ADVERTISEMENT

ಭುವನದ ಭಾಗ್ಯ ‘ಹೈಗುಂದ’

ಪ್ರಭಾಕರ ಹೆಗಡೆ.ಚಿತ್ರಗಳು: ಡಾ.ಬಿ.ಎಲ್‌.ಸೌಜನ್ಯ
Published 11 ಜನವರಿ 2014, 19:30 IST
Last Updated 11 ಜನವರಿ 2014, 19:30 IST

ತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಹರಿಯುವ ಶರಾವತಿ ನದಿ ಸೃಷ್ಟಿಸಿರುವ ಏಳು ದ್ವೀಪಗಳಲ್ಲಿ ಹೈಗುಂದ ಒಂದು. ಎರಡು ಸಾವಿರ ವರ್ಷಗಳಷ್ಟು ಪ್ರಾಚೀನ ಮೂರ್ತಿ ಶಿಲ್ಪಗಳು, ಅತ್ಯಂತ ಪ್ರಾಚೀನ ಇಟ್ಟಿಗೆಗಳು, ವಿಶಿಷ್ಟ ಬಣ್ಣ ಮತ್ತು ಸ್ವಾದಗಳಿರುವ ಬೆಲ್ಲ, ಸಹ್ಯಾದ್ರಿಯ ಬೆಟ್ಟಗುಡ್ಡಗಳ ಪರಿಸರ, ಶರಾವತಿಯ ಸರೋವರದಂಥ ಹರಹಿನ ನೀರು– ಈ ಎಲ್ಲ ಕಾರಣಗಳಿಂದ ‘ಹೈಗುಂದ’ ದ್ವೀಪ ವಿಶಿಷ್ಟವಾಗಿದೆ.

ಕಿರುಗುಡ್ಡದ ತಳದಲ್ಲಿ ವಿಸ್ತರಿಸಿದ ಗದ್ದೆಯಿಂದ ಹುಣ್ಣಿಮೆಯ ನಿತಾಂತ ಬೆಳದಿಂಗಳನ್ನು ಸವಿಯುವುದು ಇಲ್ಲಿ ಭುವನದ ಭಾಗ್ಯವೆಂಬಂಥ ಅನುಭವ. ಕನ್ನಡದ ಪ್ರಥಮ ರಾಜವಂಶವೆಂಬ ಖ್ಯಾತಿಯ ಕದಂಬರ ಪ್ರಥಮ ದೊರೆ ಮಯೂರವರ್ಮ, ತನ್ನ ನಾಡಿನಲ್ಲಿ ಯಜ್ಞ–ಯಾಗಗಳನ್ನು ನೆರವೇರಿಸಲೆಂದು ಉತ್ತರದಿಂದ ಕರೆತಂದು ಹೈಗುಂದದಲ್ಲಿ ನೆಲೆಗೊಳಿಸಿದ ಬ್ರಾಹ್ಮಣರೇ ಕಾಲಾಂತರದಲ್ಲಿ ಹವ್ಯ–ಕವ್ಯಗಳಿಂದಾಗಿ ಹವ್ಯಕರೆನಿಸಿದರೆಂಬುದು ಐತಿಹ್ಯ.

ಅದಕ್ಕೆ ಸಾಕ್ಷಿಯೆಂಬಂತೆ ಇಲ್ಲಿ ಹಲವು ಯಜ್ಞಕುಂಡಗಳ ಕುರುಹುಗಳಿವೆ. ಸಹಸ್ರಾರು ವರ್ಷಗಳ ಹಿಂದಿನ ಇಟ್ಟಿಗೆಗಳಿವೆ! ‘ಹವ್ಯ+ಕುಂಡ’ವೇ ಹೈಗುಂದ! ಹೈಗುಂದದಲ್ಲಿ ಗುಂದಗಳೇ (ದಿಬ್ಬ) ತುಂಬಿವೆ. ಅಲ್ಲೆಲ್ಲ ಸಹಸ್ರಾರು ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತ ಭವ್ಯ ದೇವತಾ ಮೂರ್ತಿಗಳು, ಶಿವಲಿಂಗಗಳು, ಭಗ್ನ ಶಿಲಾವಶೇಷಗಳು ಹರಡಿದಂತಿವೆ. 

ADVERTISEMENT

ಅಚ್ಚರಿಯೆಂಬಂತೆ ಕರ್ನಾಟಕದಲ್ಲಿ ಬುದ್ಧ ಮೂರ್ತಿ ಇರುವ ವಿರಳ ತಾಣಗಳಲ್ಲಿ ಇದೂ ಒಂದು! ಪುರುಷಪ್ರಮಾಣದ ಇಲ್ಲಿನ ವಿಷ್ಣು ಶಿಲ್ಪ ಮತ್ತು ಯಕ್ಷ ಶಿಲ್ಪ (?) ತನ್ನ ಪ್ರಮಾಣ, ಆಕಾರ, ನಿಲುವು, ಭಂಗಿಗಳಿಂದ ಅತ್ಯಂತ ಭವ್ಯವೂ ಆಕರ್ಷಣೀಯವೂ ಆಗಿದೆ. ಹೈಗುಂದದ ಪ್ರಧಾನ ದೇವತೆ ಕದಂಬರಿಂದ ಸ್ಥಾಪಿತ ದುರ್ಗಾಂಬಿಕೆ.

ಆಕೆ ಶಾಸನಗಳಲ್ಲಿ ‘ಗುಂದದಬ್ಬೆ’– ಪೈವಗುಂದದ–ಹೈಗುಂದದ ಅಬ್ಬೆ– ಇಂದಿಗೂ ‘ಅಮ್ಮನೋರು’. ಅಲ್ಲಿಗೆ ಅಂದಿನ ಹವ್ಯಕರಿಂದ, ಹವ್ಯಕುಂಡಗಳಿಂದ ಹೈಗುಂದ ಎಂಬುದೂ ಗಟ್ಟಿ. ಹೈಗುಂದ ಮೊದಲು ದ್ವೀಪವಾಗಿರಲಿಲ್ಲ. ಉತ್ತರ ದಿಕ್ಕಿನ ಅಳ್ಳಂಕಿ ಗ್ರಾಮದೊಂದಿಗೆ ಕೂಡಿಕೊಂಡಿದ್ದ ಭೂಭಾಗವಾಗಿತ್ತು. ಮಯೂರವರ್ಮ ಯಜ್ಞಕಾರ್ಯಗಳಿಗೆ ದ್ವೀಪವಾಗಿ ಪರಿವರ್ತಿಸಿದ ಎಂಬುದು ಐತಿಹ್ಯ.

ಅದಕ್ಕೆ ಪೂರಕವಾಗಿ ಹಿಂದಿನ ಶತಮಾನದ ಉತ್ತರಾರ್ಧದಲ್ಲಿ ಬದುಕಿದ್ದ ಇಲ್ಲಿನ ಹಿರಿಯರು ಆ ಕಾಲದ ಕಾಲುವೆಯ ಆಚಿನ ಅಳ್ಳಂಕಿಯಿಂದ ಹೈಗುಂದದ ಆಲೆಮನೆಗೆ, ತಮ್ಮ ಬಾಲ್ಯದಲ್ಲಿ ಕಬ್ಬನ್ನು ಎಸೆಯುತ್ತಿದ್ದರು ಎಂಬುದಾಗಿ ಹೇಳುತ್ತಿದ್ದದ್ದನ್ನು ಈ ಕಾಲದ ಹಲವು ಹಿರಿಯರು ನೆನಪಿಸುತ್ತಾರೆ.

ಅದೂ ಖರೇ ಇರಬೇಕು! ಏಕೆಂದರೆ ಗಟ್ಟಿಯಲ್ಲದ, ಉಸುಕೇ ಪ್ರಧಾನವೆನಿಸಿದ ಹೈಗುಂದದ ಮಣ್ಣು, ಐವತ್ತರ ದಶಕದಲ್ಲಿ ಇಲ್ಲಿ ಸಂಚರಿಸುತ್ತಿದ್ದ ಮೋಟರ್‌ ಬೋಟಿನಿಂದಾಗಿ (ಲಾಂಚ್‌) ಮತ್ತು ಅದಕ್ಕೂ ಮುನ್ನ ವರ್ಷಂಪ್ರತಿ ಬರುತ್ತಿದ್ದ ನೆರೆಯಿಂದ ಹೊಳೆಗೆ ಕುಸಿಯುತ್ತ– ಹೊಳೆ ಅಗಲವಾಗುತ್ತ ಹೋದುದನ್ನು ಕಂಡವರು ಇದ್ದಾರೆ. ಹಾಗೆಯೇ ಇಲ್ಲಿನ ಹೊಳೆಯಲ್ಲಿ ಅಂದೆಲ್ಲ ಮಣಕ

(ಮೊಸಳೆ)ಗಳೂ ಇದ್ದವೆಂದು ಆ ಕಾಲದ ಹಿರಿಯರು ಹೇಳುತ್ತಿದ್ದರು. ಆದರೆ ಅವು ಈಗಿಲ್ಲ.

ಹೈಗುಂದದ ವೈಶಿಷ್ಟ್ಯಗಳು ಹಲವು. ಇಲ್ಲಿನ ಮಣ್ಣಿನಲ್ಲಿ ಬೆಳೆವ ಕಬ್ಬಿನಿಂದ ತಯಾರಿಸಿದ ಬೆಲ್ಲ, ತನ್ನ ಸ್ವಾದ, ಬಣ್ಣ, ಬಾಳಿಕೆಗಳಿಂದ ಪ್ರಸಿದ್ಧ. ಬ್ರಿಟಿಷರ ಕಾಲದ ಶಾಲಾ ಪಠ್ಯಪುಸ್ತಕಗಳಲ್ಲೂ ಇದರ ಪ್ರಸಿದ್ಧಿಯ ಉಲ್ಲೇಖ ಇದೆ. ಊರಿನ ಎಲ್ಲೆಡೆ ಕಾಣುವ ಸಾವಿರಾರು ವರ್ಷಗಳ ಶಿಲಾಮೂರ್ತಿಗಳು ಗತಕಾಲದ ವೈಭವದ ಕುರುಹಾಗಿವೆ. ೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಡಾ. ಅ. ಸುಂದರ ಅವರು ಅವುಗಳ ಕಾಲ ನಿರ್ಣಯಿಸಿ, ಹೊರಜಗತ್ತಿಗೆ ಪರಿಚಯಿಸಿದ್ದರಿಂದ ಇಂದಿನ ಮಕ್ಕಳ ಶಾಲಾ ಪಠ್ಯಪುಸ್ತಕಗಳಲ್ಲೂ ಅವುಗಳ ಚಿತ್ರಸಹಿತ ಪ್ರಸ್ತಾಪ ಕಾಣಬಹುದು.

ಅಗೆದಲ್ಲೆಲ್ಲ ಯಾವುದಾದರೊಂದು ಅವಶೇಷ ಸಿಗುವ ಈ ನೆಲದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಅಡಗಿದೆ. ಉತ್ಖನನ ಆಗಬೇಕು; ಆಗ ಕರ್ನಾಟಕದ ಇತಿಹಾಸದ ಹಲವು ಕೊಂಡಿಗಳು ಬೆಳಕಿಗೆ ಬರಬಹುದು. ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಗೇರುಸೊಪ್ಪ–ಹೊನ್ನಾವರಗಳಿಂದ ಸಮದೂರದಲ್ಲಿ ಹೈಗುಂದ ದ್ವೀಪವಿದೆ.

ಹೈಗುಂದ ದ್ವೀಪಕ್ಕೆ  ಇಂದೂ ದೋಣಿಯೇ ಸಂಪರ್ಕ ಸೇತು. ೨೦ ಕಿ.ಮೀ. ದೂರದ ಹೊನ್ನಾವರದಲ್ಲಿ ಸುಸಜ್ಜಿತ ವಸತಿಗೃಹಗಳಿವೆ. ಅಲ್ಲಿಂದ ನಾಡದೋಣಿ ಅಥವಾ ಮೋಟಾರ್‌ ಬೋಟುಗಳಿಂದ ನದೀ ಮಾರ್ಗದ ಪ್ರಯಾಣ ಸಂತಸ ತರಬಲ್ಲದು– ಹಗಲಿನಲ್ಲಿ, ಅಂತೆ ಬೆಳದಿಂಗಳಲ್ಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.