ADVERTISEMENT

`ಚೌಡೇಶ್ವರಿ' ಉತ್ಸವ

ಹಿ.ಕೃ.ಚಂದ್ರು
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆಯ ಗ್ರಾಮ ದೇವತೆಯಾದ ಚೌಡೇಶ್ವರಿ ದೇವಿಯ ಹಬ್ಬವು ಇದೇ 12ರಿಂದ 16ರವರೆಗೆ ನಡೆಯಲಿದೆ. 12ರಂದು ಹೆಬ್ಬಾರಮ್ಮ ದೇವಸ್ಥಾನದ ಮುಂದೆ ಚಪ್ಪರ ಹಾಕುವ ಮೂಲಕ ಉತ್ಸವಕ್ಕೆ ಚಾಲನೆ. ಏಪ್ರಿಲ್ 16ರ ರಾತ್ರಿ ಊರ ಮುಂದೆ ಇರುವ ಉಯ್ಯಾಲೆ ಕಂಬಕ್ಕೆ ಬಾಳೆ ಕಂಬಗಳನ್ನು ತಂದು ಕಟ್ಟುವುದು ಉತ್ಸವದ ವಿಶೇಷತೆ.

ಚೌಡೇಶ್ವರಿ ಮತ್ತು ಹೆಬ್ಬಾರಮ್ಮ ದೇವತೆಗಳ ಮೆರವಣಿಗೆ ಮಾಡುವ ಪ್ರಮುಖ ಬೀದಿಯಲ್ಲಿ ಪಾದರಕ್ಷೆ ಹಾಕುವುದು ನಿಷೇಧ! ದೇವರ ಮನೆತನದವರು ಮನೆಗಳಲ್ಲಿ ಮಾಂಸಾಹಾರ, ರೊಟ್ಟಿ ಮತ್ತು ಕಂಟು ಪದಾರ್ಥಗಳನ್ನು ಮಾಡುವಂತಿಲ್ಲ. ಈ ದೇವರುಗಳ ತವರು ಮನೆಯಾದ ಹೊನ್ನೇನಹಳ್ಳಿಯಲ್ಲಿಯೂ ಈ ನಿಯಮ ಪಾಲನೆಯಿದೆ.

ಪ್ರತಿ ದಿವಸ ರಾತ್ರಿ ಒಂದೊಂದು ಮನೆತನದವರು ಚೌಡೇಶ್ವರಿಯ ಮೆರವಣಿಗೆ ಮತ್ತು ವಿಶೇಷ ಪೂಜೆ ಮಾಡಿಸುತ್ತಾರೆ. ಪ್ರತಿ ರಾತ್ರಿ ಎರಡೂ ಗ್ರಾಮಗಳಲ್ಲಿ ಜನಪದ ಶೈಲಿಯ ರಂಗದ ಕುಣಿತ ಇರುತ್ತದೆ. ಜಾಗರಣೆ ಪ್ರಯುಕ್ತ ಅಕ್ಕ ಪಕ್ಕದ ಹಳ್ಳಿಗಳ ಗ್ರಾಮಸ್ಥರು ಬಂದು ರಂಗ ಕುಣಿತದಲ್ಲಿ ಭಾಗವಹಿಸುತ್ತಾರೆ.

ಎರಡು ಗ್ರಾಮಗಳಲ್ಲಿಯೂ 20ರ ಶನಿವಾರದಂದು ಹೆಬ್ಬಾರಮ್ಮ ದೇವರ ಹಬ್ಬ ಅಚರಿಸುತ್ತಾರೆ. 23ರ ಮಂಗಳವಾರ ಮಣ್ಣಿನ ಮಡಕೆಯಲ್ಲಿ ಮಡೆ ಮಾಡುತ್ತಾರೆ. ಹೊನ್ನೇನಹಳ್ಳಿ ಗ್ರಾಮದವರು ಹಸಿ ಈಚಲು ಗರಿಯಿಂದ ಮಡೆ ಅನ್ನ ಬೇಯಿಸುವುದು ವಿಶೇಷ. ಅಂದು ರಾತ್ರಿ ಅಲಂಕೃತ ಮಡೆಗಳನ್ನು ಹೊತ್ತು ಭಕ್ತರು, ಹೆಬ್ಬಾರಮ್ಮ ದೇವರ  ಜೊತೆಯಲ್ಲಿ ಮೆರವಣಿಗೆಯಲ್ಲಿ ಸಾಗುತ್ತಾರೆ.

ಹರಕೆ ಹೊತ್ತ ಭಕ್ತರು ಉರುಳು ಸೇವೆ ಮತ್ತು ಬಾಯಿ ಬೀಗದ ಸೇವೆಗಳನ್ನು ಮಾಡುತ್ತಾರೆ. 24ರಂದು ಚೌಡೇಶ್ವರಿ ದೇವರ ಬ್ರಹ್ಮ ರಥೋತ್ಸವ ಮನಸೆಳೆಯಲಿದೆ. 27 ರಂದು ದೇವರುಗಳ ಕಂಕಣ ಬಿಚ್ಚುವ ಮೂಲಕ ಹಬ್ಬಕ್ಕೆ ತೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT