ಚಿಕ್ಕ ಗೂಡಂಗಡಿಯಲ್ಲಿ ಪ್ರಾರಂಭವಾದ ವ್ಯಾಪಾರ ಇಂದು ಹೋಟೆಲ್ ಹಂತಕ್ಕೆ ತಲುಪಿದೆ.
ಇದು 17 ವರ್ಷದ ಹಿಂದಿನ ಕಥೆ.
ಎನ್.ಆರ್.ಕಾಲೊನಿಯ ನೆಟ್ಟಕಲ್ಲಪ್ಪ ಸರ್ಕಲ್ನಲ್ಲಿರುವ ಐಸಿಐಸಿಐ ಬ್ಯಾಂಕ್ ಪಕ್ಕದ, ಚಿಕ್ಕ ಗೂಡಂಗಡಿ ಬಳಿ, ಸಂಜೆಯಾದರೆ ಗಿಜಿಗಿಜಿ ಎನ್ನುವಷ್ಟು ಸದ್ದು. ಹತ್ತಾರು ಮಂದಿ ಕ್ಯೂ ನಿಂತು ಗಿರಮಿಟ್, ಬಜ್ಜಿ, ದಾವಣಗೆರೆ ಬೆಣ್ಣೆ ದೋಸೆ ಸವಿಯುತ್ತಿದ್ದರು.
‘ಗುರು ಕೊಟ್ಟೂರೇಶ್ವರ‘ ಗೂಡಂಗಡಿಯ ವ್ಯಾಪಾರ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತು.ಈಗ ಅದೇ ಅಂಗಡಿ ಪಕ್ಕದಲ್ಲಿ‘ರಸದೌತಣ’ ಹೋಟೆಲ್ ಆರಂಭಗೊಂಡಿದೆ.
‘ನಾನು ಗೂಡಂಗಡಿಯಲ್ಲಿ ವ್ಯಾಪಾರ ಆರಂಭಿಸಿದಾಗ ಬೆಂಗಳೂರಿನ ಜನಕ್ಕೆ ದಾವಣಗೆರೆ ಬೆಣ್ಣೆ ದೋಸೆಯ ಪರಿಚಯವೇ ಇರಲಿಲ್ಲ. ನನಗೆ ಗೊತ್ತಿದ್ದ ಹಾಗೆ ಬೇರೆ ಎಲ್ಲೂ ಮಾಡುತ್ತಿರಲಿಲ್ಲ. 17 ವರ್ಷದ ಹಿಂದೆ ನಮಗೆ ವ್ಯಾಪಾರ ಸಾಕಷ್ಟು ಕುದುರಿತು. ಹೋಟೆಲ್ ಮಾಡುವ ಯೋಚನೆ ಇತ್ತು. ಆದರೆ ಜಾಗ, ದುಡ್ಡು ಎಲ್ಲಾ ಬೇಕಲ್ವಾ. ಕಾದಿದ್ದಕ್ಕೂ ಈಗ ಫಲ ಸಿಕ್ಕಿದೆ. ನಮ್ಮ ಗೂಡಂಗಡಿ ಪಕ್ಕದಲ್ಲಿಯೇ ಇದ್ದ ಅಂಗಡಿ ಇತ್ತೀಚೆಗೆ ಖಾಲಿ ಆಯಿತು. ಇಲ್ಲಿಯೇ ಹೋಟೆಲ್ ಆರಂಭಿಸಿದ್ದೇವೆ’ ಎಂದು ಮಾಲೀಕ ಎಚ್.ಮಹಾದೇವ ಅವರು ಹೇಳಿದರು.
ಗುರುವಾರ ‘ರಸದೌತಣ‘ಕ್ಕೆ ಶಾಸಕ ರವಿ ಸುಬ್ರಹ್ಮಣ್ಯ ಚಾಲನೆ ನೀಡಿದರು. ನಟಿ ಮಯೂರಿ ಕೂಡ ಹೋಟೆಲ್ಗೆ ಬಂದು ಶುಭ ಹಾರೈಸಿದರು.
ರಸದೌತಣದ ವಿಶೇಷ
ಗೂಡಂಗಡಿಗಿಂತ ರಸದೌತಣ ಭಿನ್ನವಾಗಿರಲಿದೆ. ಇಲ್ಲಿ ಉತ್ತರ ಭಾರತ ಶೈಲಿಯ ತಿನಿಸುಗಳು ಸಿಗಲಿವೆ. ದಕ್ಷಿಣ ಭಾರತ ಶೈಲಿಯ ಊಟ ಕೂಡ ಸಿಗಲಿದೆ. ಸಂಜೆಯಾದರೆ ಎಲ್ಲಾ ರೀತಿಯ ಚಾಟ್ಸ್ ಸಿಗಲಿದೆ. ಮಧ್ಯಾಹ್ನದ ಊಟಕ್ಕೆ ಬೇಳೆ ಹಾಗೂ ಕಾಯಿ ಹೋಳಿಗೆ ಕೂಡ ಸಿಗಲಿದೆ.
ಮೊದಲಿನಂತೆ ‘ಗುರು ಕೊಟ್ಟೂರೇಶ್ವರ’ ಗೂಡಂಗಡಿಯಲ್ಲಿ ಸಂಜೆಯ ಸಮಯ ಪಡ್ಡು ಸಿಗಲಿದೆ.
***
10 ವರ್ಷದಿಂದ ಇಲ್ಲಿಗೆ ತಿಂಡಿ ತಿನ್ನುವುದಕ್ಕೆ ಬರುತ್ತೇನೆ. ದಕ್ಷಿಣ ಭಾರತದ ತಿನಿಸುಗಳ ನಿಜವಾದ ರುಚಿ ಇಲ್ಲಿ ಮಾತ್ರ ಸಿಗುವುದಕ್ಕೆ ಸಾಧ್ಯ. ದೋಸೆ, ಗಿರಮಿಟ್ಟು, ಬಜ್ಜಿ ತಿಂದವರು ಮತ್ತೆ ಬರದೇ ಇರುವುದಿಲ್ಲ
ಸಿ.ಸಿ.ರಮೇಶ್,ವಿಜಯನಗರ
***
ಹೋಟೆಲ್ ಸಮಯ: ಬೆಳಿಗ್ಗೆ 7.30ರಿಂದ ರಾತ್ರಿ 19.
ಟೇಬಲ್ ಕಾಯ್ದಿರಿಸಲು: 9448305384
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.