ಹುಬ್ಬಳ್ಳಿ: ಅಂಧ, ಅಂಗವಿಕಲ ಮಕ್ಕಳಿಗಾಗಿ ರಾಜ್ಯದಲ್ಲಿರುವ ಶಾಲೆಗಳಿಗೆ ಮೂರು ತಿಂಗಳಿಗೊಮ್ಮೆ ಅನುದಾನ ಬಿಡುಗಡೆಯಾಗುತ್ತದೆ. ಮಕ್ಕಳಿಗಾಗಿ ಮಾಡುವ ವೆಚ್ಚ ಹಾಗೂ ವಿಶೇಷ ಶಿಕ್ಷಕರ ಗೌರವ ಧನ ಐದು ವರ್ಷಗಳಿಂದ ಹೆಚ್ಚಳವಾಗಿಲ್ಲ.
ಪ್ರಾಥಮಿಕ ಶಾಲೆಯ ವಿಶೇಷ ಶಿಕ್ಷಕರಿಗೆ ಮಾಸಿಕ ₹13,500 ಹಾಗೂ ಪ್ರೌಢಶಾಲಾ ವಿಶೇಷ ಶಿಕ್ಷಕರಿಗೆ ₹16,000 ಗೌರವ ಧನ ನೀಡಲಾಗುತ್ತದೆ. ಮೂರು ತಿಂಗಳಿಗೊಮ್ಮೆ ಅವರ ಗೌರವ ಧನ ಬಿಡುಗಡೆಯಾಗುತ್ತಿದೆ.
ಗೌರವ ಧನ ಹೆಚ್ಚಿಸದಿರುವುದು ಹಾಗೂ ಸೇವಾ ಭದ್ರತೆ ಇಲ್ಲದ್ದರಿಂದ ವಿಶೇಷ ಶಿಕ್ಷಕರು ಶಾಲೆಗಳಲ್ಲಿ ಬಹಳ ಇರುವುದಿಲ್ಲ. ಅವಕಾಶ ಸಿಗುತ್ತಿದ್ದಂತೆಯೇಬೇರೆ ಕಡೆಗೆ ಹೊರಟುಬಿಡುತ್ತಾರೆ.
ರಾಜ್ಯದಲ್ಲಿ ನಾಲ್ಕು ಸರ್ಕಾರಿ ಅಂಧ ಮಕ್ಕಳ ಶಾಲೆ, 34 ಅಂಗವಿಕಲ ಮಕ್ಕಳ, 138 ಶಿಶು ಕೇಂದ್ರೀಕೃತ ಶಾಲೆಗಳಿವೆ. ಬಾಡಿಗೆ ಕಟ್ಟಡವಿದ್ದರೆ ಅನುದಾನ ನೀಡಲಾಗುತ್ತದೆ. ಸ್ವಂತ ಕಟ್ಟಡವಿದ್ದರೆ ನಿರ್ವಹಣೆಗೂ ಹಣ ನೀಡುವುದಿಲ್ಲ. ಹಾಗಾಗಿ, ಶಾಲೆಗಳ ದುರಸ್ತಿ, ಸುಣ್ಣ–ಬಣ್ಣದ ವೆಚ್ಚವನ್ನು ಶಾಲಾ ಆಡಳಿತ ಮಂಡಳಿಗಳೇ ಭರಿಸಬೇಕಾಗುತ್ತದೆ.
ಅಂಗವಿಕಲ ಮಕ್ಕಳಿಗೆ ಪ್ರತಿ ತಿಂಗಳಿಗೆ ₹6,000, ಬುದ್ಧಿಮಾಂದ್ಯ ಮಕ್ಕಳಿಗೆ ₹6,600 ಕೊಡಲಾಗುತ್ತದೆ. ಇದರಲ್ಲಿಯೇ ಶಿಕ್ಷಕರ ಗೌರವ ಧನ, ಆರೋಗ್ಯ ವೆಚ್ಚ, ಸಮವಸ್ತ್ರ ಮುಂತಾದ ಖರ್ಚುಗಳು ಸೇರಿವೆ. ನಾಲ್ಕು ವರ್ಷಗಳಿಂದ ಬದಲಾಯಿಸಿಲ್ಲ. ಅಗತ್ಯ ವಸ್ತುಗಳ ಬೆಲೆ ಹೆಚ್ಚಿರುವುದರಿಂದ ಮಕ್ಕಳಿಗೆ ನೀಡುವ ಅನುದಾನ ಹೆಚ್ಚಿಸಬೇಕು ಎಂಬುದು ಶಾಲಾ ಆಡಳಿತ ಮಂಡಳಿಗಳ ಆಗ್ರಹ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.