ನಟ ಇರ್ಫಾನ್ ಖಾನ್ ಅನಾರೋಗ್ಯ ಬಾಲಿವುಡ್ನಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ ಅವರು ಒಪ್ಪಿಕೊಂಡಿದ್ದ ಸಿನಿಮಾಗಳ ಚಿತ್ರೀಕರಣಗಳೂ ವಿಳಂಬವಾಗುತ್ತಿವೆ. ಭರ್ಜರಿ ಚಿತ್ರಗಳ ನಿರ್ಮಾಪಕ ಎಂದೇ ಗುರುತಿಸಿಕೊಳ್ಳುವ ವಿಶಾಲ್ ಭಾರದ್ವಾಜ್ ಕೂಡಾ ದೀಪಿಕಾ ಮತ್ತು ಇರ್ಫಾನ್ ಜೋಡಿಯ ಹೊಸ ಚಿತ್ರದ ಚಿತ್ರೀಕರಣವನ್ನು ಮುಂದೂಡಿದ್ದಾರೆ.
‘ಇರ್ಫಾನ್ ಒಬ್ಬ ಯೋಧ. ಸಮಸ್ಯೆಗಳ ವಿರುದ್ಧ ಹೋರಾಡಿ ಗೆಲ್ಲುವುದು ಯೋಧನ ಲಕ್ಷಣ. ಇರ್ಫಾನ್ ಕೂಡಾ ತಮ್ಮ ಕಾಯಿಲೆ ಜೊತೆಗಿನ ಹೋರಾಟದಲ್ಲಿ ಗೆದ್ದುಬರುತ್ತಾರೆ. ಅದಕ್ಕಾಗಿ ನಾನು ಕಾಯುತ್ತೇನೆ. ಅವರು ಬಂದ ಮೇಲೆಯೇ ಚಿತ್ರೀಕರಣ ಶುರು ಮಾಡುತ್ತೇನೆ. ಚಿತ್ರದ ನಾಯಕಿ ದೀಪಿಕಾ, ಸಹನಿರ್ಮಾಪಕಿ ಪ್ರೇರಣಾ ಅರೋರಾ ಅವರೊಂದಿಗೆ ನಾನು ಈ ತೀರ್ಮಾನ ಕೈಗೊಂಡಿದ್ದೇನೆ’ ಎಂದು ಭಾರದ್ವಾಜ್ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
ಇರ್ಫಾನ್ ಖಾನ್ ಅವರಿಗೆ ಗಂಭೀರವಾದ ಆರೋಗ್ಯ ಸಮಸ್ಯೆ ಇರುವುದು ತಿಳಿದಾಗಲೇ ವಿಶಾಲ್, ಹೊಸ ಚಿತ್ರದ ಕೆಲಸಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡುತ್ತಿರುವುದಾಗಿ ಪ್ರಕಟಿಸಿದ್ದರು. ಮಾಫಿಯಾ ರಾಣಿ ಸಪ್ನಾ ದೀದಿಯ ಬದುಕನ್ನು ಆಧರಿಸಿದ ಸಿನಿಮಾವಿದು. ಚಿತ್ರದ ಕತೆ ಮತ್ತು ಪ್ರಮುಖ ಪಾತ್ರಗಳ ಪ್ರಕಟಣೆ ಹೊರಬಿದ್ದಾಗಿನಿಂದಲೂ ಸಿನಿಪ್ರೇಮಿಗಳು ಹೊಸ ಚಿತ್ರದ ಸುದ್ದಿಗಾಗಿ ಕಾತರದಿಂದ ಕಾಯುತ್ತಲೇ ಇದ್ದಾರೆ. ಆದರೆ ತಮ್ಮ ನೆಚ್ಚಿನ ನಟನಿಗೆ ಕಾಡುತ್ತಿರುವ ಅಪರೂಪದ ಕಾಯಿಲೆಯ ಸುದ್ದಿಯೂ ಅಭಿಮಾನಿಗಳನ್ನು ಕಂಗೆಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.