ADVERTISEMENT

ಸಮರ್ಥ ಶ್ರೀ ಮಾರುತಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಭೋಗೇನಾಗರಕೊಪ್ಪ ಗ್ರಾಮದಲ್ಲಿ ಅನುಭಾವಿ ಸಂತ ಶ್ರೀ ಸಮರ್ಥ ರಾಮದಾಸರು ಸ್ವತಃ ಪ್ರತಿಷ್ಠಾಪಿಸಿದ ಶ್ರೀ ಮಾರುತಿ ದೇವಸ್ಥಾನ ಬಹಳ ಕಾರಣಿಕದ ಸ್ಥಳ.

ಛತ್ರಪತಿ ಶಿವಾಜಿಯ ಆಧ್ಯಾತ್ಮಿಕ ಗುರುಗಳಾದ ರಾಮದಾಸರು ಮರಾಠಾ ಸಾಮ್ರಾಜ್ಯ ಇದ್ದ ಕಡೆಯೆಲ್ಲ ಸಂಚರಿಸುತ್ತಿದ್ದರು. ಭೋಗೇನಾಗರಕೊಪ್ಪದಲ್ಲಿ ಶಿವಾಜಿ ಅವರಿಂದ ಐದು ಹಳ್ಳಿ ಇನಾಂ ಪಡೆದು ಆಡಳಿತ ನಡೆಸುತ್ತಿದ್ದ ದೇಸಾಯಿಯವರೊಬ್ಬರಿದ್ದರು. ಅಲ್ಲಿಗೆ ಬಂದಾಗ ಅವರ ವಾಡೆಗೆ ಭೇಟಿ ನೀಡಿದರು. ಗ್ರಾಮದ ಹೊಂಡದ ಕೋಡಿಯ ಮೇಲೆ ಮಾರುತಿ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಗುರುಗಳು ಭೇಟಿ ನೀಡಿದ್ದರಿಂದ `ಮುನಿರಾಮನ ಕೊಪ್ಪ~ ಎಂಬ ಹೆಸರಿನ ಈ ಊರು ಕ್ರಮೇಣ ಭಾಗ್ಯನಗರ ಕೊಪ್ಪ, ಭೋಗೇನಾಗರಕೊಪ್ಪ ಎಂದಾಯಿತು.

ರಾಮದಾಸರ ಉದ್ದೇಶ ಜನರಲ್ಲಿ ಭಕ್ತಿ - ಭಾವ ಬೆಳೆಸುವುದಷ್ಟೆ ಅಲ್ಲದೆ, ಧರ್ಮ ಸಾಮ್ರಾಜ್ಯಕ್ಕಾಗಿ, ರಕ್ಷಣೆಗಾಗಿ ದೇಹದಾರ್ಢ್ಯ ಹೊಂದಿದ ಯುವಪಡೆಯನ್ನು ಹುರಿದುಂಬಿಸುವುದು ಕೂಡ ಆಗಿತ್ತು. ಅದಕ್ಕಾಗಿ ಅವರು ಯುವಕರಿಗಾಗಿ ದೇಶದ ಮೂಲೆ ಮೂಲೆಗಳಲ್ಲೂ 1200 ಗರಡಿ ಮನೆ ಮತ್ತು ಅದರ ಪಕ್ಕದಲ್ಲೇ ಗೋಡೆಗೆ ಹೊಂದಿಕೊಂಡು ಮಾರುತಿ ದೇಗುಲ ಸ್ಥಾಪಿಸಿದ್ದರು. ಅದರಲ್ಲಿ ಭೋಗೇನಾಗರಕೊಪ್ಪವೂ ಒಂದು.

ಕಾಲಕ್ರಮೇಣ ಇದರ ಮಹತ್ವ ಬ್ರಿಟಿಷರಿಗೂ ಅರಿವಾಯಿತು. ಧಾರವಾಡದ ಬ್ರಿಟಿಷ್ ಕಲೆಕ್ಟರ್ ಆಗಿದ್ದ ಎಂ. ಸಿ. ಗಿಬ್ ದೇವಸ್ಥಾನದ ಪೂಜಾ - ಪುನಸ್ಕಾರ ನಿರ್ವಹಣೆಗೆ ವಾರ್ಷಿಕ 2 ರೂಪಾಯಿ ತಸ್ತೀಕ ಮಂಜೂರು ಮಾಡಿದ್ದರು.

ಭೋಗೇನಾಗರಕೊಪ್ಪಕ್ಕೆ `ಪ್ರಸಿದ್ಧ ಪೈಲ್ವಾನರ ಊರು~ ಎಂಬ ಖ್ಯಾತಿಯೂ ಇದೆ. ದೇವಸ್ಥಾನದ ಜೀರ್ಣೋದ್ಧಾರ ನಡೆಯುತ್ತ್ದ್ದಿದು ಮೇಲ್ಛಾವಣಿ ಹಂತದವರೆಗೆ ಬಂದಿದೆ. ದಾನಿಗಳ ನಿರೀಕ್ಷೆಯಲ್ಲಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.