ADVERTISEMENT

ಒಳನೋಟ | ಅರಣ್ಯ ಸಂರಕ್ಷಣೆಯಲ್ಲಿ ಸಿಇಸಿ ಮೈಲಿಗಲ್ಲು

ಕೆ.ಎನ್.ಶಾಂತಕುಮಾರ್
Published 19 ಫೆಬ್ರುವರಿ 2022, 21:30 IST
Last Updated 19 ಫೆಬ್ರುವರಿ 2022, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಈ ದೇಶದಲ್ಲಿ ಅರಣ್ಯ ಸಂಪತ್ತು ಇವತ್ತೇನಾದರೂ ಕನಿಷ್ಠ ಈ ಪ್ರಮಾಣದಲ್ಲಾದರೂ ಉಳಿದಿದೆ ಎಂದರೆ ಅದಕ್ಕೆ ಕಾರಣ ಸುಪ್ರೀಂ ಕೋರ್ಟ್‌.1996ರಲ್ಲಿ ಟಿ.ಎನ್.ಗೋದಾವರ್ಮನ್ ತಿರುಮಲಪಾಡ v/s ಕೇಂದ್ರ ಸರ್ಕಾರದ ನಡುವಿನ ಸಾರ್ವಜನಿಕ‌ ಹಿತಾಸಕ್ತಿ ಅರ್ಜಿಯಲ್ಲಿಸುಪ್ರೀಂ ಕೋರ್ಟ್ ರಚಿಸಿದ, ಕೇಂದ್ರ ಉನ್ನತಾಧಿಕಾರ ಸಮಿತಿಯು (ಸಿಇಸಿ) ಅರಣ್ಯ ಸಂರಕ್ಷಣೆಯ ನಿಟ್ಟಿನಲ್ಲಿ ಅದ್ಭುತ ಮೈಲಿಗಲ್ಲು ಎಂದೇ ಹೇಳಬಹುದು. ಈ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಸುಪ್ರೀಂ ಕೋರ್ಟ್‌ ಕಾಲಕ್ಕೆ ತಕ್ಕುದಾದ ನಿರ್ದೇಶನ ಹಾಗೂ ಆದೇಶಗಳನ್ನು ನಿರಂತರವಾಗಿ ನೀಡುತ್ತಾ ಬಂದಿದೆ.

ಅರಣ್ಯ ಸಂರಕ್ಷಣೆ ವಿಷಯದಲ್ಲಿ ಆಡಳಿತಾರೂಢ ಸರ್ಕಾರಗಳು ಮತ್ತು ಕಾರ್ಯಾಂಗಗಳ ಕಾಳಜಿ ಅಷ್ಟಕ್ಕಷ್ಟೆ. ಇಂತಹ ನಿರ್ಲಕ್ಷ್ಯಕ್ಕೆ ಸುಪ್ರೀಂ ಕೋರ್ಟ್ ಅನೇಕ ಬಾರಿ ಸರ್ಕಾರಗಳನ್ನು ತಿವಿದು ಜಾಗೃತಗೊಳಿಸಿರುವುದುಂಟು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹತ್ತಾರು ಯೋಜನೆಗಳನ್ನು ರೂಪಿಸುವ ನೆಪದಲ್ಲಿ ಅರಣ್ಯಪ್ರದೇಶದ ಬಳಕೆಗೆ ಅನುಮತಿ ನೀಡಲಾಗಿದೆ. ಪ್ರಮಾಣಪತ್ರ ವಿತರಿಸಿ ಅವುಗಳನ್ನು ಕಾನೂನುಬದ್ಧಗೊಳಿಸಲಾಗಿದೆ. 80-100 ವರ್ಷಗಳ ಕಾಲ ಅರಣ್ಯ ಭೂಮಿಯಾಗಿ ಸಂರಕ್ಷಿಸಿ ಇಡಬೇಕಾಗಿದ್ದ ಕಾಡುಮೇಡುಗಳು ಇವತ್ತು ಲೂಟಿಕೋರರ ಪಾಲಾಗಿ ಒತ್ತುವರಿಯಾಗುತ್ತಿದೆ. ತಗಾದೆ-ತಕರಾರು ತೆಗೆದು ಇವುಗಳನ್ನೆಲ್ಲಾ ಕಂದಾಯ ಭೂಮಿಯನ್ನಾಗಿ ಪರಿವರ್ತಿಸಲಾಗಿದೆ.

ಬುಡಕಟ್ಟು ಜನರನ್ನು ಸಂರಕ್ಷಿಸುವನಿಟ್ಟಿನಲ್ಲಿ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ಅಧಿನಿಯಮ–2006 ಅನ್ನು ಜಾರಿಗೆತರಲಾಯಿತು. ಆದರೆ, ಬಗರ್‌ಹುಕುಂ ಸಾಗುವಳಿದಾರರಿಗೆ ಅನ್ವಯಿಸುವ ಷರತ್ತುಗಳು ಅರಣ್ಯ ಹಕ್ಕು ಕಾಯ್ದೆಯಡಿ ಬರುವ ಪ್ರಕರಣಗಳಿಗೆ ಇದು ಅನ್ವಯಿಸುವುದಿಲ್ಲ.ಅರಣ್ಯದೊಳಗೆ ವಾಸ ಮಾಡುತ್ತಿರುವವರು ಮತ್ತು ಸದಾ ಅರಣ್ಯದ ಉತ್ಪನ್ನಗಳನ್ನೇ ತಮ್ಮ ಜೀವನಾಧಾರವನ್ನಾಗಿ ಮಾಡಿಕೊಂಡವರು ಈ ಕಾಯ್ದೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ.

ADVERTISEMENT

ದುರದೃಷ್ಟವಶಾತ್‌ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿಲ್ಲ ಎಂದೇ ಹೇಳಬೇಕಾಗುತ್ತದೆ. ಒಂದು ವೇಳೆ ಈ ಕಾಯ್ದೆ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬಂದಲ್ಲಿ ಅರಣ್ಯ ಭೂಮಿಯನ್ನು ವಿಚಾರಹೀನವಾಗಿ ಅತಿಕ್ರಮಿಸುವ, ಅತಾರ್ಕಿಕವಾಗಿ ವಿತರಿಸುವ, ಬೇಸಾಯದ ಹೆಸರಿನಲ್ಲಿ ಸಾಗುವಳಿಗೆ ಅವಕಾಶ ನೀಡುವ ಮತ್ತು ಅರಣ್ಯ ವ್ಯಾಪ್ತಿಯೊಳಗೆ ಕಾನೂನುಬಾಹಿರ ಚಟುವಟಿಕೆಗಳಿಗೆ ಎಗ್ಗಿಲ್ಲದೆ ಅನುಮತಿ ಪತ್ರ ನೀಡುವ ಸರ್ಕಾರಗಳ ಧೋರಣೆಗೆ ಕಡಿವಾಣ ಹಾಕಬಹುದು.

ಲೇಖಕರು ಹಿರಿಯ ವಕೀಲರು, ಕರ್ನಾಟಕ ಹೈಕೋರ್ಟ್‌

ನಿರೂಪಣೆ ಬಿ.ಎಸ್‌.ಷಣ್ಮುಖಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.