ADVERTISEMENT

ರಂಗಭೂಮಿ ರಾಜನಿಗೊಂದು ಶಿಲ್ಪ

ಗಣೇಶ ಅಮಿನಗಡ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST
ರಂಗಭೂಮಿ ರಾಜನಿಗೊಂದು ಶಿಲ್ಪ
ರಂಗಭೂಮಿ ರಾಜನಿಗೊಂದು ಶಿಲ್ಪ   

ಕಂಪನಿ ನಾಟಕಗಳಲ್ಲಿ ದುಡಿದ ನಂತರ ಕೆಲಸ ಕೊಟ್ಟ ಮಾಲೀಕನನ್ನು ಮರೆಯುವವರೇ ಹೆಚ್ಚು. ಆದರೆ ಕೆಲ ಕಾಲ ಬಣ್ಣ ಹಚ್ಚಿದ್ದನ್ನು ಮರೆಯದೆ ಶಿಲ್ಪ ನಿರ್ಮಿಸುವ ಮೂಲಕ ಸದಾ ಸ್ಮರಿಸುವ ಕಾರ್ಯದ ಜೊತೆಗೆ ಇಂದಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಕೈಗೊಂಡವರು ತಿಪ್ಪಣ್ಣ ಸೊಲಬಕ್ಕನವರ. ಅವರು ಶಿಲ್ಪ ನಿರ್ಮಿಸಿದ್ದು ರಂಗಭೂಮಿ ರಾಜಕುಮಾರ ಎಂದು ಬಿರುದು ಪಡೆದಿದ್ದ ದಿ. ಗುಡಗೇರಿ ಬಸವರಾಜ ಅವರದು. ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ ಗೊಟಗೋಡಿ ಗ್ರಾಮದಲ್ಲಿಯ ಉತ್ಸವ ರಾಕ್ ಗಾರ್ಡನ್‌ನಲ್ಲಿ ಈ ಶಿಲ್ಪ ಇದೆ.

ಗೊಟಗೋಡಿ ಗ್ರಾಮದಲ್ಲಿಯ ತಮ್ಮ ಜಮೀನಿನಲ್ಲಿಯೇ ಉತ್ಸವ ರಾಕ್ ಗಾರ್ಡನ್ ನಿರ್ಮಿಸಿದ ಕಲಾವಿದ ತಿಪ್ಪಣ್ಣ ಸೊಲಬಕ್ಕನವರ ಅವರು ಗುಡಗೇರಿ ಕಂಪನಿ ಋಣ ತೀರಿಸುವ ಸಲುವಾಗಿ ಗೆಳೆಯರಾಗಿದ್ದ ಬಸವರಾಜ ನಿಧನದ ನಂತರ  ಶಿಲ್ಪ ರಚನೆಗಾಗಿ ಮುಂದಾದರು. ಹಾಗೆ ಸುಮ್ಮನೆ ಶಿಲ್ಪವನ್ನು ನಿಲ್ಲಿಸದೆ ಬಂಡಿ ಮೇಲೆ ನಿಲ್ಲಿಸಿದ್ದು ಭಿನ್ನ.
ಅವರು ಈ ಶಿಲ್ಪಕ್ಕೆ ಜರಿ ರುಮಾಲು ತೊಡಿಸಿದ್ದಾರೆ. `ಜರಿ ರುಮಾಲು ಅಪರೂಪ.

ಒಬ್ಬರು ಮದುವೆಗೆಂದು ಖರೀದಿಸಿದರೆ ಇಡೀ ಆಯುಷ್ಯ ಬರುತ್ತಿತ್ತು. ಜಾತ್ರೆ, ಹಬ್ಬ, ಉತ್ಸವದಂಥ ಕಾರ್ಯಕ್ರಮಗಳಲ್ಲಿ ಮಾತ್ರ ಜರಿ ರುಮಾಲು ಸುತ್ತಿಕೊಳ್ಳುತ್ತಾರೆ. ಹೀಗೆಯೇ ಬಸವರಾಜರ ಬದುಕು ಕೂಡಾ ಇತ್ತು. ಬಣ್ಣದ ಬದುಕಿನಲ್ಲಿ ಅವರು ಜರಿ ರುಮಾಲಿನ ಹಾಗೆ. ಸಾದಾ ರುಮಾಲುಗಳ ನಡುವೆ ಜರಿ ರುಮಾಲು ಇರುವ ಹಾಗೆ ಅಸಂಖ್ಯ ಸಾದಾ ಕಲಾವಿದರ ನಡುವೆ ಗುಡಗೇರಿ ಛಾಪು ದೊಡ್ಡದು.
 
ಏಕಕಾಲಕ್ಕೆ 4 ನಾಟಕ ಕಂಪನಿಗಳನ್ನು ನಡೆಸುತ್ತ, ಪಾತ್ರ ಕೂಡಾ ಮಾಡುತ್ತ ಓಡಾಡುತ್ತಿದ್ದ ಅವರ ಬಣ್ಣದ ಬದುಕು ಬೆರಗಿನದು. ರಂಗಭೂಮಿಯಲ್ಲಿ ಅವರಷ್ಟು ಮೆರೆದವರೂ ಇಲ್ಲ, ಕಷ್ಟಪಟ್ಟವರೂ ಇಲ್ಲ. ಬಂಡಿ ಸೇರಿ ಒಟ್ಟು 15 ಅಡಿ ಎತ್ತರ ಇರುವ ಶಿಲ್ಪದ ಸುತ್ತಮುತ್ತ ಇನ್ನೂ ಅನೇಕ ಹೆಸರಾಂತ ರಂಗ ಕಲಾವಿದರ ಶಿಲ್ಪಗಳನ್ನು ನಿರ್ಮಿಸುವೆ~ ಎಂದು ತಿಪ್ಪಣ್ಣ ಮುಂದಿನ ಯೋಜನೆ ಬಿಡಿಸಿಡುತ್ತಾರೆ.     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.