ಬೆಂಗಳೂರು: ರಾಜ್ಯದಲ್ಲಿ ಜಲ ಸಂಪನ್ಮೂಲ ಇಲಾಖೆ ಒಟ್ಟು ₹14,549 ಕೋಟಿ ಮೊತ್ತದಲ್ಲಿ 4,001 ಕೆರೆಗಳನ್ನು ತುಂಬಿಸುವ 134 ಯೋಜನೆಗಳನ್ನು ಕೈಗತ್ತಿಕೊಂಡಿದ್ದು, ಈಗಾಗಲೇ ₹6,548 ಕೋಟಿ ವೆಚ್ಚ ಮಾಡಲಾಗಿದೆ.
ಈ ಪೈಕಿ 41 ಯೋಜನೆಗಳು ಪೂರ್ಣಗೊಂಡಿದ್ದು, 630 ಕೆರೆಗಳನ್ನು ತುಂಬಿಸಲಾಗಿದೆ. ಇದಕ್ಕೆ ಒಟ್ಟು ₹2,115 ಕೋಟಿ ವೆಚ್ಚ ಮಾಡಲಾಗಿದೆ ಎಂದು ಇಲಾಖೆಯ ಮೂಲಗಳು ಹೇಳಿವೆ.
ಪ್ರಸಕ್ತ ಸಾಲಿನಲ್ಲಿ ಕೆರೆ ತುಂಬಿಸುವ ಮತ್ತು ನೀರಾವರಿ ಸೌಲಭ್ಯ ಒದಗಿಸುವ ಒಟ್ಟು ₹ 4,134 ಕೋಟಿ ಮೊತ್ತದ 11 ಯೋಜನೆಗಳಿಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಭದ್ರಾ ಉಪ ಜಲಾನಯನ ಪ್ರದೇಶದಿಂದ ಏತ ನೀರಾವರಿ ಮೂಲಕ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ 31, ಕಡೂರು ತಾಲ್ಲೂಕಿನ 116, ಚಿಕ್ಕಮಗಳೂರು ತಾಲ್ಲೂಕಿನ 48 ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ 4 ಸೇರಿ ಒಟ್ಟು 197 ಕೆರೆಗಳನ್ನು₹ 1,281.80 ಕೋಟಿ ವೆಚ್ಚದಲ್ಲಿ ತುಂಬಿಸಲು ಯೋಜಿಸಲಾಗಿದೆ.
ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನಲ್ಲಿ₹ 900 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಮತ್ತು ಕೈಗಾರಿಕೆ ಮತ್ತು ಕೆರೆ ತುಂಬಿಸುವ ಘಟ್ಟಿ ಬಸವಣ್ಣ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.