ಬೆಂಗಳೂರು: ಮೂವತ್ತು-ನಲವತ್ತು ವಯಸ್ಸಿಗೆ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ವಿಶ್ವ ಹೃದಯ ದಿನದ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಆರೋಗ್ಯ ಶೈಲಿಯ ಬಗ್ಗೆ ಅನೇಕರು ಅರಿವಿನ ಕಿವಿಮಾತು ಹೇಳಿದ್ದಾರೆ.
ಇತೀಚೆಗಷ್ಟೇ ಬಿಗ್ ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನದ ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಚಿಕ್ಕ ವಯಸ್ಸಿಗೆ ಹೃದಯದ ತೊಂದರೆಯಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ಕುರಿತು ಸಾಮಾಜಿಕ ಜಾಲತಾಣ ಕೂ ವಿನಲ್ಲಿ ಸಾಮಾನ್ಯ ಜನರು, ಫಿಟ್ನೆಸ್ ತಜ್ಞರು, ವೈದ್ಯರು ತಮ್ಮ ಅರಿವಿನ ಮಾತುಗಳನ್ನು #ಇದುಹೃದಯಗಳವಿಷಯ ಹಾಗು #ವಿಶ್ವಹೃದಯದಿನ ಹ್ಯಾಷ್ ಟ್ಯಾಗ್ ಅಡಿ ಹಂಚಿಕೊಂಡಿದ್ದಾರೆ.
'ಭಾರತ ಹೃದ್ರೋಗದ ರಾಜಧಾನಿ!
ಇದು ತೀರಾ ಗಂಭೀರ ವಿಷಯ,ಕಳೆದೈದು ವರ್ಷದಲ್ಲಿ 54% ಹೆಚ್ಚು ಹೃದಯಾಘಾತದ ಸಾವುಗಳಾಗಿವೆ,ಚಿಕಿತ್ಸೆಯೂ ಸುಲಭವೇ,ನಾವು ಗೋಜಲು ಮಾಡುತ್ತಿದ್ದೇವೆ! ಒತ್ತಡ ,ಉದ್ವೇಗ ಮತ್ತು ಅಧಿಕ ದೇಹತೂಕ ಬೇಡ. ”ಹಿತ ಮಿತ”ವಾಗಿ ಎಲ್ಲಾ ತರಹದ ಊಟವಿರಲಿ! ಹೆಚ್ಚು ಬೇಕರಿ,ಎಣ್ಣೆ ಮತ್ತು ಫ್ರಿಡ್ಜ್ ತಿನಿಸು ಬೇಡ. ವಾರಕ್ಕೆ ನಾಲ್ಕೈದು ದಿನ ವ್ಯಾಯಾಮ/ನಡುಗೆ. ಉತ್ತಮ ನಿದ್ರೆ,ಆದರೆ ಆಟ' ಎಂದು ಮಂಜುನಾಥ್ ಎನ್ನುವವರು ಕೂ ಮಾಡಿದ್ದಾರೆ.
'ಹೃದಯದ ಆರೋಗ್ಯಕ್ಕೆ ನಿತ್ಯ ನೀವು ಸೇವಿಸುವ ಆಹಾರದ ಪ್ರಭಾವ ಹೆಚ್ಚು. ಬಾದಾಮಿ ಹೃದಯ ರಕ್ಷಕ ಆಹಾರ. ಆದರೆ ಕೇವಲ ಬಾದಾಮಿ ಮಾತ್ರವಲ್ಲ. ಇನ್ನೂ ಹಲವು ಆಹಾರಕ್ಕೆ ಆರೋಗ್ಯವನ್ನು ಕಾಪಾಡುವ ಶಕ್ತಿ ಇದೆ. ಕೆಲವು ಹೃದಯ ರೋಗ ಬಾರದಂತೆ ತಡೆದರೆ ಇನ್ನೂ ಹಲವು ಅಪಾಯದ ಹಂತ ತಲುಪುವುದನ್ನು ತಡೆಯುತ್ತವೆ. ಬಟರ್ಫ್ರೂಟ್ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ' ಎಂದು ಅಜಯ್ ಹೇಳಿದ್ದಾರೆ.
ನಿಮ್ಮ ದೇಹ ಸದೃಢವಾಗಿರಲು ದಿನದಲ್ಲಿ ಕೇವಲ ಒಂದು ಗಂಟೆ ವ್ಯಾಯಾಮ ಮಾಡಲು ವಿನಿಯೋಗಿಸಿ ಯೋಗ ಅಥವ ವ್ಯಾಯಾಮ ಮಾಡುವುದರಿಂದ ಹೃದಯದ ಆರೋಗ್ಯದ ಜತೆಗೆ ಸದೃಢ ದೇಹ ನಿಮ್ಮದಾಗಿಸಿಕೊಳ್ಳಬಹುದು ಎಂದು ಹರೀಶ್ ಕುಮಾರ್ ಎಂಬುವರು ಟ್ವೀಟ್ ಮಾಡಿದ್ದಾರೆ.
ವಿಶ್ವ ಹೃದಯ ದಿನವನ್ನು ಪ್ರತೀ ವರ್ಷ ಸೆಪ್ಟೆಂಬರ್ 29ರಂದು ಆಚರಿಸಲಾಗುತ್ತದೆ, ಹೃದಯರಕ್ತನಾಳದ ಕಾಯಿಲೆಗಳ ಜಾಗೃತಿಯನ್ನು ಮೂಡಿಸುವ ಮತ್ತು ಅವುಗಳ ಜಾಗತಿಕ ಪ್ರಭಾವವನ್ನು ತಗ್ಗಿಸಿ ನಿಯಂತ್ರಿಸುವ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೃದಯದ ಆರೋಗ್ಯದ ಕುರಿತು ಜಾಗೃತಿ ಮೂಡಿಸುತ್ತಿದೆ ಎಂದು ಗೋವಿಂದ ಕಾರಜೋಳ ಟ್ವೀಟ್ ಮಾಡಿದ್ದಾರೆ.
ಹೃದಯದ ಆರೋಗ್ಯವನ್ನು ಕಾಪಾಡಲು ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳೋಣ, ಹೃದ್ರೋಗದ ಅಪಾಯ ತರುವ ದುಶ್ಚಟಗಳಿಂದ ದೂರ ಉಳಿಯುವ ಸಂಕಲ್ಪ ಮಾಡೋಣ ಎಂದು ಆರೋಗ್ಯ ಸಚಿವ ಸುಧಾಕರ್ ಕೂ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.