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಅನೇಕರಲ್ಲಿದೆ. ನಮ್ಮ ಕಣ್ಣೆದುರು ನಡೆಯುತ್ತಿರುವುದು ನಮಗೆ ಕಾಣುತ್ತಿಲ್ಲ. ಆರ್ಎಸ್ಎಸ್ನ ಕಣ್ಸನ್ನೆಯ ಪಕ್ಷ ಬಿಜೆಪಿ ನೇತೃತ್ವದ ಸರ್ಕಾರ ಇಡಬ್ಲ್ಯುಎಸ್ ಮೀಸಲಾತಿ ತಂದಿದ್ದು ಏನು? ಭಾರತದ ಸಮಾಜದಲ್ಲಿ ಯಾರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದುವರೆದಿದ್ದಾರೊ ಹಾಗೂ ಯಾವ ಜಾತಿಗಳು ಉದ್ಯೋಗಗಳಲ್ಲಿ ಎಲ್ಲರಿಗಿಂತ ಹೆಚ್ಚು ಪ್ರಾತಿನಿಧ್ಯ ಪಡೆದಿವೆಯೊ, ಅಂತಹ ಮೇಲುಜಾತಿಗಳಿಗೆ ಆರ್ಥಿಕವಾಗಿ ಹಿಂದುಳಿದವರೆಂದು ಶೇ 10ರಷ್ಟು ಮೀಸಲಾತಿ ನೀಡಲಾಗಿದೆ. ದೇಶದಲ್ಲಿ ಈ ಮೇಲುಜಾತಿಗಳ ಜನಸಂಖ್ಯೆ ಕೇವಲ ಶೇ 5. ಈ ರೀತಿ ತಮ್ಮ ಜನಸಂಖ್ಯೆಗಿಂತಲೂ ದ್ವಿಗುಣವಾಗಿ ಮೀಸಲಾತಿಯು ತಳಸಮುದಾಯಗಳಾದ ಆದಿವಾಸಿಗಳಿಗಾಗಲೀ, ಅಲೆಮಾರಿಗಳಿಗಾಗಲೀ, ಅಸ್ಪೃಶ್ಯರಿಗಾಗಲೀ ಯಾರಿಗೂ ದಕ್ಕಿಲ್ಲ. ಆದರೆ ಮುಂದುವರಿದ ಮೇಲುಜಾತಿಗಳಿಗೆ ಹೆಚ್ಚು ಪ್ರಾತಿನಿಧ್ಯ ಸಿಗಲು ಏನು ಕಾರಣ? ಮೇಲಿನವರಿಗೆ ಹೆಚ್ಚಿಗೆ ಪಾಲು ಎಂಬ ಮನುಧರ್ಮ ಶಾಸ್ತ್ರದ ನೀತಿ ಕಾರಣವಲ್ಲವೆ? ಇದನ್ನು ನಮ್ಮ ನ್ಯಾಯಾಲಯವೂ ಎತ್ತಿ ಹಿಡಿಯಿತಲ್ಲ! ಹೀಗೆಯೇ ಬಾಬ್ರಿ ಮಸೀದಿ ಧ್ವಂಸದಲ್ಲಿ ನಮ್ಮ ಸುಪ್ರೀಂ ಕೋರ್ಟ್, ಬಹುಜನರ ಭಾವನೆ ಪರಿಗಣಿಸಿ ತೀರ್ಪು ನೀಡುವುದಾದರೆ, ನಮ್ಮ ಕಾನೂನು ಕಟ್ಟಳೆಗಳ ಸೂತ್ರ ಕಿತ್ತೆಸದಂತಾಗುವುದಿಲ್ಲವೆ? ಅಂದರೆ, ಈ ಹಿಂದೆ ಇದ್ದಂತಹ ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಎಂಬ ನೀತಿಯಿಲ್ಲದ ನ್ಯಾಯಪದ್ಧತಿಯತ್ತ ಹಿಂದಕ್ಕೆ ಚಲಿಸಿದಂತಾಯ್ತು. ಹೀಗೆಯೇ 1998ರಲ್ಲಿ ಕೇಂದ್ರ ಸಚಿವ ಡಾ.ಮುರಳಿ ಮನೋಹರ ಜೋಷಿಯವರು ಪಠ್ಯಪುಸ್ತಕಗಳಲ್ಲಿ, ಗಂಡು ಸಂತಾನ ಪಡೆಯಲು ಪುತ್ರಕಾಮೇಷ್ಟಿ ಯಜ್ಞ ನಡೆಸುವುದು ಹೇಗೆಂಬುದನ್ನು ಕಲಿಕೆಗೆ ಪಠ್ಯವಾಗಿಸುತ್ತಾರೆ. ವೈಜ್ಞಾನಿಕ ಖಗೋಳಶಾಸ್ತ್ರಕ್ಕೆ ಬದಲಾಗಿ ಜ್ಯೋತಿಷ್ಯ ಶಾಸ್ತ್ರದ ಕಲಿಕೆ, ಹಾಗೇ ‘ಪೌರೋಹಿತ್ಯ ಮತ್ತು ಕರ್ಮಕಾಂಡ’ ಪಠ್ಯ ವಿಷಯವಾಗುವುದಾದರೆ ಇವರು ಯಾವ ಕಾಲದಲ್ಲಿ ವಾಸಿಸುತ್ತಿದ್ದಾರೋ ತಿಳಿಯದು. ಇವರು ಹಿಂಚಲನೆಯವರು. ಇವರುಗಳ ಪಾದ ಹಿಂದಕ್ಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.