ADVERTISEMENT

ಇವ್ರು ಹತ್ತು ರೂಪಾಯಿ ಡಾಕ್ಟ್ರು!

ಶ್ರೀರಕ್ಷಾ ಶಿರ್ಲಾಲ್.ಕಾರ್ಕಳ
Published 7 ಜನವರಿ 2020, 12:07 IST
Last Updated 7 ಜನವರಿ 2020, 12:07 IST
   
""

ಅದೊಂದು ಪುಟ್ಟದಾದ ಖಾಸಗಿ ಆಸ್ಪತ್ರೆ. ಒಳಗಡೆ ಒಂದು ಕಡೆ ಸಾಲಾಗಿ ನಿಂತಿರುವ ರೋಗಿಗಳು. ಇನ್ನೊಂದೆಡೆ ರೋಗಿಯೊಬ್ಬರನ್ನು ಕೂರಿಸಿಕೊಂಡು, ಎದೆಗೆ ಸ್ಟೆತಸ್ಕೋಪ್‌ ಇಡುತ್ತಾ, ಆತ್ಮೀಯವಾಗಿ ಮಾತನಾಡಿಸುತ್ತಿರುವ 80ರ ಹರೆಯದ ವೈದ್ಯರು..

ಹೀಗೆ ಆ ವೈದ್ಯರ ಬಳಿ ಆಪ್ತ ಸಲಹೆ, ಚಿಕಿತ್ಸೆ ಪಡೆದು, ಗುಳಿಗೆ ತೆಗೆದುಕೊಂಡ ರೋಗಿಗಳು, ಅವರ ಕೈಗೆ ₹10 ನೋಟನ್ನಿಟ್ಟು ಹೋಗುತ್ತಿದ್ದರು!

ಅರೆ! ಖಾಸಗಿ ಆಸ್ಪತ್ರೆಯಲ್ಲಿ ಹತ್ತು ರೂಪಾಯಿಗೆ ಚಿಕಿತ್ಸೆ ಕೊಡುತ್ತಾರಾ ? ಎಲ್ಲಾದ್ರೂ ಉಂಟೆ..’?

ADVERTISEMENT

ಖಂಡಿತಾ ಉಂಟು. ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಲ್ಲಿರುವ ‘ಡಾ.ಬಾಳಿ’ ಆಸ್ಪತ್ರೆಯ ವೈದ್ಯ ಡಾ.ಅಣ್ಣಪ್ಪ ಎನ್ ಬಾಳಿ, ತಾವು ನೀಡುವ ಚಿಕಿತ್ಸೆಗೆ ರೋಗಿಗಳಿಂದ ಪಡೆಯುವ ಶುಲ್ಕ ₹10. ಅದಕ್ಕೆ ಅವರನ್ನು ಬಡವರ ಪಾಲಿನ ‘ಹತ್ತು ರೂಪಾಯಿ ಡಾಕ್ಟ್ರು’ ಎನ್ನುತ್ತಾರೆ.

ಬಡತನದಲ್ಲೇ ಬದುಕಿದವರು..

‌ಬಡತನದಲ್ಲೇ ಹುಟ್ಟಿ, ಬೆಳೆದು ಹುಬ್ಬಳ್ಳಿಯ ಕೆಎಂಸಿಯಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಡಿಪ್ಲೊಮಾ ಕೋರ್ಸ್‌ ಮಾಡಿದ ಅಣ್ಣಪ್ಪ ಅವರು 1967ರಲ್ಲಿ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ಅಧಿಕಾರಿಯಾಗಿದ್ದರು. 1998ರಲ್ಲಿ ಸೇವೆಯಿಂದ ನಿವೃತ್ತಿಯಾದರು. ನಂತರ ಅದೇ ವರ್ಷ ಡಾ.ಬಾಳಿ ಆಸ್ಪತ್ರೆ ತೆರೆದು, ಬಡವರ ‘ಆರೋಗ್ಯ ಸೇವೆ’ಗೆ ನಿಂತರು. ಅಂದಿನಿಂದ ಇಂದಿನವರೆಗೆ ಮೂರ್ನಾಲ್ಕು ಮಂದಿ ಸಹಾಯಕರೊಂದಿಗೆ ಈ ಪುಟ್ಟ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ.

ಬಾಳಿ ಆಸ್ಪತ್ರೆ ಬೆಳಿಗ್ಗೆ 10ಕ್ಕೆ ಆರಂಭವಾಗುತ್ತದೆ. ಆದರೆ, ಜನ 9ಕ್ಕೆ ಬಂದು ಆಸ್ಪತ್ರೆಯ ಎದುರಿನ ಕಟ್ಟೆ ಮೇಲೆ ಜಮಾಯಿಸಿರುತ್ತಾರೆ. ಆಗ ತೆರೆದ ಆಸ್ಪತ್ರೆ ಸಂಜೆ 6ಗಂಟೆಯವರೆಗೂ ಮುಂದುವರಿಯುತ್ತದೆ. ನಂತರ ಇನ್ನೊಂದು ಪಾಳಿ ರಾತ್ರಿ 8 ಗಂಟೆಗೆ ಶುರುವಾಗಿ, 9.30ವರೆಗೂ ನಡೆಯುತ್ತದೆ. ನಿತ್ಯ ಕನಿಷ್ಠ 70 ರಿಂದ 100 ರೋಗಳಿಗೆ ಡಾ.ಅಣ್ಣಪ್ಪ ಚಿಕಿತ್ಸೆ ನೀಡುತ್ತಾರೆ. ಈ ಆಸ್ಪತ್ರೆಗೆ ಬರುವವರಲ್ಲಿ ಮುಕ್ಕಾಲುಪಾಲು ಬಡವರು. ಹೀಗಾಗಿ ತಪಾಸಣೆ, ಚುಚ್ಚುಮದ್ದು, ಗುಳಿಗೆಗಳೂ ಸೇರಿ ಪ್ರತಿ ರೋಗಿಯಿಂದ ತೆಗೆದುಕೊಳ್ಳುವ ಶುಲ್ಕ ₹10!

ಬಡತನದಲ್ಲೇ ಬೆಳೆದವರು..

ರೋಗಿಗಳನ್ನು ಮಾತನಾಡಿಸುತ್ತಲೇ, ಅವರ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಬಾಳಿ ಡಾಕ್ಟರ್‌. ಒಂದೊಮ್ಮೆ ರೋಗಿಗಳು ಆರ್ಥಿಕವಾಗಿ ದುರ್ಬಲರು ಎಂದು ತಿಳಿದರೆ, ಅಂಥವರಿಗೆ ಒಮ್ಮೊಮ್ಮೆ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ. ‘ಯಾಕೆ ಹೀಗೆ ಮಾಡ್ತೀರಿ’ ಎಂದು ಕೇಳಿದರೆ, ಬಡತನದಲ್ಲಿ ಬೆಳೆದವನು ನಾನು. ಆ ವೇಳೆ ಅನೇಕರು ನನ್ನ ನೆರವಿಗೆ ಬಂದಿದ್ದಾರೆ. ನನ್ನ ಕಷ್ಟದ ದಿನಗಳಲ್ಲಿ ನೆರವಾದವರಿಗೆ ಈ ಮೂಲಕ ಸೇವೆ ಸಲ್ಲಿಸಿ, ಕೃತಜ್ಞತೆ ಸಲ್ಲಿಸಲು ಅವಕಾಶ ಸಿಕ್ಕಿದೆ‘ ಎಂದು ವಿನಮ್ರವಾಗಿ ಹೇಳುತ್ತಾರೆ ಡಾಕ್ಟರ್.

ಬಾಳಿ ಡಾಕ್ಟ್ರರ್ ಬಳಿ ಬರುವವರಿಗೆ, ಚಿಕಿತ್ಸೆ ಜತೆಗೆ ಸಮಾಧಾನದ ಮಾತುಗಳು ಬೋನಸ್‌. ಕೆಲವು ರೋಗಿಗಳಿಗೆ, ಸಣ್ಣ ಪುಟ್ಟ ಸಹಾಯವನ್ನು ಮಾಡುತ್ತಿರುತ್ತಾರೆ. ಕೆಲವು ವರ್ಷಗಳ ಹಿಂದೆ ಏಡ್ಸ್ ಪೀಡಿತ ಮಹಿಳೆಯೊಬ್ಬರು ತೀರಿ ಹೋದರು. ಆಕೆಯ ಮಗಳು ಅನಾಥಳಾದಳು. ದಿಕ್ಕಿಲ್ಲದ ಆಕೆಗೆ, ಇದೇ ವೈದ್ಯರೇ ಚಿಕಿತ್ಸೆ ನೀಡಿದರು. ಇದು ವೈದ್ಯರ ಹೃದಯ ವೈಶಾಲ್ಯಕ್ಕೆ ಹಿಡಿದ ಕೈಗನ್ನಡಿ.

ವೈದ್ಯೋ ನಾರಾಯಣೋ ಹರಿಃ

ಬಾಳಿಯವರ ವೃತ್ತಿ ಬದುಕು ನೋಡಿದಾಗ, ‘ವೈದ್ಯೋ ನಾರಾಯಣ ಹರಿಃ’ ಎಂಬ ಸಾಲು ನೆನಪಾಗುತ್ತದೆ. ಇವರಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾದವರು ವೈದ್ಯರನ್ನು ಹಾಗೆ ಗೌರವಿಸುತ್ತಾರೆ. ಇವರಲ್ಲಿ ಚಿಕಿತ್ಸೆ ಪಡೆದ ಫಕೀರಪ್ಪ ‘ಬಾಳಿ ಡಾಕ್ಟ್ರು ಔಷಧ ಕೊಟ್ಟರೆ, ರೋಗ ಮಾಯವಾಗ್ತದೆ’ ಎನ್ನುತ್ತಾರೆ.‌ ಹೀಗೆ ಊರು–ಕೇರಿ, ಬಡವ–ಬಲ್ಲಿದ ಎನ್ನದೇ ಚಿಕಿತ್ಸೆ ನೀಡುವ ಡಾ ಬಾಳಿ ಅವರು, ಫಕೀರಪ್ಪನಂತಹ ನೂರಾರು ಮಂದಿಗೆ ‘ಶಾಶ್ವತ ಡಾಕ್ಟರ್’. ಬೈಲಹೊಂಗಲ ಅಷ್ಟೇ ಅಲ್ಲ, ಸುತ್ತ-ಮುತ್ತ ತಾಲ್ಲೂಕಿನಲ್ಲೂ ‘ಬಾಳಿ ಡಾಕ್ಟ್ರರ್ ಚಿಕಿತ್ಸೆ ಬೇಕು’ ಎನ್ನುವ ರೋಗಿಗಳಿದ್ದಾರೆ.

ಆಸ್ಪತ್ರೆಯಲ್ಲಿ ಔಷಧಿ ಚೀಟಿ ಬರೆಯುತ್ತಿರುವ ಡಾ. ಬಾಳಿ

ತನ್ನ ವೈದ್ಯಕೀಯ ಸೇವಾ ಕಾರ್ಯ ನನ್ನೊಂದಿಗೆ ಕೊನೆಯಾಗಬಾರೆಂದು ಭಾವಿಸಿ, ತನ್ನ ಇಬ್ಬರು ಮಕ್ಕಳಿಗೂ ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಉತ್ತೇಜಿಸಿದ್ದಾರೆ. ಸದ್ಯ ಮಗ ಮತ್ತು ಸೊಸೆ ಇಬ್ಬರೂ ವೈದ್ಯರಾಗಿದ್ದಾರೆ. ಮಗಳು ವೈದ್ಯಕೀಯ ವಿಭಾಗಕ್ಕೆ ಸಂಬಂಧಿಸಿದ ಸಂಶೋಧನೆ ಕೈಗೊಂಡಿದ್ದಾರೆ.

‘ವೈದ್ಯಕೀಯ ವೆಚ್ಚ ಭರಿಸಲಾಗದೇ ನೂರಾರು ಮಂದಿ ಜೀವ ಕಳೆದುಕೊಳ್ಳುವುದನ್ನು ನೋಡಿದ್ದೇನೆ. ಹೀಗಾಗಿ ವೈದ್ಯರು ತಮ್ಮ ಆದಾಯದ ಅಲ್ಪ ಭಾಗವನ್ನು ಅಸಹಾಯಕ ಜನರಿಗೆ ಮೀಸಲಿಡಬೇಕು. ಈ ಮೂಲಕ ವೈದ್ಯಕೀಯ ವೃತ್ತಿಗೊಂದು ಗೌರವ ದೊರಕಿಸಿಕೊಡಬೇಕು. ಇದು ಪ್ರತಿಯೊಬ್ಬ ವೈದ್ಯನ ಕರ್ತವ್ಯವಾಗಲಿ ಎಂದು ಆಶಿಸುತ್ತಾರೆ ಬಾಳಿ ಡಾಕ್ಟ್ರು.

ಪ್ರತಿ ವೈದ್ಯ ಕನಿಷ್ಠ ಒಬ್ಬ ವ್ಯಕ್ತಿಗಾದರೂ ಉಚಿತ ಚಿಕಿತ್ಸೆ ನೀಡಬೇಕು. ಆ ಚಿಕಿತ್ಸೆ ಅಗತ್ಯ ವ್ಯಕ್ತಿಗೇ ತಲುಪಬೇಕು. ಆಗ ವೃತ್ತಿ ಧರ್ಮ ಪಾಲಿಸಿದಂತಾಗುತ್ತದೆ ಎನ್ನುತ್ತಾರೆ ಅವರು. ಡಾ. ಬಾಳಿ ಅವರ ಸಂಪರ್ಕಕ್ಕೆ: 9742187635

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.