ADVERTISEMENT

ತಾಂಬೂಲದಲ್ಲಡಗಿದೆ ಆರೋಗ್ಯದ ಗುಟ್ಟು

ಶುಭಾ ಕೆ.ಬಿ.
Published 6 ಜನವರಿ 2023, 19:30 IST
Last Updated 6 ಜನವರಿ 2023, 19:30 IST
ವಿಳೆದೆಲೆ
ವಿಳೆದೆಲೆ   

ಹಿಂದಿನ ಕಾಲದಲ್ಲಿ ಊಟವಾದ ನಂತರ ಕಡ್ಡಾಯವಾಗಿ ಎಲೆ–ಅಡಿಕೆ ಹಾಕುವುದು ಒಂದು ರೀತಿ ಸಂಪ್ರದಾಯವಾಗಿತ್ತು. ಈಗಲೂ ಕೆಲವು ಕಡೆ ಮುಂದುವರಿದಿದೆ. ಕೆಲವು ಕಡೆ ತಾಂಬೂಲ ಹಾಕುವ ಸ್ವರೂಪ ಬದಲಾಗಿದೆ. ಈಗ ತಾಂಬೂಲದ ಜಾಗವನ್ನು ಬೀಡ ಆವರಿಸಿದೆ. ತಾಂಬೂಲವಾಗಲಿ, ಬೀಡ ಆಗಲಿ ಅದರಲ್ಲಿ ಕಾಯಂ ಆಗಿ, ಸಾಮಾನ್ಯವಾಗಿರುವ ವಸ್ತುಗಳೆಂದರೆ ಅದು ವೀಳ್ಯೆದೆಲೆ–ಅಡಿಕೆ–ಸುಣ್ಣ...!

ತಿಂದ ಆಹಾರ ಚಂದ ಜೀರ್ಣ ಆಗಲು ಊಟದ ನಂತರ ತಾಂಬೂಲ ಸವಿಯುವ ಅಭ್ಯಾಸವಿತ್ತು. ಹಾಗಾಗಿ, ಇವತ್ತು ನಗರ ಪ್ರದೇಶದ ಮದುವೆಯಂತಹ ಶುಭಸಮಾರಂಭಗಳಲ್ಲಿ ಊಟದ ನಂತರ ಬೀಡದ ವ್ಯವಸ್ಥೆ ಇರುತ್ತದೆ. ವೀಳ್ಯೆದೆಲೆಯ ತಾಂಬೂಲ ಸೇವನೆ ಕೇವಲ ಅಜೀರ್ಣ ನಿವಾರಣೆಗಷ್ಟೇ ಸೀಮಿತವಾಗಿಲ್ಲ. ಈ ತಾಂಬೂಲ ಸೇವನೆಯ ಹಿಂದೆ ಅನೇಕ ಆರೋಗ್ಯಕ್ಕೆ ಪೂರಕವಾದ ಸಂಗತಿಗಳಿವೆ. ಅವುಗಳು ಹೀಗಿವೆ.

* ವೀಳ್ಯೆದೆಲೆ ಜೊತೆ ಸೇರಿಸುವ ಕೊಬ್ಬರಿ, ಜೀರಿಗೆ, ಅಜ್ವಾನ, ಲವಂಗ, ಸೋಂಪು ಎಲ್ಲ ಅಂಶಗಳು ಕೂಡ ಜೀರ್ಣಕ್ರಿಯೆಗೆ ಸಹಕಾರಿಯಾಗಿವೆ. ಅಲ್ಲದೇ ಬಾಯಿಯ ದುರ್ಗಂಧವನ್ನು ದೂರ ಮಾಡುತ್ತದೆ. ಆದರೆ, ಎಲೆ – ಅಡಿಕೆ ಹಾಕಿದರೆ ಹಲ್ಲಿನಲ್ಲಿ ಕರೆ ಉಳಿಯುತ್ತದೆ ಎಂದುಕೊಂಡು, ತಾಂಬೂಲ ಸವಿಯುವುದನ್ನೇ ಬಿಡುತ್ತಾರೆ. ಹಾಗೆ ಮಾಡದೇ, ಎಲೆ–ಅಡಿಕೆ ಜಗಿದ ನಂತರ, ಚೆನ್ನಾಗಿ ಬಾಯಿ ತೊಳೆದುಕೊಂಡರೆ ಸಾಕಲ್ಲವೇ ?

ADVERTISEMENT

* ಆಯುರ್ವೇದದ ಪ್ರಕಾರ ಸಾಮಾನ್ಯವಾಗಿ ಅನಾರೋಗ್ಯಕ್ಕೆ ವಾತ, ಪಿತ್ತ, ಕಫ ಇವೇ ಮೂರು ಕಾರಣಗಳು. ಇವುಗಳನ್ನು ನಿವಾರಿಸುವ ಶಕ್ತಿ ತಾಂಬೂಲಕ್ಕೆ ಇದೆ. ಅಡಿಕೆಗೆ ವಾತ ನಿವಾರಿ ಸುವ ಗುಣವಿದ್ದರೆ, ವೀಳೆದೆಲೆಗೆ ಕಫ ಶಮನ ಮಾಡುವ ಗುಣವಿದೆ. ಸುಣ್ಣ ಪಿತ್ತವನ್ನು ನಿವಾರಿಸುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.

* ಅಡಿಕೆಗೆ ದೇಹದಲ್ಲಿರುವ ನೀರು ಅಥವಾ ರಕ್ತದ ಹರಿವನ್ನು ನಿಯಂತ್ರಿಸುವ ಶಕ್ತಿ ಇದೆ. ಈ ಕೆಲಸವನ್ನು ಅಡಿಕೆಯ ಒಗರು ನಿರ್ವಹಿಸುತ್ತದೆ. ಮಲಗುವ ಮುನ್ನ ಎಲೆ, ಅಡಿಕೆ, ಸುಣ್ಣ ಸೇರಿಸಿ ಸೇವಿಸುವುದರಿಂದ ರಾತ್ರಿ ಮೂತ್ರವಿಸರ್ಜನೆಗೆ ಏಳುವ ಪ್ರಮೇಯ ಇರುವುದಿಲ್ಲ.

* ಎಲೆ ಸೇವನೆಯಿಂದ ಆಹಾರ ಜೀರ್ಣವಾಗುವ ಜತೆಗೆ ಆಸಿಡಿಟಿ, ಗ್ಯಾಸ್ಟ್ರಿಕ್ ಹಾಗೂ ಅಲ್ಪ ಪ್ರಮಾಣದ ಕೆಮ್ಮನ್ನೂ ನಿವಾರಿಸುತ್ತದೆ.

* ಸುಣ್ಣದಲ್ಲಿ ಯಥೇಚ್ಛವಾಗಿ ಕ್ಯಾಲ್ಶಿಯಂ ಇರುತ್ತದೆ. ಹಾಗಾಗಿ, ತಾಂಬೂಲ ಸೇವನೆಯಿಂದ ಸಹಜವಾಗಿಯೇ ದೇಹಕ್ಕೆ ಕ್ಯಾಲ್ಶಿಯಂ ಅಂಶ ದೊರೆಯುತ್ತದೆ.

* ಸುಣ್ಣ ಸೇವನೆಯಿಂದ ಮಂಡಿನೋವು ನಿವಾರಣೆಯಾಗಿ ಮೂಳೆಗಟ್ಟಿಯಾಗುತ್ತದೆ. ಹಾಲು ಕುಡಿಯುವ ಮಕ್ಕಳಿಗೆ ಜೀರ್ಣಕ್ರಿಯೆ ತೊಂದರೆ ಆಗಿದ್ದರೆ ಅಂತಹ ಬಾಣಂತಿಯರಿಗೆ ವೀಳ್ಯೆದೆಲೆ ಸೇವಿಸಲು ಹೇಳುತ್ತಾರೆ. ಗಮನದಲ್ಲಿರಲಿ ಒಂದು ದಿನದಲ್ಲಿ ಒಂದು ಗೋಧಿ ಕಾಳಿನಷ್ಟು ಸುಣ್ಣವನ್ನು ಮಾತ್ರ ಸೇವಿಸಬಹುದು, ಮಕ್ಕಳಿಗಾದರೆ ಅರ್ಧ ಗೋಧಿ ಕಾಳಿನ ಗಾತ್ರ ಸಾಕು.

*

ತಾಂಬೂಲ ಸೇವನೆಯ ಉಪಯೋಗಗಳು ಸಾಕಷ್ಟಿವೆ. ಬಾಯಿಯ ದುರ್ಗಂಧ ಹಾಗೂ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ಪಚನ ಕ್ರಿಯೆಯನ್ನು ಸರಾಗಗೊಳಿಸುತ್ತದೆ. ಅದರಲ್ಲಿ ಬಳಸುವ ಅಡಿಕೆ ನರವ್ಯೂಹವನ್ನು ಚುರುಕುಗೊಳಿಸುತ್ತದೆ.
ಡಾ.ವಿ.ಎ.ಲಕ್ಷ್ಮಣ್, ಆಯುರ್ವೇದ ವೈದ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.