ADVERTISEMENT

ಈ ಟಿವಿಯಲ್ಲಿ ಜು.14ರಿಂದ `ಸಂಗೀತ ಸಮ್ಮಾನ್'

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 19:59 IST
Last Updated 9 ಜುಲೈ 2013, 19:59 IST

ಕನ್ನಡ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ನಾಡಿಗೆ ಪರಿಚಯಿಸುವ ಉದ್ದೇಶವುಳ್ಳ `ಸಂಗೀತ ಸಮ್ಮಾನ್ 2013' ಜುಲೈ 14ರಿಂದ ಈ ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸಿನಿಮಾ ಮಾತ್ರವಲ್ಲದೆ ಸಂಗೀತದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿದವರನ್ನೂ ಗುರುತಿಸಲಿದೆ.

`ಹೆಸರಾಂತ ಕೊಳಲು ವಾದಕ, ಸಂಗೀತ ನಿರ್ದೇಶಕ ಪ್ರವೀಣ್ ಗೋಡ್ಖಿಂಡಿ, ಹಿರಿಯ ರಂಗಕರ್ಮಿ ಬಿ. ಜಯಶ್ರೀ, ಸಂಗೀತ ನಿರ್ದೇಶಕ ಹಾಗೂ ಚಿತ್ರ ಸಾಹಿತಿ ಕೆ. ಕಲ್ಯಾಣ್ ತೀರ್ಪುಗಾರರಾಗಿರುತ್ತಾರೆ. ಕಾರ್ಯಕ್ರಮದ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್, ಪ್ರಾದೇಶಿಕ ಹಾಗೂ ಮಕ್ಕಳ ಮನರಂಜನಾ ವಿಭಾಗದ ಕಾರ್ಯಕ್ರಮ ನಿರ್ದೇಶಕ ಸಮೀತ್ ಶರ್ಮಾ ಪಾಲ್ಗೊಳ್ಳಲಿದ್ದಾರೆ.

`ಸಂಗೀತ ಸಮ್ಮಾನ್'ನ ಅಂಗವಾಗಿ ಅತ್ಯುತ್ತಮ ಉದಯೋನ್ಮುಖ ಗಾಯಕ-ಗಾಯಕಿ, ಅತ್ಯುತ್ತಮ ಉದಯೋನ್ಮುಖ ಸಂಗೀತ ನಿರ್ದೇಶಕ, ಅತ್ಯುತ್ತಮ ಚಿತ್ರ ಸಾಹಿತಿ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಗಾಯಕ- ಗಾಯಕಿ, ವರ್ಷದ ಅತ್ಯುತ್ತಮ ಚಿತ್ರಗೀತೆ, ಅತ್ಯುತ್ತಮ ಪ್ರಣಯಗೀತೆ, ಅತ್ಯುತ್ತಮ ನೃತ್ಯ ಗೀತೆ, ವರ್ಷದ ಅತ್ಯುತ್ತಮ ಆಲ್ಬಮ್ ಎಂಬ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಇದಲ್ಲದೆ ಬೆಸ್ಟ್ ಬ್ಯಾಂಡ್, ಕಿರುತೆರೆ ಕಾರ್ಯಕ್ರಮಗಳ ಶೀರ್ಷಿಕೆ ಗೀತೆಗೆ ಅತ್ಯುತ್ತಮ ಸಂಗೀತ, ವರ್ಷದ ಅತ್ಯುತ್ತಮ ಆಲ್ಬಮ್‌ಗಳಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ತೀರ್ಪುಗಾರರು ಪ್ರತಿ ವಿಭಾಗದಲ್ಲೂ ಆಯ್ಕೆ ಮಾಡುವ ಐದು ಮಂದಿಯಲ್ಲಿ ಒಬ್ಬರನ್ನು ವೀಕ್ಷಕರು ಎಸ್‌ಎಂಎಸ್ ಅಥವಾ ಮತದ ಮೂಲಕ ನೇರವಾಗಿ ಆಯ್ಕೆ ಮಾಡಲಿದ್ದಾರೆ.

ವೀಕ್ಷಕರು www.etvsangeetsamman.com  ಜಾಲತಾಣದ ಮೂಲಕ ಸಂದೇಶ ರವಾನಿಸಿ ಅರ್ಹರನ್ನು ಆಯ್ಕೆ ಮಾಡಬಹುದು' ಎಂದು `ವಯಕಾಂ 18' ಹಾಗೂ ಪ್ರಾದೇಶಿಕ ಚಾನೆಲ್‌ಗಳ ವ್ಯವಹಾರಿಕ ಮುಖ್ಯಸ್ಥ, ಕಾರ್ಯನಿರ್ವಾಹಕ ಉಪ ನಿರ್ದೇಶಕ ರವೀಶ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.