ADVERTISEMENT

ಮಳೆಗಾಲದಲ್ಲಿರಲಿ ಕೂದಲ ಕಾಳಜಿ

ರೇಷ್ಮಾ
Published 31 ಆಗಸ್ಟ್ 2020, 19:30 IST
Last Updated 31 ಆಗಸ್ಟ್ 2020, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮಳೆಗಾಲದಲ್ಲಿ ಕೂದಲ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲು. ಮಳೆಯಲ್ಲಿ ನೆನೆಯುವುದರಿಂದ ಕೂದಲಿಗೆ ಹಾನಿಯಾಗುತ್ತದೆ. ಜೊತೆಗೆ ಕೂದಲಿಗೆ ಸಂಬಂಧಿಸಿದ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆರ್ದ್ರತೆ ಹೆಚ್ಚಿರುವ ಕಾರಣ ತಲೆಹೊಟ್ಟು, ಕೂದಲ ಬುಡದಲ್ಲಿ ತುರಿಕೆ, ಅಲರ್ಜಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಇವೆಲ್ಲವೂ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ತಜ್ಞರ ಪ್ರಕಾರ ಮಳೆಗಾಲದಲ್ಲಿ ಶೇ 30ರಷ್ಟು ಕೂದಲು ಉದುರುವ ಸಮಸ್ಯೆ ಹೆಚ್ಚುತ್ತದೆ. ಆದರೆ ಅದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕೆಲವೊಂದು ಸುಲಭ ಪರಿಹಾರಗಳ ಮೂಲಕ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಮಳೆಗಾಲದಲ್ಲಿ ತೇವಾಂಶ ಹೆಚ್ಚಿರುವ ಕಾರಣ ಕೂದಲು ಜಿಡ್ಡಾಗಿ ಕಾಣುತ್ತದೆ. ಆ ಕಾರಣಕ್ಕೆ ಡ್ರೈಯರ್‌ನಂತಹ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಸೂಕ್ತವಲ್ಲ. ಇದು ಕೂದಲು ತುಂಡಾಗಲು ಕಾರಣವಾಗಬಹುದು. ಅಲ್ಲದೇ ತಲೆಹೊಟ್ಟಿಗೂ ಕಾರಣವಾಗಬಹುದು. ನೆತ್ತಿಯನ್ನು ಸದಾ ಕೆರೆಯುವುದರಿಂದಲೂ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಾಗಿ ನೇರವಾಗಿ ಸೂರ್ಯನ ಬೆಳಕು ಅಥವಾ ಗಾಳಿಯ ಸಹಾಯದಿಂದ ಕೂದಲು ಒಣಗಿಸಿಕೊಳ್ಳಿ.

ADVERTISEMENT

ಮಳೆಯಲ್ಲಿ ನೆನೆದರೆ ತಕ್ಷಣ ತಲೆಸ್ನಾನ ಮಾಡಿ

ಮಳೆಯಲ್ಲಿ ನೆನೆಯುವುದು ದೇಹಾರೋಗ್ಯ ಹಾಗೂ ಚರ್ಮದ ಆರೋಗ್ಯಕ್ಕೆ ಉತ್ತಮವಲ್ಲ. ಒಂದು ವೇಳೆ ಆಕಸ್ಮಿಕವಾಗಿ ಮಳೆಯಲ್ಲಿ ನೆನೆದರೂ ಮನೆಗೆ ಬಂದ ತಕ್ಷಣ ತಲೆಸ್ನಾನ ಮಾಡಿ. ಹಾಗೆಯೇ ತಲೆ ಒರೆಸಿಕೊಳ್ಳುವುದು ಒಳ್ಳೆಯ
ದಲ್ಲ. ಮಳೆನೀರಿನಲ್ಲಿನ ರಾಸಾಯನಿಕ ಹಾಗೂ ಮಾಲಿನ್ಯಗಳಿಂದ ಕೂದಲಿಗೆ ಹಾನಿಯಾಗುತ್ತದೆ. ಅಲ್ಲದೇ ಇವು ಕೂದಲಿನ ಫಾಲಿಕಲ್ಸ್‌ಗಳನ್ನು ಮುಚ್ಚಿ ಹಾಕುತ್ತವೆ. ಇದರಿಂದ ಕೂದಲು ಕಾಂತಿ ಕಳೆದುಕೊಳ್ಳಬಹುದು. ಮಳೆಗಾಲ
ದಲ್ಲಿ ಉಂಟಾಗುವ ಅಲರ್ಜಿ, ತುರಿಕೆಗೂ ಇದು ಕಾರಣವಾಗಬಹುದು.

ಸೌಮ್ಯ ಶಾಂಪೂ ಬಳಸಿ

ಮಳೆಗಾಲದಲ್ಲಿ ಅತಿ ರಾಸಾಯನಿಕ ಬಳಸಿರುವ ಶಾಂಪೂ ಬಳಕೆಯಿಂದ ಕೂದಲಿಗೆ ಹಾನಿಯಾಗಬಹುದು. ಆ ಕಾರಣಕ್ಕೆ ಸೌಮ್ಯವಾದ ಶಾಂಪೂ ಬಳಸಿ. ಇದುತುರಿಕೆ ಕಡಿಮೆ ಮಾಡುವುದಲ್ಲದೇ ನೆತ್ತಿಯ ಚರ್ಮದ ಮೇಲೆ ಕಾಣಿಸಿಕೊಳ್ಳುವ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ತೇವಾಂಶವನ್ನು ನಿಯಂತ್ರಿಸುವ ಹಾಗೂ ತಲೆಹೊಟ್ಟು ನಿವಾರಿಸುವ ಶಾಂಪೂ ಬಳಕೆ ಮಳೆಗಾಲದಲ್ಲಿ ಉತ್ತಮ.

ಲೋಳೆಸರದ ಜೆಲ್‌

ತಲೆ ಬುರುಡೆ ತುರಿಕೆಯಿದ್ದರೆ ಲೋಳೆಸರದ ಜೆಲ್‌ ಹಾಕಿ ಚೆನ್ನಾಗಿ ಉಜ್ಜಿ. ಒಂದು ತಾಸು ಬಿಟ್ಟು ತಲೆ ತೊಳೆಯಿರಿ. ಇದು ಹೊಟ್ಟನ್ನು ಕೂಡ ನಿವಾರಿಸುತ್ತದೆ. ಲೋಳೆಸರದ ಅಂಶವಿರುವ ಶಾಂಪೂ ಕೂಡ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.