ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಆರೋಗ್ಯ ರಕ್ಷಣೆ ಹಾಗೂ ಆರೈಕೆ ಕುರಿತು ರಾಜ್ಯದ 180 ವೈದ್ಯರಿಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಿಂಗಪುರ ಇಂಟರ್ನ್ಯಾಷನಲ್ ಫೌಂಡೇಶನ್(ಎಸ್ಐಎಫ್) ವತಿಯಿಂದ ತರಬೇತಿ ನೀಡಲಾಗಿದೆ.
ರಾಜ್ಯದ ಬೆಂಗಳೂರು, ಬೆಳಗಾವಿ, ಮೈಸೂರು ಮತ್ತು ಶಿವಮೊಗ್ಗ ಸೇರಿದಂತೆ 26 ಜಿಲ್ಲೆಗಳ ವೈದ್ಯರಿಗೆ ಎಸ್ಐಎಫ್ ತರಬೇತಿ ನೀಡಲಾಗಿದೆ. ಪ್ರಸವ ಮರಣ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣವನ್ನು ಇಳಿಸುವ ನಿಟ್ಟಿನಲ್ಲಿ ಈ ತರಬೇತಿ ನೀಡಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಈ ಕಾರ್ಯಕ್ರಮದಡಿ 26 ಜಿಲ್ಲೆಗಳ ಒಂದು ಲಕ್ಷಕ್ಕೂ ಅಧಿಕ ಗರ್ಭಿಣಿಯರು ಮತ್ತು ನವಜಾತ ಶಿಶುಗಳು ಗುಣಮಟ್ಟದ ಆರೋಗ್ಯ ಸೇವೆಗಳ ಪ್ರಯೋಜನ ಪಡೆದಿದ್ದಾರೆ. ಈ ಯೋಜನೆಯ ಸಮಾರೋಪ ಸಮಾರಂಭ ನ.2 ಶನಿವಾರ ಬೆಂಗಳೂರಿನ ಲಲಿತ್ ಅಶೋಕ್ ಹೊಟೇಲ್ನಲ್ಲಿ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ವಹಿಸಲಿದ್ದಾರೆ. ಸಿಂಗಪುರ ಆರೋಗ್ಯ ಇಲಾಖೆಯ ಎಸ್ಐಎಫ್ನ ತಂಡದ ನಾಯಕ ಮತ್ತು ಹಿರಿಯ ಸಲಹೆಗಾರ ಪ್ರೊ.ಟ್ಯಾನ್ ಹಾಕ್ ಕೂನ್ ಪಾಲ್ಗೊಳ್ಳಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.