
ಫಿಸ್ಟುಲಾ ಬರಲು ಕಾರಣವೇನು? ಪರಿಹಾರಕ್ಕೆ ಆಹಾರ, ವ್ಯಾಯಾಮಗಳ ಬಗ್ಗೆ ತಿಳಿಯಿರಿ
ಹೊಸ ಯುಗದ ಅತ್ಯಂತ ದಾರುಣ ಮತ್ತು ಕ್ಲಿಷ್ಟತಮ ಕಾಯಿಲೆ ಇದು. ಈ ವ್ಯಾಧಿಯ ಪ್ರಥಮ ಉಲ್ಲೇಖವಿದೆ ವಿಶ್ವದ ಮೊದಲ ಶಸ್ತç ವೈದ್ಯ ಸುಶ್ರುತನ ಗ್ರಂಥದಲ್ಲಿ. ಹಾಗಾದರೆ ಅಂದೂ ಸಹ ಇಂತಹದೇ ಪ್ರಸಂಗ ಅಥವಾ ಜೀವನ ಶೈಲಿಯ ಸಂದರ್ಭಗಳಿದ್ದವೇ ಎಂಬ ಗುಮಾನಿ ಸಹಜ. ಸದಾ ಕಾಲ ಶ್ರಮ ರಹಿತ ಮತ್ತು ಕುಳಿತು ಕೆಲಸ ಮಾಡುವವರಿಗೆ ಬರುವ ಸಾಧ್ಯತೆ ಬಹಳ. ಅಂದು ಮಹಾರಾಜರ ಸಂಗಡ ಸದಾ ಕಾಲ ಕುಳಿತು ಸಮಾಲೋಚನೆ ಮಾಡುತ್ತಿದ್ದವರಿಗೆ, ರಾಜ ಮಹಾರಾಜರೂ ಸೇರಿದಂತೆ ಈ ಕಾಯಿಲೆ ಬರುತ್ತಿದ್ದ ವಿದ್ಯಮಾನದ ಉಲ್ಲೇಖವಿದೆ. ಚರಕ ಸುಶ್ರುತ ಸಂಹಿತೆಗಳಲ್ಲಿ. ಏನಿದು? ಯಾವ ಕಾರಣಗಳಿಂದ ಸಂಭವಿಸುತ್ತದೆ. ತಡೆ ಮತ್ತು ಪರಿಹಾರ ತಿಳಿಯಿರಿ.
-----
ಮಾಲಿನಿಯ ವಯಸ್ಸು ಕೇವಲ ಇಪ್ಪತ್ತೆöÊದು. ಪ್ರತಿಷ್ಠಿತ ವೈದ್ಯರ ಕುಟುಂಬದ ಹುಡುಗಿ. ಕೊಂಚ ಸ್ಥೂಲ ಕಾಯ. ಅಪ್ಪನಿಂದ ದೂರವಾಣಿ ಕರೆ ಬಂತು. ಅರ್ಜೆಂಟ್ ಎಂದು ದುಂಬಾಲು ಬಿದ್ದರು. ಆಕೆಗಿದ್ದ ದೊಡ್ಡ ತೊಂದರೆ ಪದೇ ಪದೇ ಕುರಗಳು ಏಳುವುದು. ತೊಡೆ, ಪರ್ರೆ, ಜಘನ, ಕೆಳ ಹೊಟ್ಟೆಯಲ್ಲಿ ಕುರ ಉದ್ಭವ. ಅನಂತರ ಕೀವುಗಟ್ಟಿ ನೆತ್ತರು ಮತ್ತು ಕೀವು ಸ್ರಾವ. ಅಸಾಧ್ಯ ಬಾವು ಮತ್ತು ನೋವು. ಕೇವಲ ಒಂದು ಬಾರಿ ನೋಡಿದ ತಕ್ಷಣ ತಿಳಿಯಿತು. ಈ ಕುರಗಳು ಗುದ ಭಾಗದಿಂದ ತುಂಬ ದೂರದಲ್ಲಿ ಉಂಟಾಗುತ್ತಿವೆ.
ಹಾಗಾಗಿ ಕೊಂಚ ನಿರಾಳತೆ. ವೈದ್ಯರೇ ಆಗಿದ್ದ ಮಾಲಿನಿಯ ಪಿತರಿಗೆ ತಿಳಿಸಿ ಹೇಳಿದೆ. ಆಕೆಯ ಐ.ಟಿ. ಕೆಲಸದ ಪಾಳಿಯಲ್ಲಿ ಪ್ರತಿ ಅರೆ ತಾಸಿಗೊಮ್ಮೆ ಕನಿಷ್ಟ ಹತ್ತು ನಿಮಿಷದ ವಿಶ್ರಾಂತಿ. ನಡಿಗೆ, ಮಹಡಿ ಏರಿಳಿಯುವ ಕಸರತ್ತು. ಕೊಂಚವಾದರೂ ಬೆವರಿಳಿಯುವ ವ್ಯಾಯಾಮ. ಕಹಿ ಮದ್ದು ಕುಡಿಸಿದೆ. ಆಕೆಯ ಪದೇ ಪದೇ ಕುರ ಮೂಡುವ ಸನ್ನಿವೇಶಕ್ಕೆ ಪೂರ್ಣ ವಿರಾಮ ಬಿತ್ತು. ಹತ್ತು ವರ್ಷದ ಹಳೆಯ ಕತೆ ಇದು. ಈಗಲೂ ಸಂಪರ್ಕದಲ್ಲಿರುವರು. ಅಂತಹದೇ ಕೊಂಚ ಭಿನ್ನ ಸನ್ನಿವೇಶದ ಕುರು ರೂಪದ ಕಾಯಿಲೆ. ಅನಂತರ ಮಾರ್ಪಡುವ ವಿಧಾನ ಮಾತ್ರ ವಿಚಿತ್ರ. ಛಿಧ್ರಗಳುಂಟಾಗುವ ಕೊಂಚ ಕಷ್ಟ ಸಾಧ್ಯ ಕಾಯಿಲೆ.
ಗುದ ಎಂದರೆ ಮಲ ಪ್ರವೃತ್ತಿಯ ಹೊರ ಮುಖದ ದ್ವಾರ.
ಭಗ ಎಂದರೆ ಮೂತ್ರ ಮಾರ್ಗದ ಪೀಠ. ಹೊಕ್ಕುಳಿನ ಕೆಳಬದಿಯ ಸಮತಟ್ಟು ಪ್ರದೇಶ. ನಿತಂಬ ಎಂದರೆ ಗುದ ಪ್ರದೇಶದ ಸುತ್ತಣ ಎರಡಂಗುಲ ಪ್ರದೇಶ. ಇಲ್ಲಿ ಮೊದಲಿಗೆ ಕಾಣುವುದು ಕುರದ ಹಾಗೆ ಒಂದು ಗುಳ್ಳೆ. ಅನಂತರ ಅದು ಕೊಳವೆಯಾಕಾರದಲ್ಲಿ ಒಳಗಿನ ಅವಯವಗಳ ಜತೆಗೆ ಜೋಡಿಸಿಕೊಳ್ಳುವ ಮತ್ತು ಗುಣವಾಗದ ಗಾಯ. ಅತ್ಯಂತ ವೇದನೆ, ಮೊದ ಮೊದಲು ಕೇವಲ ರಕ್ತ ಸ್ರಾವ. ಅನಂತರ ಕೀವುಭರಿತ ರಕ್ತ ಸ್ರಾವ. ಗುಣವಾಗದಂತಹ ಗುದ ಭಾಗದ ಮೂಲವ್ಯಾಧಿಯ ಮುಂದಿನ ಹಂತವೇ ಭಗಂದರಾ(ಫಿಸ್ಟುಲಾ). ಇದು ಯೋನಿಯ ಹೊರ ಮಾರ್ಗದಲ್ಲಿ ಅಕ್ಕ ಪಕ್ಕ ಕೂಡ ಉಂಟಾದೀತು. ಗುದದ ಸುತ್ತಲಿನ ನಾಕು ಬೆರಳಿನ ಅಂತರದ ವರ್ತುಲದ ಗುದ ಪೀಠ(ಸೀಟ್) ಭಾಗದಲ್ಲಿ ಕಾಣಿಸೀತು. ಮೂತ್ರ ಚೀಲ-ಬಸ್ತಿ(ಬ್ಲಾಡರ್) ಸಹ ಈ ಕಾಯಿಲೆ ಉಂಟಾಗುವ ಸ್ಥಳ.
ಚರಕರ ಒಂದು ಶ್ಲೋಕದಲ್ಲಿ ಹೇಳುವಂತೆ ಇದು ಶಸ್ತçಚಿಕಿತ್ಸೆಯ ಸಂದರ್ಭ. ಆಗ ಅವರು ಸಮಕಾಲೀನ ಸುಶ್ರುತರ ಸ್ಮರಣೆ ಉಲ್ಲೇಖಿಸಿದ್ದು ನಿಜ. ಆದರೆ ಸುಶ್ರುತರು ಗುದ, ಯೋನಿ ಮತ್ತು ಬಸ್ತಿಯಂತಹ ನಾಜೂಕಿನ ಅಂಗ(ಮರ್ಮ)ದಲ್ಲಿ ಪದೇ ಪದೇ ಶಸ್ತç ಕ್ರಿಯೆ ಬೇಡ ಎಂಬ ಎಚ್ಚರಿಕೆ ಮಾತು ನೀಡಿದ್ದು ಮರೆಯಲಾಗದು. ಬನಾರಸ್ ವಿಶ್ವವಿದ್ಯಾಲಯದ ಆಯುರ್ವೇದ ವಿಭಾಗದ ವೈದ್ಯ ಪಿ.ಜೆ.ದೇಶಪಾಂಡೆ ಎಂಬ ನಿಪುಣರು ಹೊಸ ಪ್ರಯೋಗ ವಿಶ್ವಕ್ಕೆ ಪರಿಚಯಿಸಿದ್ದು ಇದೀಗ ಇತಿಹಾಸ. ಕ್ಷಾರಸೂತ್ರ ಎಂಬ ವಿಧಾನದ ಮೂಲಕ ಕೊಳವೆ ಹುಣ್ಣಿಗೆ ಪರಿಹಾರ ನೀಡುವ ದೇಶಪಾಂಡೆ ವಿಧಾನವನ್ನು ಆಧುನಿಕ ಶಸ್ತçವೈದ್ಯರೂ ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದು ಭಾರತೀಯ ವೈದ್ಯ ಪದ್ಧತಿಗೆ ದೊರಕಿದ ಮನ್ನಣೆ.
ಅಕ್ಕಿ, ರಾಗಿ ಸೋಸುವ ಜರಡಿ ಗೊತ್ತಲ್ಲ. ಅಂತಹ ಜರಡಿಯಂತಹ ಸಾಲು ಸಾಲು ಹುಣ್ಣು, ರಂಧ್ರ ಗುದದ ಸುತ್ತ ಆಗುವ ಸಂಗತಿ ಊಹಿಸಿಕೊಳ್ಳಿರಿ. ಅದರಿಂದ ಸದಾ ಕಾಲ ಸ್ರಾವ, ಇನ್ನೂ ಹೆಚ್ಚು ತೀವ್ರ ರೋಗಿಗಳಲ್ಲಿ ಮಲವೇ ಹೊರ ಬರುವ ಸಂಗತಿ ನಿಜಕ್ಕೂ ಅಸಹನೀಯ. ಅಂತಹ ಸಂದರ್ಭಕ್ಕೆ ಶತಪೋನಕ ಭಗಂದರಾ ಎಂಬ ಹೆಸರು(ನೂರು ರಂಧ್ರ) ಮೂಲವ್ಯಾಧಿಯ ಮುಂದಿನ ಹಂತ ಭಗಂದರಾ ಎಂಬುದು ಶತಸಿದ್ಧ.
ಹಾಗಾಗಿ ಕುಳಿತು ಕೆಲಸ ಮಾಡುವ ಎಲ್ಲ ಮಂದಿಗೆ ಅನ್ವಯವಾಗು ಮೊದಲ ಸೂತ್ರ ತಾಸಿಗೊಮ್ಮೆ ವಿರಾಮದ ಹತ್ತು ನಿಮಿಷದ ನಡಿಗೆ. ಮಲಮೂತ್ರದ ವೇಗ ಯಾವ ಕಾರಣಕ್ಕೂ ತಡೆಯದ ಜೀವನ ಶೈಲಿ. ಮಲಬದ್ಧತೆ ಖಂಡಿತ ಇರಲೇ ಬಾರದು. ದರ್ಜಿ, ವಾಹನ ಚಾಲಕರು, ಅತಿಯಾದ ಜಿಮ್ ಮಾಡುವ ಮತ್ತು ಐಟಿ ಕಾಯಕದ ಹೊಸ ಪೀಳಿಗೆ ನೆನಪಿಡಿ. ಈ ಬಗೆಯ ರೋಗ ವರ್ತುಲಕ್ಕೆ ಸಿಲುಕದಿರಿ. ಈ ಬಗೆಯ ಯುವ ಜನಾಂಗವೇ ಇರಲಿ, ಶ್ರಮಿಕವರ್ಗದವರಾಗಲಿ.
ತಮ್ಮ ಗುದಭಾಗದ ಆರೋಗ್ಯ ಪಾಲನೆಯತ್ತ ಎಚ್ಚರದ ನಡಿಗೆ ಇರಿಸುವುದು ಸದಾಕಾಲದ ಅಗತ್ಯ ಕ್ರಮ. ಗುಟಕಾ, ತಂಬಾಕು, ಮದ್ಯ, ಧೂಮಪಾನ, ಇರುಳಿನ ಪಾಳಿಯ ನಿದ್ದೆಗೇಡು, ಕಾಫಿ, ಚಹದಂತಹ ಉತ್ತೇಜಕ ಪೇಯಗಳ ಪದೇ ಪದೇ ಸೇವನೆ, ಅತಿ ಖಾರ, ಕರಿದ ತಿಂಡಿ, ಅನುದಿನವೂ ನಾರಿನಂಶ ರಹಿತ ಮಾಂಸಾಹಾರಕ್ಕಿರಲಿ ಕಡಿವಾಣ.
ಮೊಸರಿಗಿಂತ ಮಜ್ಜಿಗೆ ಹೆಚ್ಚು ಸೂಕ್ತ. ಬೇಳೆಗಿಂತ ತೆಂಗಿನ ಕಾಯಿ ಬಳಕೆಗೆ ಹೆಚ್ಚು ಒತ್ತು ಕೊಡಿರಿ. ಮೂಲಂಗಿ, ಈರುಳ್ಳಿ, ಸೊಪ್ಪು ತರಕಾರಿಗಳಿಂದ ಹೆಚ್ಚು ಉಪಕಾರ. ನುಗ್ಗೆ ಎಲೆ, ಸುವರ್ಣಗಡ್ಡೆಯಂತಹ ವಸ್ತುಗಳು ಉಪಕಾರಿ ಆಹಾರ. ಮಲ ಶೋಧನೆಗೆ ಅಳಲೆ ಕಾಯಿಯ ಸಾರ್ವತ್ರಿಕ ಬಳಕೆಗೆ ಇದೆ ಮನ್ನಣೆ. ಭಯ ಬೇಡ. ಬಂದ ಮೇಲೆ ಅನುಭವಿಸುದಕ್ಕಿಂತ ಭಗಂದರ ತಡೆ ಉತ್ತಮ ಮಾರ್ಗ. ಹಸಿದು ಹಸಿದಿರ ಬೇಡ, ಹಸಿಯದಿರೆ ಉಣಬೇಡ, ಬಿಸಿ ಬೇಡ, ತಂಗೂಳನುಣಬೇಡ ವೈದ್ಯನಾ ಬೇಸನವೆ ಬೇಡ ಸರ್ವಜ್ಞ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.